ಹೊನ್ನಾವರ ಪಟ್ಟಣದಲ್ಲಿ 5.20 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು ನಂತರ ಮಾತನಾಡಿ ಸಿಬ್ಬಂದಿಗಳ ಬಹು ವರ್ಷದ ಬೇಡಿಕೆಯಾದ ವೇತನ ಪರಿಷ್ಕರಣೆ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿ ಬಳಿ ಚರ್ಚಿಸಿ ಪರಿಷ್ಕರಣೆ ಮಾರ್ಗಸೂಚಿ ಹೊರಡಿಸಿ ಆರ್ಥಿಕ ಇಲಾಖೆ ಅನುಮತಿ ಪಡೆಯಲಾಗುವುದು ಎಂದರು.
ಹಳೆಯ ಸಾವಿರಾರು ಬಸ್ಗಳನ್ನು ಗುಜರಿಗೆ ಹಾಕುವ ಸ್ಥಿತಿ ಇದೆ. ಈ ಕಾರಣದಿಂದಾಗಿ 4 ಸಾವಿರ ಬಸ್ಗಳನ್ನು ಖರೀದಿಸಲಿದ್ದು, ಇದರಲ್ಲಿ ಪ್ರಯಾಣಿಕರ ಹಿತ ದೃಷ್ಟಿಯಿಂದ ಜಿಲ್ಲೆಗೆ ಒಂದು ಭಾಗದಷ್ಟು ನೂತನ ಬಸ್ಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ಮುಷ್ಕರ ಸಂದರ್ಭದಲ್ಲಿ ವರ್ಗಾವಣೆಯಾದ ಸಿಬ್ಬಂಧಿಯನ್ನು ಮಾತೃಸಂಸ್ಥೆಗೆ ಕಳುಹಿಸುವುದು ಮತ್ತು ಮುಷ್ಕರದಲ್ಲಿ ಪಾಲ್ಗೊಂಡು ಅಮಾನತು ಆದ ಸಿಬ್ಬಂದಿಗಳನ್ನು ಮರು ನೇಮಕ ಮಾಡುವ ಜೊತೆಗೆ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವ ಗುರಿ ಹೊಂದಲಾಗಿದೆ.
ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಲಾಭದಾಯಕವಾಗಿ ಮುನ್ನಡೆಸಲು ಯತ್ನಿಸಲಾಗುವುದು. ಸಾರಿಗೆ ಸಂಸ್ಥೆ ಬಹಳ ನಷ್ಟದಲ್ಲಿರುವುದರಿಂದ ಸಿಬ್ಬಂದಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ 3 ಸಾವಿರ ಕೋಟಿ ಅನುದಾನ ಪಡೆದು ಸಂಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಾಮೀಣ ಭಾಗಗಳಿಗೆ ಬಸ್ ಸಂಚರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಭಟ್ಕಳ ಬಸ್ ನಿಲ್ದಾಣದ ಮುಂದುವರಿದ ಕಾಮಗಾರಿಗೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಮುಂದಿನ ತಿಂಗಳಿನಲ್ಲಿ ಲೋಕಾರ್ಪಣೆಗೆ ಆಗಮಿಸುತ್ತೇನೆ ಎಂದು ಸ್ಥಳೀಯ ಶಾಸಕರಿಗೆ ಭರವಸೆ ನೀಡಿದರು.
ಹೊನ್ನಾವರ ಬಸ್ ನಿಲ್ದಾಣದ ಗಟಾರ ಅಸಮರ್ಪಕತೆಯಿಂದ ಆವರಣದಲ್ಲಿ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ಶಾಸಕರು ನನ್ನ ಗಮನಕ್ಕೆ ತಂದಿದ್ದು ಈ ಬಗ್ಗೆ ಹೆಚ್ಚುವರಿಯಾಗಿ 1 ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದ ಬಸ್ ನಿಲ್ದಾಣಗಳಲ್ಲಿ ಹೈಟೆಕ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಅನುಕೂಲಕವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆ ಕರಾವಳಿ, ಗುಡ್ಡಗಾಡು, ಸಮುದ್ರ ತೀರ ಸೇರಿದಂತೆ ವಿವಿಧ ಭಾಗ ಒಳಗೊಂಡಿದೆ. ಅದಕ್ಕಾಗಿ ಬಸ್ ಬಹುಬೇಗನೇ ಹಾಳಾಗಲಿದ್ದು, ನೂತನ ಬಸ್ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ಅದರಲ್ಲಿಯೂ ಹೊನ್ನಾವರಕ್ಕೆ ನೀಡುವಂತೆ ಮನವಿ ಮಾಡಿದರು. ಸಾರಿಗೆ ಇಲಾಖೆಯ ಬಸ್ ನಿಲ್ದಾಣದ ಜೊತೆಗೆ, ಕುಮಟಾ ಘಟಕ, ಎ.ಆರ್.ಟಿ.ಓ ಕಛೇರಿ ನಿರ್ಮಾಣದ ಸಮಸ್ಯೆ ಬಗೆಹರಿದಿದೆ. ಇದು ಹೈಟೆಕ್ ಬಸ್ ನಿಲ್ದಾಣವಾಗಿ ಬಸ್ ನಿಲ್ದಾಣ ಆಗುವವರೆಗೆ ಇಲ್ಲಿಯ ಜನತೆ ಯಾವುದೇ ಪ್ರತಿಭಟನೆ ಅಥವಾ ವಿರೋಧ ವ್ಯಕ್ತಪಡಿಸದೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಆರ್ಟಿಒ ಅಚೇರಿಗೂ ಅನುದಾನ ಮಂಜೂರಿ ಆಗಿದ್ದು, ಅದು ಹೊನ್ನಾವರದಲ್ಲೇ ನಿರ್ಮಾಣವಾಗಲಿದೆ ಎಂದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ, ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಹೊನ್ನಾವರಕ್ಕೆ ತೀರಾ ಅಗತ್ಯವಿರುವ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಕೆಲವರು ಬಿಜೆಪಿ ಸರ್ಕಾರದಲ್ಲಿ ಏನೂ ಕೆಲಸವಾಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ನಡೆವೆಯೂ ನಮ್ಮ ಅವಧಿಯಲ್ಲಿಯೇ ಎಲ್ಲಾ ಸಚಿವರು, ಮುಖ್ಯಮಂತ್ರಿಗಳೂ ಸಹ ಜಿಲ್ಲೆಗೆ ಆಗಮಿಸಿ ಜನರ ಸಮಸ್ಯೆ ಅಲಿಸಿರುವುದು ವಿಶೇಷ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಜನತೆ ಒರ್ವ ಸಚೀವರ ಮುಖ ಮಾತು ಕಾಣುತ್ತಿದ್ದರು, ಆ ಸಚಿವರೆಂದರೆ ಆರ್, ವಿ ದೇಶಪಾಂಡೆಯವರ ಮುಖ ಪರಿಚಯ ಮಾತ್ರ ಜಿಲ್ಲೆಯ ಜನರಿಗೆ ಆಗಿತ್ತು. ಈ ಹಿಂದೆ ಅಭಿವೃದ್ಧಿ ಎನ್ನುವುದು ಬ್ಯಾನರ್ಗಳಲ್ಲಿ ಮಾತ್ರ ರಾರಾಜಿಸುತ್ತಿದ್ದವು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ದಿ ಎನ್ನುವುದು ಜನರ ಬಾಯಿಯಿಂದಲೇ ಕೇಳುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ರಾದಾ ಉದಯ ಶೆಟ್ಟಿ ಹಾಗೂ ರೋಹಿತ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ ಎನ್ಡಬ್ಲ್ಯು ಕೆಎಸ್ಆರ್ಟಿಸಿ ಅಧ್ಯಕ್ಷ ವಿ.ಎಸ್.ಪಾಟೀಲ್, ಎನ್ಡಬ್ಲ್ಯು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ರಾಜಕುಮಾರ್, ಪಪಂ ಅಧ್ಯಕ್ಷ ಶಿವರಾಜ ಮೇಸ್ತ, ಪಪಂ ಉಪಾಧ್ಯಕ್ಷೆ ನೀಶಾ ಶೇಟ್, ತಹಸೀಲ್ದಾರ್ ನಾಗರಾಜ ನಾಯ್ಕಡ್, ತಾಪಂ ಇಒ ಸುರೇಶ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್, ನಾಗರಾಜ ನಾಯ್ಕ ತೊರ್ಕೆ ಇತರರು ಇದ್ದರು.
Leave a Comment