
ಯಲ್ಲಾಪುರ: ತಾಲೂಕಿನ ಅರಬೈಲ್ ಹಾಗೂ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಳವಡಿಸಿರುವ ಸೂಚನಾ ಫಲಕಗಳನ್ನು ಲಾರಿ ಚಾಲಕರು ರಸ್ತೆಯಲ್ಲೇ ಕಿತ್ತೆಸೆಯುತ್ತಿದ್ದಾರೆ. ಇದು ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.
ಸದ್ಯ ಆರತಿಬೈಲ್ ಹಾಗೂ ಅರಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟು, ಹೊಂಡ ಗುಂಡಿಗಳು ಉಂಟಾಗಿರುವ ಕಾರಣದಿಂದ ಅಪಘಾತಗಳಾಗುತ್ತಿವೆ. ಇದೀಗ ಸೂಚನಾ ಫಲಕಗಳೂ ಅಪಘಾತಕ್ಕೆ ಕಾರಣವಾಗುತ್ತಿರುವುದು ವಾಹನ ಸವಾರರನ್ನು ಚಿಂತೆಗೀಡು ಮಾಡಿದೆ.
ಘಟ್ಟ ಪ್ರದೇಶದ ಅಪಾಯಕಾರಿ ತಿರುವುಗಳಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಸೂಚನಾ ಫಲಕಗಳನ್ನು ಅಲ್ಲಲ್ಲಿ ಹೆದ್ದಾರಿ ಇಲಾಖೆ ಅಳವಡಿಸಿದೆ. ಲಾರಿಗಳು ಕೆಟ್ಟು ಹೆದ್ದಾರಿಯಲ್ಲಿ ನಿಲ್ಲಬೇಕಾದ ಸ್ಥಿತಿ ಬಂದಾಗ ಲಾರಿ ಚಾಲಕರು, ತಮ್ಮ ವಾಹನಗಳಿಗೆ ಇತರ ವಾಹನಗಳು ಡಿಕ್ಕಿ ಹೊಡೆಯದೇ ಇರಲೆಂದು ಸೂಚನೆ ನೀಡುವುದಕ್ಕಾಗಿ ಲಾರಿಯ ಹಿಂದೆ, ಮುಂದೆ, ಅಕ್ಕ-ಪಕ್ಕದಲ್ಲಿ ಈ ಸೂಚನಾ ಫಲಕಗಳನ್ನೇ ಕಿತ್ತು ಅಡ್ಡಲಾಗಿ ಇಡುತ್ತಿದ್ದಾರೆ.
ವಾಹನ ದುರಸ್ತಿಯಾದ ನಂತರ ಕಿತ್ತು ರಸ್ತೆಯ ಮೇಲೆ ಇಟ್ಟ ಸೂಚನಾ ಫಲಕಗಳನ್ನು ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. ರಸ್ತೆಯ ಮೇಲೆ ಸೂಚನಾ ಫಲಕಗಳಿರುವುದರಿಂದ ಅದು ಅಪಘಾತಕ್ಕೆ ಕಾರಣವಾಗುತ್ತಿದೆ. ಹಲವು ವರ್ಷಗಳಿಂದ ಈ ರೀತಿಯ ಕೃತ್ಯವನ್ನು ಲಾರಿ ಚಾಲಕರು ಮಾಡುತ್ತ ಬಂದಿದ್ದು, ಇತ್ತೀಚಿನ ದಿವಸಗಳಲ್ಲಿ ಇದು ಹೆಚ್ಚುತ್ತಿದೆ.
ಲಾರಿ ಕೆಟ್ಟು ನಿಂತಿರುವ ಕುರಿತು ಇತರ ವಾಹನದವರಿಗೆ ಸೂಚನೆ ನೀಡುವುದಾದಲ್ಲಿ ಮರದ ಟೊಂಗೆಗಳನ್ನೋ, ಕಟ್ಟಿಗೆಗಳನ್ನೋ ಇಡಬಹುದಿತ್ತು. ಅದನ್ನು ಬಿಟ್ಟು ಸೂಚನಾ ಫಲಕಗಳನ್ನೇ ಬುಡಸಮೇತ ಕಿತ್ತು ಅಡ್ಡಲಾಗಿ ಇಡುವ ಬಗೆಗೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇಲಾಖೆಯವರು ಈ ಕುರಿತು ಪೊಲೀಸರ ಗಮನಕ್ಕೂ ತಂದಿದ್ದಾರೆ. ಸೂಚನಾ ಫಲಕ ಕಿತ್ತು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದು, ಶೀಘ್ರ ಕ್ರಮ ಆಗಬೇಕಾಗಿದೆ.
Leave a Comment