ಕಾರವಾರ:
ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸರ್ಕಾರಿ ಕೆರೆಗಳ ಒತ್ತುವರಿ ಕಾರ್ಯಾಚರಣೆ ತೀವ್ರಗೊಂಡಿದ್ದು ಇದುವರೆಗೆ ಒಟ್ಟು 62ಕೆರೆಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ 25ಎಕರೆ 21ಗುಂಟೆ ಕೆರೆ ಜಾಗವನ್ನು ಜಿಲ್ಲಾಡಳಿತ ಸುಪರ್ದಿಗೆ ಪಡೆದುಕೊಂಡಿದೆ.
ಸರ್ಕಾರಿ ಕೆರೆಗಳ ಮೋಜಣಿ ಕಾರ್ಯವನ್ನು ಪೂರ್ಣಗೊಳಿಸಿ, ಸುತ್ತಲೂ ಗಡಿಯನ್ನು ನಿಗದಿಪಡಿಸಿ, ಅತಿಕ್ರಮಣವಾಗಿದ್ದರೆ ಅದನ್ನು ತಕ್ಷಣ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಎಲ್ಲಾ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರಂತೆ ಎಲ್ಲಾ ತಾಲೂಕುಗಳಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 2085ಸರ್ಕಾರಿ ಕೆರೆಗಳನ್ನು ಗುರುತಿಸಲಾಗಿದ್ದು, 5315ಎಕ್ರೆ ಕ್ಷೇತ್ರ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಒಂದು ಎಕ್ರೆಗಿಂತ ಹೆಚ್ಚಿನ ವಿಸ್ತೀರ್ಣದ 911 ಕೆರೆಗಳು ಇದ್ದು 4555 ಎಕ್ರೆ ವಿಸ್ತೀರ್ಣ ಹೊಂದಿದೆ. ಇವುಗಳ ಪೈಕಿ 542ಕೆರೆಗಳ ಮೋಜಣಿ ಕಾರ್ಯ ಪೂರ್ಣಗೊಂಡಿದ್ದು 182ಕೆರೆಗಳಲ್ಲಿ ಒತ್ತುವರಿ ಗುರುತಿಸಲಾಗಿದೆ. ಒತ್ತುವರಿಯಾದ ಕೆರೆಗಳ ವ್ಯಾಪ್ತಿ 104ಎಕ್ರೆ ಪ್ರದೇಶವಿದೆ. ಪ್ರಸ್ತುತ ಈ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಥಮ ಹಂತದಲ್ಲಿ ಕೈಗೊಳ್ಳಲಾಗುತ್ತಿದ್ದು, 27ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು 20ಎಕ್ರೆ ಕೆರೆ ಜಮೀನು ಸುಪರ್ದಿಗೆ ಪಡೆಯಲಾಗಿದೆ. ಒಟ್ಟು 452ಕೆರೆಗಳಿಗೆ ಗಡಿ ಕಲ್ಲುಗಳನ್ನು ಹಾಕಿ ಸಂರಕ್ಷಿಸಲಾಗಿದೆ.
ಇದೇ ರೀತಿ ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣವಿರುವ 1023ಕೆರೆಗಳಿದ್ದು, 307ಎಕ್ರೆ ವಿಸ್ತೀರ್ಣ ಹೊಂದಿದೆ. ಇವುಗಳ ಪೈಕಿ 521ಕೆರೆಗಳ ಮೋಜಣಿ ಕಾರ್ಯ ಪೂರ್ಣಗೊಳಿಸಲಾಗಿದ್ದು, 200ಎಕ್ರೆ ವಿಸ್ತೀರ್ಣ ಗುರುತಿಸಲಾಗಿದೆ. ಈ ಸಣ್ಣ ಕೆರೆಗಳ ಪೈಕಿ 109ಕೆರೆಗಳಲ್ಲಿ ಒತ್ತುವರಿ ಕಂಡು ಬಂದಿದ್ದು, 16.36ಎಕ್ರೆ ಪ್ರದೇಶ ಒತ್ತುವರಿಯಾಗಿದೆ. ಇವುಗಳ ಪೈಕಿ ಇದುವರೆಗೆ 35ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಿ 5ಎಕ್ರೆ ಪ್ರದೇಶವನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ.
* ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ:
ಸರ್ಕಾರಿ ಕೆರೆಗಳ ಮೋಜಣಿ ಕಾರ್ಯವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಒತ್ತುವರಿ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಅದನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕು. ಕೆರೆ ಒತ್ತುವರಿ ತೆರವುಗೊಳಿಸಿದ ಬಳಿಕ ಕೆರೆಯ ಜಮೀನಿನ ಸುತ್ತಲೂ ಗಡಿ ನಿಗದಿಪಡಿಸಿ ಗುರುತು ಮಾಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಕೆರೆಗಳನ್ನು ಒತ್ತುವರಿ ಮಾಡಲು ಯಾರಿಗೂ ಅವಕಾಶ ನೀಡಬಾರದು. ಕೆರೆಗಳ ಹೂಳೆತ್ತುವ, ಅಭಿವೃದ್ಧಿಪಡಿಸುವ ಕಾರ್ಯವನ್ನು ಆಯಾ ಗ್ರಾಮ ಪಂಚಾಯತ್ ವತಿಯಿಂದ ಕೈಗೊಳ್ಳಬಹುದಾಗಿದ್ದು, ಇದಕ್ಕಾಗಿ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಮುಂಬರುವ ಮಳೆಗಾಲದ ಒಳಗಾಗಿ ಎಲ್ಲಾ ಸರ್ಕಾರಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಕೆರೆಗಳ ಅಭಿವೃದ್ಧಿ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಾಧ್ಯವಿದ್ದು, ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
Leave a Comment