
ಯಲ್ಲಾಪುರ: ಕಲೆಯಿಂದ ಸಾಕಷ್ಟು ಪ್ರಯೋಜನ ಪಡೆಯುವ ಕಲಾವಿದರು, ಕಲೆಗೆ ತನ್ನಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬುದನ್ನು ಚಿಂತಿಸಿ, ಆ ಬಗೆಗೆ ಕಾರ್ಯೋನ್ಮುಖರಾಗಬೇಕು ಎಂದು ವಿದ್ವಾನ್ ಗಣಪತಿ ಭಟ್ಟ ಹೇಳಿದರು.
ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ಭಾಗವತ ಅನಂತ ಹೆಗಡೆ ದಂತಳಿಗೆಯವರು ರಚಿಸಿದ ಶ್ರೀರಾಮ ದರ್ಶನ ಹಾಗೂ ಪುರುಷಮೃಗ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ ಕಾರ್ಯಕ್ರಮೆ ಉದ್ಘಾಟಿಸಿ ಮಾತನಾಡಿದರು. ಪ್ರಸಂಗ ರಚನೆಯ ಮೂಲಕ ಕಲೆಯ ಸೇವೆ ಮಾಡಿದ ಅನಂತ ಹೆಗಡೆ ಅವರ ಕಾರ್ಯ ಇತರ ಕಲಾವಿದರಿಗೆ ಆದರ್ಶವಾಗಲಿ ಎಂದರು.
ಯಕ್ಷಗುರು ಎ.ಪಿ.ಪಾಠಕ್ ಅವರು ಪ್ರಸಂಗಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ , 6-7 ಶತಮಾನಗಳ ಹಿಂದಿನಿಂದ ಇರುವ ಸಾವಿರಾರು ಯಕ್ಷಗಾನ ಪ್ರಸಂಗಗಳು ರಾಮಾಯಣ, ಮಹಾಭಾರತ, ಭಾಗವತ, ಪುರಾಣದ ಕಥೆಗಳನ್ನು ಸಾರುತ್ತಿವೆ. ಅನಂತ ಹೆಗಡೆ ಅವರಿಂದ ಇನ್ನೂ ಹೆಚ್ಚು ಯಕ್ಷಗಾನ ಪ್ರಸಂಗಗಳು ರಚನೆಯಾಗಲಿ ಎಂದರು.
ಕೃತಿಕಾರ ಅನಂತ ಹೆಗಡೆ ದಂತಳಿಗೆ ಅವರು ಪ್ರಸಂಗಗಳನ್ನು ತಂದೆ ತಾಯಿಯರಿಗೆ ಅರ್ಪಿಸಿ ಗೌರವಿಸಿದರು. ಪ್ರಸಂಗ ರಚನೆಯ ಹಿನ್ನೆಲೆ ಹಾಗೂ ಯಕ್ಷಗಾನ ಭಾಗವತನಾಗಿ ರೂಪುಗೊಳ್ಳಿವಲ್ಲಿ ಮಾರ್ಗದರ್ಶನ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಇಡಗುಂಜಿ ಮೇಳದ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ಅಧ್ಯಕ್ಷತೆ ವಹಿಸಿದ್ದರು. ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಗೋಳಿಕೊಪ್ಪ, ಶಾರದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಇತರರಿದ್ದರು. ವಿಶ್ವದರ್ಶನ ಪಿ.ಯು.ಕಾಲೇಜ್ ಪ್ರಾಂಶುಪಾಲ ಡಾ. ಡಿ.ಕೆ.ಗಾಂವ್ಕರ ಪ್ರಸಂಗಗಳನ್ನು ಪರಿಚಯಿಸಿದರು. ಕಲಾವಿದ ಸತೀಶ ಯಲ್ಲಾಪುರ, ನಾಗರಾಜ ಹೆಗಡೆ ಹೊನ್ನಾವರ, ವಿದ್ವಾನ್ ಗಂಗಾಧರ ಬೋಡೆ ನಿರ್ವಹಿಸಿದರು. ಸ್ಥಳೀಯ ಕಲಾವಿದರಿಂದ ಯಕ್ಷಗಾಯನ ವೈವಿಧ್ಯ ಹಾಗೂ ಪ್ರಸಿದ್ಧ ಕಲಾವಿದರಿಂದ ಪುರುಷಮೃಗ ತಾಳಮದ್ದಲೆ ನಡೆಯಿತು.
Leave a Comment