ದಾಂಡೇಲಿ:
ಅಸಂಘಟಿತ ಕಾರ್ಮಿಕರು ಕೆಲವೊಂದು ಸಮಸ್ಯೆಯಲ್ಲಿರುವುದು ನಿಜ. ಹಾಗೆಂದು ಸರಕಾರ ಕೂಡಾ ಈ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು, ಸೌಲಭ್ಯಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ಅವರಿಗಿರುವ ಕಾನೂನಿನ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ನುಡಿದರು.
ಅವರು ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಗುತ್ತಿಗೆದಾರರ ಒಕ್ಕೂಟದವರು ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಅಸಂಘಟಿತ ಕಾರ್ಮಿಕರಿಗೆ ಇರುವ ಸಾಮಾನ್ಯ ಕಾನೂನು ಸರಕಾರದ ಸೌಲಭ್ಯಗಳು ಮತ್ತು ಸಂಘಟನೆಯ ಮಹತ್ವದ ಕುರಿತಾಗಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿದ್ದ ನಗರಸಭಾ ಅದ್ಯಕ್ಷ ನಾಗೇಶ ಸಾಳುಂಕೆಯವರು ದಾಂಡೇಲಿಯ ಕಟ್ಟಡ ಕಾರ್ಮಿಕರಿಗಾಗಿ ಅವಶ್ಯವಿರುವ ಸಹಕಾರ ನೀಡುವ ಭರವಸೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ ಮಾತನಾಡಿ ರಾಜ್ಯ ಸರಕಾರ ಹಾಗೂ ಸಚಿವ ಆರ್.ವಿ. ದೇಶಪಾಂಡೆಯವರು ಕಾರ್ಮಿಕರ ಹಿತ ಕಾಪಡುವಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರ ಸದುಪಯೋಗ ಪಡೆಸಿಕೊಳ್ಳಬೇಕು. ಕಾರ್ಮಿಕ ಇಲಾಖೆ ಕಾರ್ಮಿಕರಿಗಿರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಾರ ಆಯೋಜಿಸಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ್ ಎ.ಬಿ.ಯವರು ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿ ನಿಜವಾದ ಕಟ್ಟಡ ಕಾರ್ಮಿಕರನ್ನು ಗುರುತಿಸುವ ಕೆಲಸ ಸಂಘಟನೆ ಮಾಡಬೇಕು ಎಂದರು. ಸಮಾಜ ಸೇವಕ ಟಿ.ಆರ್. ಚಂದ್ರಶೇಖರವರು ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ತಿಳಿಸಿ, ಅವರಿಗೆಂದು ಭದ್ರತೆಯ ಬದುಕು ನೀಡುವವಲ್ಲಿ ಸರಕಾರಗಳು ಮುಂದಾಗಬೇಕು ಎಂದರು. ಡಬ್ಲು.ಸಿ,ಪಿ.ಎಮ್. ಎಂಪ್ಲಾಯಿಜ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ರೋಶನ್ ನೇತ್ರಾವಳಿಯವರು ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದಾಗ ಕಾರ್ಮಿಕರಿಗೆ ಹೊಸ ಸೌಲಭ್ಯ ನೀಡುವ ಮೂಲಕ ಅವರಿಹೊಂದು ಭದ್ರತೆ ನೀಡಿದರು. ಅಸಂಘಟಿತ ಕಾರ್ಮಿಕರು ಹೋರಾಟದ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕೆಂದರು.
ಒಡನಾಡಿ ಸಂಘಟನೆಯ ಅಧ್ಯಕ್ಷ, ಪತ್ರಕರ್ತ ಬಿ.ಎನ್. ವಾಸರೆ ಮಾತನಾಡಿ ಈ ದೇಶ ನಿಂತಿರೋದೇ ಕೃಷಿಕರು ಮತ್ತು ಕಾರ್ಮಿಕರ ದುಡಿಮೆಯ ಮೇಲೆ. ಆದರೆ ಈ ಎರಡೂ ವಲಯಗಳು ಇಂದು ಅಭದ್ರತೆಯಲ್ಲಿವೆ. ಮಾಲಕ ವರ್ಗ, ಬಂಡವಾಳಶಾಹಿ ವರ್ಗಗಳಿಂದ ಕಾರ್ಮಿಕ ವಲಯದ ಮೇಲೆ ಶೋಷಣೆ ನಗಳು ನಿರಂತರವಾಗಿ ನಡೆಯುತ್ತಿದೆ ಹಾಗಾಗಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕವಾದ ಆರ್ಥಿಕವಾದ ಭದ್ರತೆಯನ್ನು ಕೊಡುವ ಕೆಲಸ ಆಗಬೇಕಾಗಿದೆ ಎಂದರು.
ಕಟ್ಟಡ ನಿಮಾರ್ಣ ಕಾರ್ಮಿಕರ ಮತ್ತು ಗುತ್ತಿಗೆದಾರರ ಒಕ್ಕೂಟದ ಅಧ್ಯಕ್ಷ ರಾಜೇಸಾಬ ಕೇಸನೂರವರು ಕಾರ್ಯಕ್ರಮದ ಅಧ್ಯಕ್ಷತೆ ವಜಸಿ ಮಾತನಾಡಿದರು. ಕಟ್ಟಡ ಕಾರ್ಮಿಕರಿಗೆ ನಿವದಾದ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ, ಸರಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ಸಂಘಟನೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ನಗರಸಭೆಯ ಉಪಾಧ್ಯಕ್ಷ ಅಷ್ಪಾಕ ಶೇಖ, ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ ಮುಂಗರವಾಡಿ, ನಗರಸಭಾ ಸದಸ್ಯ ಮಹೇಶ ಸಾವಂತ ವೇದಿಕೆಯಲ್ಲಿದ್ದರು. ಪತ್ರಕರ್ತ ಸಂದೇಶ ಜೈನ್ ಸ್ವಾಗತಿಸಿ, ನಿರೂಪಿಸಿದರು. ಸಿ.ಐ.ಟಿ.ಯು.ನ ಪ್ರಧಾನ ಕಾರ್ಯದರ್ಶಿ ಸಲಿಂ ಸಯ್ಯದ್ ವಂದಿಸಿದರು. ನಗರದ ಕಟ್ಟಡ ಕಾರ್ಮಿಕರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
Leave a Comment