ಭಟ್ಕಳ:
ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ಕೂಲಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ನಮ್ಮ ಹೊಣೆ ಎನ್ನುವ ಕಾರ್ಯಕ್ರಮವನ್ನು ಸಿ.ಐ.ಟಿ.ಯು. ಭಟ್ಕಳದ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಶಿರಾಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಿ.ಐ.ಟಿ.ಯು. ರಾಜ್ಯ ಸಮಿತಿ ಸದಸ್ಯೆ ಗೀತಾ ನಾಯ್ಕ ಮಾತನಾಡಿ ಇಂದು ಕೇಂದ್ರ ಸರಕಾರ 44 ಕೇಂದ್ರ ಕಾರ್ಮಿಕ ಕಾನೂನನ್ನು ಸರಳೀಕರಿಸುವ ನೆಪದಲ್ಲಿ ಕಾರ್ಪೋರೇಟ್ ಬಂಡವಾಳಶಾಹಿ ಪರ ಕಾರ್ಮಿಕರ ವಿರುದ್ಧ ನೀತಿ ಮಾಡಲು ಹೊರಟಿದೆ ಎಂದು ಹೇಳಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ ತೀರ್ಪನ್ನು ಜ್ಯಾರಿ ಮಾಡಲು ಒತ್ತಾಯಿಸಿ ಸಿ.ಐ.ಟಿ.ಯು. ಒಳಗೊಂಡಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಬೃಹತ್ ಚಳವಳಿಯನ್ನು ನಡೆಸಲು ತೀರ್ಮಾನಿಸಿವೆ ಎಂದೂ ಹೇಳಿದರು.
ಅಂಗನವಾಡಿ ನೌಕರರು ಐತಿಹಾಸಿಕ ಚಳುವಳಿ ಕರ್ನಾಟಕದಲ್ಲಿ ನಡೆಸಿದ್ದು ಇದೇ ಮಾದರಿಯಲ್ಲಿ ಬಿಸಿಯೂಟ, ಆಶಾ ನೌಕರರು ಸಮರಧೀರ ಚಳುವಳಿ ನಡೆಸಲಿದ್ದು ಸೆಪ್ಟಂಬರ್ 14 ರಂದು 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಿ.ಐ.ಟಿ.ಯು. ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಐ.ಟಿ.ಯು. ತಾಲೂಕಾ ಸಮಿತಿ ಅಧ್ಯಕ್ಷ ಮಾಸ್ತಿ ನಾಯ್ಕ ವಹಿಸಿದ್ದರು.
ಸಿ.ಐ.ಟಿ.ಯು. ಮುಖಂಡ ರಾಮಚಂದ್ರ ನಾಯ್ಕ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿ ಸುಭಾಶ ಕೊಪ್ಪಿಕರ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೇತ್ರಾವತಿ ನಾಯ್ಕ, ಗಜೇಂದ್ರ ಶಿರಾಲಿ, ಶ್ರೀಧರ ನಾಯಕ, ಪುಷ್ಪಾವತಿ ನಾಯಕ, ಕವಿತಾ ನಾಯ್ಕ, ಕೋಮಲಾ ದೇವಡಿಗ, ಮಮತಾ ನಾಯ್ಕ, ಚಂದ್ರಕಲಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Leave a Comment