ಯಲ್ಲಾಪುರ : ಬೆಳಗಾವಿಯ ಸುವರ್ಣ ಸೌಧದಲ್ಲಿ ಅರಣ್ಯ ಸಚಿವರರಾದ ಉಮೇಶ ಕತ್ತಿ, ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ಧಿ ಹಾಗೂ ಹಳಿಯಾಳ ತಾಲೂಕಿನ ಶಾಸಕರಾದ ಆರ್.ವಿ.ದೇಶಪಾಂಡೆಯವರ ಉಪಸ್ಥಿತಿಯಲ್ಲಿ ಧನಗರ ಗೌಳಿ ಸಮುದಾಯದ ಪ್ರಮುಖರು ಹಾಗೂ ಅರಣ್ಯ ಅಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ, ದನಗರ ಗೌಳಿ ಸಮುದಾಯವು ಸುಮಾರು 150 ವರ್ಷಗಳಿಂದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಹಾವೇರಿ ಬೆಳಗಾವಿ ಶಿವಮೊಗ್ಗ ಚಿಕ್ಕಮಂಗಳೂರು ಧಾರವಾಡ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಪಶುಪಾಲನಾ ಪಾರಂಪರಿಕ ಮುಖ್ಯ ಕಸಬಿನ ಜೊತೆ, ಅರಣ್ಯದೊಳಗೆ ಅರಣ್ಯ ಅವಲಂಬನೆಯಿಂದ ಜೀವನ ಸಾಗಿಸುತ್ತಿದ್ದು, ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದ ಸಮುದಾಯವಾಗಿದೆ. ಅವರ ಜೀವನೋಪಾಯಕ್ಕೆ ಸಾಗುವಳಿ ಮಾಡಿದ ಜಮೀನಿಗೆ ಈವರೆಗೆ ಮಂಜೂರಿ ಕೊಡದೆಯಿರುವದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಇತ್ತಿಚಿಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ ವಲಯ ಅರಣ್ಯದ ವಾಪ್ತಿಯಲ್ಲಿ ಬರುವ ಬಿಮ್ನಳ್ಳಿ, ತಟ್ಟಗೇರಿ, ಅಡಿಕೆಹೊಸುರು, ಬಸವಳ್ಳಿ ಉತಾರದ 163 ಕುಟುಂಬಗಳ ಮೇಲೆ ಈಗಾಗಲೆ ಅರಣ್ಯ ಊರುಗಳಾದ ಇಲಾಖೆಯವರು ಮೊಕದ್ದಮೆ(ಕಸ್) ದಾಖಲಿಸಿರುತ್ತಾರೆ. ಇದರಿಂದ ಈ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಅರಣ್ಯ ಅಧಿಕಾರಿಗಳ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ಆದಕಾರಣ ಈ ಕುಟುಂಬಗಳ ಮೇಲಿನ ಮೊಕದ್ದಮೆಯನ್ನು ವಾಪಸ್ಸು ಪಡೆಯಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿ, ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸಾಗುವಳಿ ಮಾಡಿದ ಜಮೀನು ಮಂಜೂರಿಸಿ ಹಕ್ಕು ನೀಡಬೇಕೆಂದು ಉತ್ತರ ಕನ್ನಡ ಧನಗರ ಗೌಳಿ ಸಮುದಾಯ ಸಮಿತಿ ವತಿಯಿಂದ ಅರಣ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಅರಣ್ಯ ಸಚಿವರು, ಯಾವುದೇ ಕಾರಣಕ್ಕೆ ಅತಿಕ್ರಮಣದಾರರಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ವರ್ತಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸದರು. ಹಾಗೂ ಸಧ್ಯದಲ್ಲಿಯೇ ಈ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣದ ರಾಜ್ಯ ಹಿತರಕ್ಷಾ ಹಾಗೂ ಧನಗರ ಗೌಳಿ ಸಮಾಜದ ಪ್ರಮುಖ ದೊಂಡು ಪಾಟೀಲ, ಮುಂಡಗೋಡ ತಾಲೂಕಿನ ಸಮಾಜದ ಪ್ರಮುಖರಾದ ದೇವು ಪಾಟೀಲ, ಜಿಲ್ಲಾ ಸಮಿತಿಯ ಅಧ್ಯಕ್ಷ ತುಳಸಿದಾಸ ಪಟಕಾರೆ ಉಪಾಧ್ಯಕ್ಷರಾದ ನಾಗು ತೊರತ, ವಿಠ್ಠಲ ಸೆಳಕೆ, ಕಾರ್ಯದರ್ಶಿ ಬಾಬು ಪಾಟೀಲ, ಸಂಘಟನಾಟ ಕಾರ್ಯದರ್ಶಿ ಲಕ್ಷ್ಮಣ್ ಲಾಂಬೊರ, ಧಾರವಾಡ ಜಿಲ್ಲಾ ಕಾರ್ಯದರ್ಶಿ ಸಿದ್ದು ಲಾಂಬೊರ, ಯಲ್ಲಾಪುರ ಅಧ್ಯಕ್ಷ ವಿಠ್ಠಲ ಪಾಂಡ್ರಮಿಸೆ, ಹಳಿಯಾಳ ತಾಲೂಕಿನ ಅಧ್ಯಕ್ಷ ಬಮ್ಮು ಎಡಗೆ, ಜೋಯಿಡಾ ತಾಲೂಕ ಕಾರ್ಯದರ್ಶಿ ಸೊನು ಹಾಗೂ ನಾಗನೂರು ಪಂಚಾಯತಿಯ ಅಧ್ಯಕ್ಷ ಸುನಿಲ್ ಸೆಳಕೆ, ಹಳಿಯಾಳ ತಾಲೂಕಿನ ಅತಿಕ್ರಮಣದಾರರು ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.
Leave a Comment