ದಾಂಡೇಲಿ :
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನಾಂದಿಹಾಡಿರುವ ರಾಜ್ಯ ಸರಕಾರ ಬಡವರ, ದೀನ ದಲಿತರ ಪರವಾಗಿ ಕಾರ್ಯನಿರ್ವಹಿಸಿರುವುದಲ್ಲದೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸಲು ಪಣತೊಟ್ಟಿದೆ. ಈ ದಿಸೆಯಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎಂಬ ಹೆಗ್ಗಳಿಕೆಯನ್ನು ರಾಜ್ಯ ಸರಕಾರ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಶುಕ್ರವಾರ ಸಂಜೆ ನಗರ ಸಭೆಯ ಆವರಣದಲ್ಲಿ ಶೇ: 24.10 ರ ಎಸ್.ಸಿ/ಎಸ್.ಟಿ ಸರಕಾರದ ಅನುದಾನದಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡವನ್ನು ಹಾಗೂ ನಗರ ಸಭೆಯ ಆವರಣದಲ್ಲಿ ಮತ್ತು ಸಂಡೆ ಮಾರ್ಕೆಟ್ ಮುಂಭಾಗದಲ್ಲಿ ನಿರ್ಮಾಣಗೊಂಡ ಶುದ್ದ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ರಾಜ್ಯ ಸರಕಾರ ಉತ್ತರಕನ್ನಡ ಜಿಲ್ಲೆಗೆ ಸಾಕಷ್ಟು ನೆರವು ಹಾಗೂ ಅನುದಾನವನ್ನು ನೀಡುತ್ತಿದ್ದು, ಜಿಲ್ಲೆ ಪ್ರಗತಿಯ ಪಥದತ್ತ ಸಾಗುತ್ತಿದೆ. ಜಿಲ್ಲೆಯಲ್ಲಿ ಬೇಡಿಕೆಯಿರುವ ಎಲ್ಲಾ ಸೇತುವೆ ಕಾಮಗಾರಿಗೆ ಮಂಜೂರಾತಿ ನೀಡಿ ದಾಖಲೆಯನ್ನು ನಿರ್ಮಿಸಿದ್ದೇವೆ. ನಗರದಲ್ಲಿ ಕೆ.ಪಿ.ಸಿ ಕಟ್ಟಡದಲ್ಲಿರುವ ಅಲ್ಪಸಂಖ್ಯಾತ ಮಕ್ಕಳ ವಸತಿ ಶಾಲೆಗೆ ಹೊಸ ಕಟ್ಟಡವನ್ನು ನಿರ್ಮಿಸಲು ರೂ: 8,20,000/- ಮಂಜೂರು ಮಾಡಿ, ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ಎಂ.ಆರ್.ಪಿ ಕಂಪೆನಿಯಿಂದ ನಗರದ ಎರಡು ಕಡೆಗಳಲ್ಲಿ ಇಂದು ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಗಿದೆ. ಟೋಯೆಟಾ ಕಂಪೆನಿಯಿಂದ ಪ್ರತಿ ಯೂನಿಟಿಗೆ ರೂ: 8,43,000/- ವೆಚ್ಚದಲ್ಲಿ ಮೂರು ಕಡೆಗಳಲ್ಲಿ ಹೈಟೆಕ್ ಶೌಚಾಲಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಓವಿಎಸ್ ಕಂಪೆನಿಯಿಂದ ನಗರದ ಹಲವೆಡೆಗಳಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಜೆ.ಎಸ್.ಡಬ್ಲೂ ಫೌಂಡೇಶನ್ ನಿಂದ 2 ಕಡೆ ±ಶೌಚಾಲಯಗಳು ಮತ್ತು ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ರೂ: 6,28,000/- ಅನುದಾನ ನೀಡಲಾಗಿದೆ. ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ಹೊಂಡಾ ಕಂಪೆನಿಯಿಂದ ಶುದ್ದ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣದ ನವೀಕರಣಕ್ಕೆ ರೂ: 2,50,000/- ಮಂಜೂರು ಮಾಡಲಾಗಿದೆ. ತಾಯಿ-ಮಗು ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದು, ಸಧ್ಯದಲ್ಲೆ ಲೋಕಾರ್ಪಣೆಗೊಳ್ಳಲಿದೆ. ನಾಡ ಕಚೇರಿಗೂ ನೂತನ ಕಟ್ಟಡ ಭಾಗ್ಯ ದೊರೆಯಲಿದೆ. ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಎಲ್ಲ ಅಂಗನವಾಡಿ ಕೇಂದ್ರಗಳಿಗೂ ವಾರದಲ್ಲಿ ಮೂರು ದಿನ ಬಿಸ್ಕೆಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಆಶ್ರಯ ಮನೆ ವಿತರಣೆಯ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ದೇಶಪಾಂಡೆ ಹೇಳಿದರು.
ನಗರ ಬೆಳೆಯುತ್ತಿದೆ. ದಾಂಡೇಲಿ ತಾಲೂಕಾಗಿ ಘೋಷಣೆಯಾಗಿದೆ. ಅದಕ್ಕೆ ಬೇಕಾದ ಎಲ್ಲ ಮೂಸೌಕರ್ಯಗಳನ್ನು ಒದಗಿಸಲು ರಾಜ್ಯ ಸರಕಾರ ಕಂಕಣಬದ್ದವಾಗಿದೆ. ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಪ್ರಗತಿಯಾಗಿದೆ. ಅಭಿವೃದ್ಧಿಯನ್ನೆ ಮೂಲಮಂತ್ರವಾಗಿಸಿಕೊಂಡು ಸರಕಾರ ಜನಪರ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿದೆ. ನಮ್ಮ ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸಬೇಕು ಮತ್ತು ನಗರದ ಅಭಿವೃದ್ಧಿಯಲ್ಲಿ ಎಲ್ಲರು ಪಾಲ್ಗೊಳ್ಳಬೇಕೆಂದು ದೇಶಪಾಂಡೆ ಕರೆ ನೀಡಿದರು.
ನಿರೀಕ್ಷೆಗೂ ಮೀರಿದ ಪ್ರಗತಿ-ಎಸ್.ಎಲ್.ಘೋಟ್ನೇಕರ
ಸಚಿವ ದೇಶಪಾಂಡೆಯವರ ಜನಪರ ಕಾಳಜಿಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಗಾಳಿ ಶರವೇಗದಲ್ಲಿ ಬೀಸಿದೆ. ರಸ್ತೆ, ಕುಡಿಯುವ ನೀರು ಹೀಗೆ ಮೊದಲಾದ ಅವಶ್ಯ ಮೂಲಸೌಕರ್ಯಗಳನ್ನು ಒದಗಿಸಿಒಟ್ಟಿರುವುದಲ್ಲದೇ, ವಿಟಿಯು ಕೌಶಲ್ಯಾಭಿವೃದ್ಧಿ ಕೇಂದ್ರ, ದಂಡಕಾರಣ್ಯ ಮತ್ತು ಮೌಳಂಗಿ ಇಕೋ ಪಾರ್ಕ್, ತಾಯಿ-ಮಗು ಆಸ್ಪತ್ರೆ ಹೀಗೆ ಇನ್ನೂ ಅನೇಕ ಯೋಜನೆಗಳನ್ನು ತ್ವರಿತಗತಿಯಲ್ಲಿ ಸಚಿವ ದೇಶಪಾಂಡೆಯವರು ಈಡೇರಿಸುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿದ್ದಾರೆಂದು ಬಣ್ಣಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಸಭಾ ಅಧ್ಯಕ್ಷ ಎನ್.ಜಿ.ಸಾಳೊಂಕೆಯವರು ಮಾತನಾಡಿ ಸಚಿವ ದೇಶಪಾಂಡೆಯವರ ಸತತ ಪ್ರಯತ್ನ ಮತ್ತು ಕ್ರಿಯಾಶೀಲತೆಯಿಂದ ನಗರದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದ್ದು, ನಗರದ ಅಭಿವೃದ್ಧಿಗೆ ಕೈಜೋಡಿಸಿದ ಸಚಿವ ದೇಶಪಾಂಡೆಯವರಿಗೆ ನಗರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ನಗರ ಸಭಾ ಉಪಾಧ್ಯಕ್ಷ ಅಷ್ಪಾಕ ಶೇಖ, ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ ಮುಂಗರವಾಡಿ, ತಹಶೀಲ್ದಾರ್ ವಿದ್ಯಾದರ ಗುಳಗುಳಿ, ಪೌರಾಯುಕ್ತ ಜತ್ತಣ್ಣ, ನಗರ ಸಭಾ ಸದಸ್ಯರುಗಳಾದ ಕೀರ್ತಿ ಗಾಂವಕರ, ರಾಜು ರುದ್ರಪಾಟಿ, ಮಹಮ್ಮದ ಫನಿಬಂದ್, ಬಸೀರ ಗಿರಿಯಾಳ, ರಾಮಲಿಂಗ ಜಾಧವ, ಜಂಗಲ್ ಲಾಡ್ಜಸ್ ವಸತಿ ನಿಗಮದ ನಿರ್ದೇಶಕ ಕರೀಂ ಅಜ್ರೇಕರ ಮೊದಲಾದವರು ಉಪಸ್ಥಿತರಿದ್ದರು.
Leave a Comment