ಹೊನ್ನಾವರ:
ಸರ್ಕಾರದಿಂದ ಶಾಲಾ ಮಕ್ಕಳಿಗೆ ಪೌಷ್ಠಿಕವಾದ ಹಾಲು ವಿತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಹಾಲು ವಿತರಿಸಲು ಲೋಟಗಳ ಕೊರತೆ ಅಲ್ಲಲ್ಲಿ ಕಂಡುಬಂದಿದೆ. ಲೋಟಗಳ ಕೊರತೆ ನಿವಾರಿಸುವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾತ ನಗರ ಹೊನ್ನಾವರ ಇಲ್ಲಿಂದ ಬೇಡಿಕೆ ಬಂದಿರುವುದರಿಂದ ಸ್ವ ಖರ್ಚಿನಿಂದ ಲೋಟಗಳನ್ನು ಪೂರೈಸುತ್ತಿದ್ದೇನೆ, ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.
ಹೊನ್ನಾವರ ಪ್ರಭಾತ ನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೋಟಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೊದಲ ಹಂತದಲ್ಲಿ ಹಳದಿಪುರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸದ್ಯದಲ್ಲಿಯೇ ಹಾಲು ವಿತರಿಸಲು ಕೊರತೆ ಇರುವಷ್ಟು ಲೋಟಗಳನ್ನು ವಿತರಿಸುವುದಾಗಿ ತಿಳಿಸಿದರು. ಸರ್ಕಾರದ ಯೋಜನೆಗಳು ಸದುಪಯೋಗಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಹೊನ್ನಾವರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ಭಟ್ಟ ಮತ್ತು ಎಲ್ಲಾ ಅಧಿಕಾರಿ ವರ್ಗದವರು ಹಾಗೂ ಉತ್ತಮ ಶಿಕ್ಷಕ ವೃಂದ ಇರುವುದು ಕಾರಣವಾಗಿದೆ ಎಂದರು.
ಕೆ.ಪಿ.ಸಿ.ಸಿ ಸದಸ್ಯರಾದ ವಿನೋದ ನಾಯ್ಕ ಕರ್ಕಿ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಸಮಯ ಸಿಗಲಿದೆ. ಇದರಿಂದ ವಿದ್ಯಾರ್ಥಿಗಳ ಪ್ರತಿಭೆ ಹೆಚ್ಚಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗೋಪಾಲಕೃಷ್ಣ ಭಟ್ಟ ಮಾತನಾಡಿ ಹೊನ್ನಾವರದಲ್ಲಿ ದಾನಿಗಳ ಸಹಕಾರದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಾಲೆಗಳಲ್ಲಿ ಹಲವು ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಇತರ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಸಹಕಾರದೊಂದಿಗೆ ಬಗೆಹರಿಸಲಾಗುವುದು ಎಂದರು.
ಬಿ.ಆರ್.ಸಿ ಸಮನ್ವಯಾಧಿಕಾರಿ ಜಿ.ಎಸ್.ನಾಯ್ಕ ಮಾತನಾಡಿ ಶಿವಾನಂದ ಹೆಗಡೆಯವರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಅಗತ್ಯವಿರುವ ಶಾಲೆಗಳಿಗೂ ವಿಸ್ತರಿಸಿದರೆ ಉತ್ತಮ ಎಂದರು.
ಶಾಲಾ ಮುಖ್ಯಾಧ್ಯಾಪಕರಾದ ಟಿ.ಕೆ.ಹೆಗಡೆ ಮಾತನಾಡಿ ನಮ್ಮ ಬೇಡಿಕೆಯನ್ನು ಶಿವಾನಂದ ಹೆಗಡೆಯವರು ತಕ್ಷಣ ಪರಿಹರಿಸಿದ್ದಾರೆ. ಅವರಿಗೆ ನಮ್ಮ ಶಾಲೆಯ ವತಿಯಿಂದ ಅಭಿನಂದಿಸುತ್ತೇವೆ ಎಂದರು.
ತಾಲೂಕಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಮತ್ತು ಸಹ ಶಿಕ್ಷಕಿಯಾದ ಕಲ್ಪನಾ ಹೆಗಡೆ ಎಲ್ಲರನ್ನೂ ಸ್ವಾಗತಿಸಿ ನಮ್ಮ ಶಾಲೆಯಲ್ಲಿ ಕೇವಲ ಹದಿನೈದು ಲೋಟಗಳಿದ್ದು 115 ವಿದ್ಯಾರ್ಥಿಗಳಿದ್ದಾರೆ. ಇದರಿಂದಾಗಿ ಹಾಲು ವಿತರಿಸಲು ತೊಂದರೆಯಾಗಿದ್ದು ಲೋಟಗಳನ್ನು ಪೂರೈಸುವಂತೆ ಶಿವಾನಂದ ಹೆಗಡೆಯವರಿಗೆ ಮನವಿ ಮಾಡಲಾಗಿತ್ತು, ಎಂದರಲ್ಲದೆ ಲೋಟಗಳನ್ನು ಪೂರೈಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸಂಜಯ್ ಭಟ್ಟ, ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ರವೀಂದ್ರ ನಾಯ್ಕ, ಹೊನ್ನಾವರ ಬಿ.ಸಿ.ಸಿ. ಹಿಂದುಳಿದ ವರ್ಗದ ಸೆಲ್ ಅಧ್ಯಕ್ಷ ಹುಲಿಯಣ್ಣ ಗೌಡ, ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ಬಾಲಚಂದ್ರ ನಾಯ್ಕ, ಸಿ.ಆರ್.ಪಿ ಸುಜಾತಾ ನಾಯ್ಕ, ಬಾಲಚಂದ್ರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
Leave a Comment