ಹಳಿಯಾಳ : ತಾಲೂಕು ಕಾನೂನು ಸೇವಾ ಸಮಿತಿ ಹಳಿಯಾಳ ನ್ಯಾಯವಾದಿಗಳ ಸಂಘ, ಅಭಿಯೋಜನೆ ಇಲಾಖೆ, ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಆಸ್ಪತ್ರೆ ಹಳಿಯಾಳದ ಸಭಾಭವನದಲ್ಲಿ ದಿನಾಂಕ 10-10-2022 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನಾಗಮ್ಮ ಇಚ್ಚಂಗಿ ರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಮಾಡಿದರು.
ಉದ್ಘಾಟನಾ ಭಾಷಣವನ್ನು ಮಾಡುತ್ತಾ ಮನುಷ್ಯ ಕೇವಲ ದೈಹಿಕವಾಗಿ ಅಲ್ಲ ಮಾನಸಿಕವಾಗಿಯೂ ಆರೋಗ್ಯದಿಂದ ಇರುವುದು ಬಹಳ ಮುಖ್ಯವಾಗಿದ್ದು ಅದನ್ನು ನಾವೆಲ್ಲರೂ ಕಾಪಾಡಿಕೊಂಡು ಹೋಗಬೇಕು ಎಂದರು. ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ್ದ ವಕೀಲರಾದ ಮಂಜುನಾಥ ಮಾದಾರ ರವರು ಭಾರತೀಯ ಮಾನಸಿಕ ಆರೋಗ್ಯ ಕಾಯ್ದೆ 1987 ಇದರ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದರು.
ಮಾನಸಿಕ ಅಸ್ವಸ್ಥರಿಗೆ ಇರುವಂತಹ ಹಕ್ಕುಗಳನ್ನು ಮತ್ತು ಅವರಿಗಾಗಿ ಸಮಾಜದವರು ಮಾಡುವ ಕರ್ತವ್ಯಗಳನ್ನು ವಿವರಿಸಿದರು. ಟಿ ಎಚ್ ಓ ಮಂಜುನಾಥ ಆರ್ ರವರು ವಿಡಿಯೋ ತುಣುಕುಗಳ ಮೂಲಕ ಮಾನಸಿಕ ಅಸ್ವಸ್ಥತೆ ಎಂದರೇನು ಮತ್ತು ಅದರ ಲಕ್ಷಣಗಳನ್ನು ಮತ್ತು ಅದಕ್ಕೆ ಇರುವ ಪರಿಹಾರಗಳನ್ನು ವಿಡಿಯೋ ತುಣುಕುಗಳ ಮೂಲಕ ಸುಂದರವಾಗಿ ವಿವರಣೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವೈದ್ಯಾಧಿಕಾರಿ ರಮೇಶ ಕದಂ ಮಾತನಾಡಿ ಮಾನಸಿಕ ರೋಗದ ಬಗ್ಗೆ ಆಳವಾಗಿ ತಿಳಿಸಿ ಅದು ಇಂದಿನ ದಿನಗಳಲ್ಲಿ ಯಾವ ರೀತಿ ಉಂಟಾಗುತ್ತಿದೆ ಎಂಬುದುರ ಸಂಪೂರ್ಣ ವಿವರವನ್ನು ತಿಳಿಸಿದರು. ವಕೀಲ ಸಂಘದ ಅಧ್ಯಕ್ಷ ಎಂ.ವಿ ಅಷ್ಟೇಕರ ಮಾತನಾಡಿ ಸಾಮಾನ್ಯ ಜೀವನದಲ್ಲಿ ಯಾವ ರೀತಿ ಮಾನಸಿಕ ರೋಗದಿಂದ ದೂರವಿರಬಹುದು ಎಂಬುದನ್ನು ತಮ್ಮ ಹಾಸ್ಯಭರಿತ ಧಾಟಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ಅಜಿತ ಜನ ಗೌಡ, ವಕೀಲರಾದ ರೇಣುಕಾ ಚೌಗಲೇ, ಗಣೇಶ ಕೊಂಡೆ, ಸಂಕೇತ ಬಾಂದುರ್ಗಿ, ವೈದ್ಯರು, ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ನಾರಾಯಣ ಕೊಳಂಬಿ, ಶಂಬಾಜಿ ಹಾಗೂ ನಾಗರಿಕರು ಪಾಲ್ಗೊಂಡಿದ್ದರು.
ಹಳಿಯಾಳ
ವರದಿ : ಮಂಜುನಾಥ. ಹ. ಮಾದಾರ
10-10-2022
Leave a Comment