ಕಾರವಾರ:
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯು ಜಿಲ್ಲೆಯ 7 ಕೇಂದ್ರಗಳಲ್ಲಿ ಮಂಗಳವಾರ ಸುಗಮವಾಗಿ ನಡೆಯಿತು.
ಬೆಳಿಗ್ಗೆ 10.30 ರಿಂದ 11.50 ರವರೆಗೆ ನಡೆದ ಜೀವವಿಜ್ಞಾನ ವಿಷಯದ ಪರೀಕ್ಷೆಗೆ ನೋಂದಾಯಿತ 3,086 ವಿದ್ಯಾರ್ಥಿಗಳಲ್ಲಿ 2,267 ಮಂದಿ ಹಾಜರಾಗಿದ್ದು, 819 ಮಂದಿ ಗೈರು ಹಾಜರಾಗಿದ್ದರು. ಮಧ್ಯಾಹ್ನ ನಡೆದ ಗಣಿತ ವಿಷಯದ ಪರೀಕ್ಷೆಯಲ್ಲಿ ನೋಂದಾಯಿತ 3,086 ವಿದ್ಯಾರ್ಥಿಗಳ ಪೈಕಿ 3,028 ಮಂದಿ ಹಾಜರಿದ್ದು, 58 ಮಂದಿ ಗೈರಾಗಿದ್ದರು.
ಜಿಲ್ಲೆಯ ಕಾರವಾರ ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು, ಚಿತ್ತಾಕುಲದ ಶಿವಾಜಿ ಪದವಿಪೂರ್ವ ಕಾಲೇಜು, ಕುಮಟಾದ ಡಾ.ಎವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಪದವಿಪೂರ್ವ ಕಾಲೇಜು, ಡಾ.ಎವಿ.ಬಾಳಿಗಾ ವಾಣಿಜ್ಯ ಪದವಿಪೂರ್ವ ಕಾಲೇಜು, ಶಿರಸಿಯ ಎಂ.ಇ.ಎಸ್ ಪದವಿಪೂರ್ವ ಕಾಲೇಜು, ಶ್ರೀಮಾರಿಕಾಂಬಾ ಪದವಿಪೂರ್ವ ಕಾಲೇಜು ಹಾಗೂ ದಾಂಡೇಲಿಯ ಬರಗೂರುನಗರ ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರವನ್ನು ತೆರಯಲಾಗಿತ್ತು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಟಿ.ಭಟ್ ಬೆಳಿಗ್ಗೆ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಕೇಂದ್ರಗಳಲ್ಲಿ ವೀಕ್ಷಕರು, ವಿಶೇಷ ಜಾಗೃತ ದಳದ ಸದಸ್ಯರು, ಕೊಠಡಿ ಮೇಲ್ವಿಚಾರಕರು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ಕಾರ್ಯನಿರ್ವಹಿಸಿದರು.
Leave a Comment