ಹೊನ್ನಾವರ
ಕರ್ನಾಟಕ ಕ್ರಾಂತಿರಂಗದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಮೇ 23 ರಂದು ಸಂಜೆ 7 ಗಂಟೆಗೆ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ತಿಳಿಸಿದರು,
ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘಟನೆಯನ್ನು ಶೀಘ್ರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಸಂಘಟಿಸಲಾಗುವುದು ಎಂದು ತಿಳಿಸಿದರು,.
ಕನ್ನಡ ಭಾಷೆಯ ಉಳಿವು, ಕನ್ನಡಿಗರಿಗೆ ಆಗುವ ಅನ್ಯಾಯದ ವಿರುದ್ದ ಹೋರಾಟವನ್ನು ಸಂಘ ನಡೆಸಲಿದೆ. ಭೃಷ್ಟಾಚಾರ, ಬಡಜನರ ಶೋಷಣೆ, ಸರ್ಕಾರಿ ಕಚೇರಿಗಳಲ್ಲಿ ಬಡಜನರ ಕೆಲಸಗಳಿಗೆ ಆಗುವ ತೊಂದರೆ ಮತ್ತಿತರ ಸಾಮಾಜಿಕ ಅನ್ಯಾಯದ ವಿರುದ್ದ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಕ್ರಾಂತಿ ರಂಗದ ತಾಲೂಕಾ ಅಧ್ಯಕ್ಷ ಡಾ. ಎಸ್. ಡಿ. ಹೆಗಡೆ ಮಾತನಾಡಿ ಕನ್ನಡ ಭಾಷೆಯನ್ನು ಉಳಿಸುವ ಕಾರ್ಯ ಈಗಿನ ಅನಿವಾರ್ಯತೆಯಾಗಿದೆ. ಇದಕ್ಕಾಗಿ ಸಂಘಟನೆ ಜನಜಾಗೃತಿ ಮೂಡಿಸಲು ಶ್ರಮಿಸಲಿದೆ. ಮನೆಮನೆಯನ್ನು ತಲುಪುವ ನಿಟ್ಟಿನಲ್ಲಿ ಸಂಘಟನೆಯನ್ನು ಬೆಳೆಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ ನಾಯ್ಕ ಮಾತನಾಡಿ ಉಳಿದ ಸಂಘಟನೆಗಳಿಗಿಂತ ವಿಭಿನ್ನವಾಗಿ ಕರ್ನಾಟಕ ಕ್ರಾಂತಿರಂಗ ಕಾರ್ಯನಿರ್ವಹಿಸಲಿದೆ. ಪ್ರತಿ ತಿಂಗಳೂ ಸಭೆ ನಡೆಸಿ ಜನರ ಸಮಸ್ಯೆಗಳ ಕುರಿತು ಚರ್ಚಿಸಿ ನಿರಂತರವಾಗಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಜ್ಞಾನೇಶ್ವರ ನಾಯ್ಕ, ಉದಯ ಪಾಲೇಕರ, ನಾಗರಾಜ ನಾಯ್ಕ, ಸುರೇಶ ನಾಯ್ಕ, ಗಣೇಶ ದರ್ಬೆಜಡ್ಡಿ, ಆನಂದ ಮೊಗೇರ, ಅಣ್ಣಪ್ಪ ನಾಯ್ಕ, ವಿನಾಯಕ ಶೇಟ್, ಪುನೀತ ಶೇಟ್, ಗೌರೀಶ ನಾಯ್ಕ, ಸಂಜೀವ ನಾಯ್ಕ, ಮಧು ಕರ್ಕಿಕೊಡಿ, ರಾಘವೇಂದ್ರ ದರ್ಬೆಜಡ್ಡಿ ಮತ್ತಿತರರು ಉಪಸ್ಥಿತರಿದ್ದರು.
Leave a Comment