ಭಟ್ಕಳ: ಆಟೋರಿಕ್ಷಾ ಚಾಲಕನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಟೋ ಚಾಲಕ ಅಶ್ರಫ್ ಎನ್ನುವವರೇ ಹಲ್ಲೆಗೊಳಗಾದವರಾಗಿದ್ದಾರೆ. ಅಟೋದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ನಾಲ್ವರು ಏಕಾಎಕಿ ಬಂದು ಅಟೋ ರಿಕ್ಷಾವನ್ನು ಅಡ್ಡಗಟ್ಟಿ ಅಶ್ರಫ್ನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆಗೈದಿದ್ದಲ್ಲದೇ ಆತನ ಅಟೋ ರಿಕ್ಷಾವನ್ನು ಅಪಹರಿಸಿಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಅದನ್ನು ಜಖಂಗೊಳಿಸಿದ್ದರು. ಆತ ಇನ್ನೂ ಉಡುಪಿಯ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಈ ಕುರಿತು ಆತನ ಪತ್ನಿ ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳಾದ ಬದ್ರಿಯಾZ ಕಾಲೋನಿಯ ಅಬ್ದುಲ್ ರಹ್ಮಾನ್(25), ಝೀಯಾ ಶೇಖ್(24), ಅಬ್ದುಲ್ ಮಜೀದ್(25) ಹಾಗೂ ಉಮರ್ ಸ್ಟ್ರೀಟ್ ನಿವಾಸಿ ಬಿಲಾಲ್ ಅಹ್ಮದ್(25) ಎಂಬುವವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ಅಭಿನಂದನೆ: ಅಟೋ ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿರುವ ಕುರಿತು ಉತ್ತರ ಕನ್ನಡ ಜಿಲ್ಲಾ ಅಟೋ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಆರ್. ಜಿ. ನಾಯ್ಕ ಹಾಗೂ ತಾಲೂಕಾ ಅಧ್ಯಕ್ಷ ವೆಂಕಟೇಶ ನಾಯ್ಕ ಅಭಿನಂದಿಸಿದ್ದಾರೆ.
ಈ ಕುರಿತು ಇಲ್ಲಿನ ಸತ್ಕಾರ್ ಹೊಟೆಲ್ನಲ್ಲಿ ಪತ್ರಿಕಾ ಗೋಷ್ಟಿಯನ್ನು ನಡೆಸಿದ ಅವರು ಪೊಲೀಸರು ಅಟೋ ರಿಕ್ಷಾ ಚಾಲಕರ ಬೇಡಿಕೆಗೆ ಸ್ಪಂಧಿಸಿ ತಕ್ಷಣ ಆರೋಪಿಗಳನ್ನು ಬಂಧಿಸಿರುವುದು ಸಂತಸವಾಗಿದೆ. ನಮಗೆ ಇಲಾಖೆಯಿಂದ ಅನ್ಯಾಯ ಆಗುವುದಿಲ್ಲ ಎನ್ನುವುದು ಹಲ್ಲೆ ಪ್ರಕರಣದ ಘಟನೆಯಿಂದ ಸಾಬೀತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಬಲಿಷ್ಠವಾಗಿದ್ದು ಚಾಲಕರ ಪ್ರತಿಯೊಂದು ಸಮಸ್ಯೆಗಳಿಗೆ ಕೂಡಲೆ ಸ್ಪಂಧಿಸುತ್ತದೆ. ಚಾಲಕರು ಕೂಡಾ ಕಾನೂನು ಉಲ್ಲಂಘಿಸದೇ ಸಾರ್ವಜನಿಕರಿಗೆ ಸಹಕಾರಿಯಾಗುವಂತಹ ಕೆಲಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸಂಘ ಸಾಕಷ್ಟು ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ನಾಯ್ಕ, ಅಬ್ದುಲ್ ಮುಬೀನ್, ಸುರೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment