ಭಟ್ಕಳ:
ಅಂಗವಿಕಲೆಯೋರ್ವಳಿಗೆ ಕೃತಕ ಕಾಲು ಜೋಡಿಸಿಕೊಳ್ಳುವಲ್ಲಿ ಶಾಸಕ ಮಂಕಾಳ ವೈದ್ಯ ನೆರವಾಗಿದ್ದು ಇಂದು ಎಲ್ಲರಂತೆಯೇ ಅವಳು ಓಡಾಡಿಕೊಂಡಿದ್ದಾಳೆ.
ಶಿರಾಲಿಯ ನಿವಾಸಿಯಾಗಿರುವ ಸುಮಾರಿಯಾ ಇಸೋಪ ಸಾಹೇಬ್ ಇವಳು ಎರಡೂ ಕಾಲಿಲ್ಲದೇ ಶಾಶ್ವತವಾಗಿ ಅಂಗವಿಕಲೆಯಾಗಿದ್ದಳು. ಆದರೂ ತನ್ನ ಛಲಬಿಡದೇ ಪದವಿಯನ್ನು ಪೂರೈಸಿ, ತಾನೂ ಸಹ ಇತರರಂತೆ ನಡೆದಾಡಬೇಕು ಎನ್ನುವ ಹಂಬಲ ಹೊಂದಿದವಳು. ಕೃತಕ ಕಾಲು ಜೋಡಿಸಿಕೊಳ್ಳಲು 4.5 ಲಕ್ಷ ರೂಪಾಯಿ ಬೇಕೆಂದು ತಿಳಿದಾಗ ತಮ್ಮಿಂದ ಕಷ್ಟಸಾಧ್ಯ ಎನ್ನುವುದು ಕುಟುಂಬಿಕರ ಅಭಿಪ್ರಾಯವಾಗಿತ್ತು. ಆದರೆ ಛಲ ಬಿಡದ ಈಕೆ ಹಿರಿಯರೊಂದಿಗೆ ಶಾಸಕ ಮಂಕಾಳ ವೈದ್ಯ ಅವರಲ್ಲಿ ಮನವಿ ಮಾಡಿಕೊಂಡರು.
ಅಂಗವಿಕಲೆಯಾದರೂ ಕೂಡಾ ಸುಮ್ಮನೆ ಕೂರದೇ ಪದವಿಯನ್ನು ಪೂರೈಸಿದ ಆಕೆಯ ಛಲವನ್ನು ಮನಗಂಡ ಶಾಸಕರು ಕೃತಕ ಕಾಲು ಜೋಡಣೆಯ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಕೊಡಿಸುವಲ್ಲಿ ಯಶಸ್ವೀಯಾಗಿದ್ದಾರೆ. ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನಿಂದ 10 ಸಾವಿರ ರೂಪಾಯಿ, ಜನತಾ ಪತ್ತಿನ ಸಹಕಾರಿ ಸಂಘದಿಂದ 10 ಸಾವಿರ ರೂಪಾಯಿಗಳನ್ನು ಕೊಡಿಸಿದ್ದಲ್ಲದೇ ತಾವೂ ಕೂಡಾ ವಯಕ್ತಿಕವಾಗಿ ನೆರವು ನೀಡಿ ಆಕೆಗೆ ಎರಡು ಕೃತಕ ಕಾಲು ಜೋಡಿಸಿಕೊಳ್ಳುವಲ್ಲಿ ನೆರವಾಗಿ ಮಾನವೀಯತೆಯನ್ನು ಮೆರೆದಿದ್ದಾರೆ.
Leave a Comment