ಕಾರವಾರ:
ಗ್ರಾಮೀಣ ಪ್ರದೇಶದ ಖಾರ್ಗೇ ಜನರ ಹಲವು ದಶಕಗಳ ಬೇಡಿಕೆಯಾಗಿರುವ ಶಾಶ್ವತ ಸೇತುವೆ ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ ಜನರು ಶಾಶ್ವತ ಸೇತುವೆಗಾಗಿ ಕಾಯುತ್ತಿದ್ದು ಹೊಳೆ ದಾಟಲು ನಿತ್ಯ ಹರಸಾಹಸ ಪಡಬೇಕಾದ ಅನಿವಾರ್ಯ ಸ್ಥಿತಿ ಇದೆ.
ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಖಾರ್ಗೇ ಗ್ರಾಮದ ಬಡಜೂಗ್-ಕೆರವಡಿಯ ಕರ್ಕಲ್ ನಡುವೆಯ ನದಿಗೆ ಹಾಗೂ ಮಾಂಡೆಬೋಳಾ- ಕಡಿಯಾ ನಡುವಿನ ಕಾಳಿ ನದಿಯ ಉಪ ನದಿಯಾಗಿರುವ ಕಾಣಿಕೆ (ನೈತಿಸಾವರ) ನದಿಯನ್ನು ಇಲ್ಲಿನ ಜನರು ದಾಟಬೇಕು ಎಂದರೆ ದೋಣಿಯ ಮೂಲಕ ದಾಟುತ್ತಿರುವ ಅನಿರ್ವಾಯ ಪರಿಸ್ಥಿತಿ ಸಾಕಷ್ಟು ವರ್ಷಗಳಿಂದ ಇದೆ. ಬಡಜೂಗ್ ಹಾಗೂ ಕೆರವಡಿಯ ಕರ್ಕಲ್ ನಡುವೆಯ ಕೇಲವೆ ಮೀಟರ್ಗಳ ಅಂತರವಿದೆ. ಎರಡು ಕಡೆಗೆ ಬಸ್ ಮೂಲಕ ಸಾಗಬೇಕು ಎಂದರೆ ಸುಮಾರು 15 ಕಿ.ಮೀ. ದೂರ ಸುತ್ತುವರಿದು ಸಾಗಬೇಕು. ಆದರೆ ಗ್ರಾಮೀಣ ಪ್ರದೇಶವಾಗಿದ್ದರಿಂದ ಬಸ್ ಸೌಕರ್ಯವೂ ಅಷ್ಟಕಷ್ಟೆ. ವಿದ್ಯಾರ್ಥಿಗಳು ಸಹ ಶಾಲೆಗೆ ಸಾಗಬೇಕು ಎಂದು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕು. ಈ ಪ್ರದೇಶದಲ್ಲಿ ಸೇತುವೆ ನಿರ್ಮಾಣವಾದರೆ 15 ಕಿ.ಮೀ. ವ್ಯಾಪ್ತಿ ಸುತ್ತುವರಿದು ಪ್ರಯಾಣಿಸುವ ಅಥವಾ ದೋಣಿಯ ಮೂಲಕ ಸಾಗುವ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ. ಅಲ್ಲದೆ ಕೆರವಡಿ, ಮಲ್ಲಾಪುರಕ್ಕೆ ತೆರಳುವ ಜನರ ಪ್ರಯಾಣದ ಅಂತರ ಸಾಕಷ್ಟು ಕಡಿಮೆಯಾಗಲಿದೆ. ಅದರಂತೆ ಮಾಂಡೆಬೋಳಾ -ಕಡಿಯಾದ ಸ್ಥಿತಿಯೂ ಬೇರಿಲ್ಲ. ಇಲ್ಲಿನ ವಿದ್ಯಾರ್ಥಿಗಳು ನೈತಿಸಾವರ ಶ್ರೀ ನಾರಾಯಣ ಶಾಲೆಯಲ್ಲಿ ಶಿಕ್ಷಣ ಪಡೆಯಲು ಸಾಗಬೇಕು ಎಂದರೆ ಕೇವಲ ಅರ್ಧ ಕಿ.ಮೀ ಸಾಗಬೇಕು. ಆದರೆ ಮಧ್ಯದಲ್ಲಿ ಕಾಳಿ ನದಿಯ ಉಪನದಿಯಾಗಿರುವ ಕಾಣಿಕೆ ಹೊಳೆ ಇರುವುದರಿಂದ ಸುಮಾರು 13 ಕಿ.ಮೀ. ಬಸ್ ಮೂಲಕ ಪ್ರಯಾಣಿಬೇಕು. ಇಲ್ಲದೆ ಹೊಳೆಯಿಂದ ದೋಣಿಯ ಮೂಲಕ ತೆರಳಬೇಕು. ಇದರಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಹ ಮೀನ-ಮೇಷ ಎಣಿಸುವ ಸ್ಥಿತಿ. ಮಳೆಗಾಲದಲ್ಲಿ ಮಳೆಯ ಪ್ರಮಾಣ ಹೆಚ್ಚಿದರೆ ಹೊಳೆಯನ್ನು ನೀರಿನ ಪ್ರವಾಹ ಹೆಚ್ಚುವುದರಿಂದ ವಿದ್ಯಾರ್ಥಿಗಳು ಮನೆಯಲ್ಲೇ ಇರಬೇಕು.
ತಾಲೂಕಿನಲ್ಲಿ ಕಾಳಿ ನದಿಯಲ್ಲಿ ಅಧಿಕಾರಿಗಳು ನಿಗದಿಪಡಿಸಿದ ಪ್ರದೇಶದಲ್ಲೇ ಮರಳು ಗಣಿಗಾರಿಕೆ ನಡೆಬೇಕು. ಆದರೆ ಅದು ನಡೆಯುವುದರ ಜೊತೆಗೆ ಬೇಕಾಬಿಟ್ಟಿಯಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಈ ಪ್ರದೇಶದ ಕಾಣಿಕೆ(ನೈತಿಸಾವರ) ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುವುದರಿಂದ ಹೊಳೆಯ ಆಳದ ಜೊತೆಗೆ ಅಗಲವೂ ಹೆಚ್ಚಾಗಿದೆ. ಇದರಿಂದಾಗಿ ನದಿ ತೀರಗಳು ಕುಸಿಯತ್ತಿರುವುದರಿಂದ ಜನರು ಇನ್ನಷ್ಟು ತೊಂದರೆ ಪಡುವಂತಾಗಿದೆ. ಅಕ್ರಮ ಮರಳುಗಾರಿಕೆ ನಡೆಯುವುದರಿಂದ ಹೊಳೆ ಅಕ್ಕಪಕ್ಕದ ಜನರ ಜಮೀನಿನ ಸವಕಳಿಯಾಗುತ್ತಿದ್ದು ಜನರ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಬೇಸಿಗೆ ಹಾಗೂ ಚಳಿಗಾಲದಲ್ಲಿ ಸಾರ್ವಜನಿಕರು ತಮ್ಮ ಅವಶ್ಯಕ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡೆ ಸಾಗುತ್ತಿದ್ದರು. ಆದರೆ ಈಗ ಮರಳುಗಾರಿಕೆ ಹೆಚ್ಚಾಗಿದ್ದರಿಂದ ಇಲ್ಲಿನ ಪ್ರದೇಶ ಶಾಶ್ವತ ಹೊಳೆಯಾಗಿ ಪರಿಣಮಿಸಿದೆ.
Leave a Comment