ಕಾರವಾರ:
ರವೀಂದ್ರನಾಥ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಮೇ. 17 ರಿಂದ 5 ದಿನಗಳ ಕಾಲ ನಡೆಯುವ ಕರಾವಳಿ ಹಬ್ಬದಲ್ಲಿ ಖ್ಯಾತ ಚಲನಚಿತ್ರ ಗಾಯಕರ ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ ಹೇಳಿದರು.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ತಾಂಡವ ಕಲಾನಿಕೇತನ ಹಾಗೂ ಉತ್ಸವ ಸಮಿತಿಯ ಎರಡನೇ ವರ್ಷದ ಕರಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಐದು ದಿನದ ಕಾರ್ಯಕ್ರಮದಲ್ಲಿಯು ಸಂಜೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ವಿವಿಧ ಕಾರ್ಯಕ್ರಮಗಳು ಮೂಡಿಬರಲಿದೆ. ಅದರಲ್ಲಿ ಮೊದಲು ಎರಡು ಗಂಟೆಯನ್ನು ಸ್ಥಳೀಯ ಕಲಾವಿದರಿಗೆ ಮೀಸಲಿಡಲಾಗಿದೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಸಿ ನಂತರ ಚಲನಚಿತ್ರ ಗಾಯಕರ ಗಾನಸುಧೆ ಹಾಗೂ ಬೆಂಗಳೂರಿನ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.
ಕರಾವಳಿ ಹಬ್ಬದಲ್ಲಿ ಕನ್ನಡದ ಚಲನಚಿತ್ರ ಗಾಯಕ ಹೇಮಂತ, ಹಿಂದಿ ಗಾಯಕ ಡಾ. ಕಿರ್ತನ್ ಖಾಜಿ, ಜೋಗಿ ಖ್ಯಾತಿಯ ಸುನಿತಾ, ಸುಪ್ರಿತಾ, ಉದಯ ಅಂಕೋಲಾ, ವ್ಯಾಸರಾಯ ಸೇರಿದಂತೆ ಇನ್ನಿತರ ರಾಜ್ಯಮಟ್ಟದ ಕಲಾವಿದರು ಭಾಗವಹಿಸಲಿದ್ದಾರೆ. ಇದಲ್ಲದೆ ಯಕ್ಷಗಾನ, ದೇಶಿ ನೃತ್ಯ, ದಾಂಡಿಯಾ, ಡಾನ್ಸ್ ಧಮಾಕಾ, ಸುಗ್ಗಿ ಕುಣಿತ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ವೇದಿಕೆಯಲ್ಲಿ ಗಮನ ಸೇಳೆಯಲಿದೆ. ಜತೆಗೆ ರಾಜ್ಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆ ಕೂಡ ನಡೆಸಲಾಗುತ್ತಿದೆ. ಇದರಲ್ಲಿ ಮೊದಲ ಬಹುಮಾನ 30 ಸಾವಿರ ಹಾಗೂ ಎರಡನೇ ಬಹುಮಾನ 15 ಸಾವಿರ ನೀಡಲಾಗುತ್ತಿದೆ. ಆಸಕ್ತರು ಮೊ: 9902683003 ನಂಬರ್ ಸಂಪರ್ಕಿಸಬಹುದು ಎಂದರು.
Leave a Comment