ಭಟ್ಕಳ:
ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆಲವೊಂದು ಕಡೆಗಳಲ್ಲಿ ಹಾನಿಯುಂಟಾಗಿದ್ದು, ಹಾನಿಯಾದ ಬಗ್ಗೆ ತಾಲೂಕಾ ಆಡಳಿತ ವರದಿಯೊಂದನ್ನು ತಯಾರಿಸಿ ಮಳೆ ಹಾಗೂ ಗಾಳಿಯಿಂದ ಹಾನಿಯುಂಟಾಗಿರುವ ಒಟ್ಟು 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನದ ಚೆಕ್ನ್ನು ಭಟ್ಕಳ ತಾಲೂಕಾ ಪಂಚಾಯತ್ ಕಛೇರಿಯಲ್ಲಿ ವಿತರಿಸಿದರು.
ಕಳೆದ ಮೇ 6ರಂದು ರಾತ್ರಿ ತಾಲುಕಿನಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಚೌಥನಿ, ಮುಠ್ಠಳ್ಳಿ, ಮುಂಡಳ್ಳಿ, ಮಾವಳ್ಳಿ, ಸೂಸಗಡಿ ಸೇರಿದಂತೆ ಕೆಲವು ಕಡೆ ಗಾಳಿಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದವು. ಹಲವು ಮನೆಗಳಿಗೆ ಹಾನಿಯಾಗಿ ಜನರು ಮನೆಯಿಲ್ಲದೇ ನಿರಾಶ್ರಿತರಾಗಿದ್ದರು. ಈ ರೀತಿ ಹಾನಿಗೊಳಗಾದ ಮನೆಯನ್ನು ಪರಿಶೀಲಿಸಿ ತಾಲೂಕಾ ಆಡಳಿತ ವರದಿಯನ್ನು ತಯಾರಿಸಿ ಪ್ರಕೃತಿ ವಿಕೋಪದಡಿಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರವನ್ನು ನೀಡಲಾಗಿದೆ.
ಶಾಸಕ ಮಂಕಾಳ ವೈದ್ಯ ಮಳೆಯಿಂದ ಹಾನಿಯಾಗಿ ಮನೆ ಕಳೆದುಕೊಂಡ ಒಟ್ಟು 8 ಕುಟುಂಬಗಳಿಗೆ 1 ಲಕ್ಷ 20 ಸಾವಿರ ಪರಿಹಾರದ ಚೆಕ್ನ್ನು ವಿತರಿಸಿದರು. ಈ ಪೈಕಿ ತಾಲೂಕಿನ ಮುಂಡಳ್ಳಿಯ ಒಂದು ಕುಟುಂಬದ ಮನೆಯು ಸಂಪೂರ್ಣವಾಗಿ ಹಾನಿಯಾಗಿದ್ದು, ಕುಟುಂಬಕ್ಕೆ 65,000 ಸಾವಿರ ಚೆಕ್ ವಿತರಣೆ ಮಾಡಲಾಗಿದೆ. ಮಳೆ ಪ್ರಾರಂಭದಲ್ಲಿಯೇ ಕೆಲವೊಂದು ಹಾನಿಯಾಗಿದ್ದು, ಆರಂಭದ ಮಳೆಗೆ ಹಾನಿಯಾದ ಎಲ್ಲಾ ಕುಟುಂಬಗಳಿಗೆ ತಾಲೂಕಾ ಆಡಳಿತ ತುರ್ತು ಪರಿಹಾರವನ್ನು ನೀಡಿರುವುದು ಎಲ್ಲರ ಮೊಗದಲ್ಲಿಯೂ ಸಂತಸ ಮೂಡಿಸುವಂತಾಗಿದೆ.
ಈ ಸಂಧರ್ಭದಲ್ಲಿ ತಹಸೀಲ್ದಾರ್ ವಿ.ಎನ್.ಬಾಡಕರ್, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಗಣಪತಿ ಮೇತ್ರಿ, ಕಂದಾಯ ನಿರೀಕ್ಷಕರು ರಾಜು, ಪ್ರಕೃತಿ ವಿಕೋಪ ಪರಿಹಾರ ವಿಭಾಗ ಅಧಿಕಾರಿ ಗಣೇಶ ಕುಲಾಲ್ ಮುಂತಾದವರು ಇದ್ದರು.
Leave a Comment