ಹೊನ್ನಾವರ:
ಹಿಂದುಳಿದ ಪುಟ್ಟ ಸಮಾಜ ಅದ್ಭುತ ಕಾರ್ಯಕ್ರಮ ಮಾಡಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿ ಈ ವರೆಗೆ ಎಲ್ಲೂ ಆಗಿರದ ಅವಶ್ಯಕತೆಯಿದ್ದ ಸಾಮೂಹಿಕ ವಿವಾಹ ನೆರವೇರಿಸಿದ್ದು ವಿಶೇಷವಾಗಿದೆ ಎಂದು ಶಾಸಕ ಮಂಕಾಳು ವೈದ್ಯ ಹೇಳಿದರು.
ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊನ್ನಾವರ, ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಕ್ರಿ ಸಮಾಜ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡಿ ಲಕ್ಷಾಂತರ ಕುಟುಂಬಗಳಿಗೆ ಪುಣ್ಯದ ಕೆಲಸ ಮಾಡುತ್ತಿದ್ದರು. ಪುಟ್ಟ ಸಮಾಜ, ದಲಿತರು, ಸಾಮೂಹಿಕ ವಿವಾಹ ಮಾಡಿ ಎಲ್ಲರಿಗೂ ಮಾದರಿಯಾಗುವ ದೊಡ್ಡ ಕೆಲಸವನ್ನು ನಿವೃತ್ತ ಪೊಲೀಸ್ ಅಧಿಕಾರಿ ಎನ್.ಆರ್.ಮುಕ್ರಿ ನೇತೃತ್ವದಲ್ಲಿ ನಡೆಯುತ್ತಿದೆ. ಯಾವ ಸಮಾಜದವರೂ ಸಂಘ-ಸಂಸ್ಥೆಗಳು ಮಾಡದ ಕೆಲಸವನ್ನು ಅವರು ಆರಂಭಿಸಿದ್ದಾರೆ. ಇದು ಇಲ್ಲಿಗೆ ನಿಲ್ಲಬಾರದು. ಪ್ರತಿ ವರ್ಷವೂ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸಹಾಯ ಸಹಕಾರ ನೀಡಲು ನಾನು ಬದ್ಧನಿದ್ದೇನೆ ಎಂದು ನವ ವಧು-ವರರ ಬಾಳು ಹಸನಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಸಾಮೂಹಿಕ ವಿವಾಹ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಲು ಹಿಂದೆ ಸಿದ್ಧತೆ ಮಾಡಲಾಗಿತ್ತು. ಆದರೆ ವಧು-ವರರೇ ಪಾಲ್ಗೊಳ್ಳದೇ ಯಶಸ್ವಿಯಾಗಿರಲಿಲ್ಲ. ದಲಿತ ಸಮಾಜದವರು ಇಂಥಹ ಮಾದರಿ ಸಾಮೂಹಿಕ ವಿವಾಹ ನೆರವೇರಿಸಿರುವುದು ಇತರ ಸಮಾಜಕ್ಕೂ ಮಾದರಿಯಾಗಲಿ ಎಂದರು.
ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಇಂಥಹ ವಿವಾಹವನ್ನು ಹಿಂದೆಂದೂ ನೋಡಿರಲಿಲ್ಲ. ಹೆಣ್ಣು ತನ್ನ ತವರುಮನೆಯನ್ನು ಬಿಟ್ಟು ಗಂಡನ ಹೊಸಮನೆ, ಹೊಸ ಪರಿಸರದಲ್ಲಿ ಬದುಕು ಸಾಗಿಸಲು ಬರುತ್ತಾಳೆ. ಇವಳ ಬೇಕು, ಬೇಡಗಳನ್ನು ಪ್ರೀತಿಯಿಂದ ವರ ಪೂರೈಸಬೇಕು. ಹುಟ್ಟುವ ಮಕ್ಕಳಿಗೂ ಒಳ್ಳೆಯ ಶಿಕ್ಷಣ ನೀಡಿ ಸತ್ಪ್ರಜೆಯಾಗಿ ಬೆಳೆಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು.
ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಆಡಂಬರದ ಮದುವೆ ಸಮಾಜದ ದೊಡ್ಡ ಪಿಡುಗು ಇದನ್ನು ಬಿಟ್ಟು ಸರ್ಕಾರದ ಸಹಭಾಗಿತ್ವದಲ್ಲಿ ಸರಳ ವಿವಾಹವಾಗಿದ್ದು ಮುಕ್ರಿ ಸಮಾಜದ ಶ್ರೇಷ್ಠತನವನ್ನು ಸಾದರಪಡಿಸುತ್ತದೆ. ಇದನ್ನು 6 ದಂಪತಿಗಳು ಆದರ್ಶ ಹಾಕಿ ಕೊಟ್ಟಿದ್ದಾರೆ. ದಲಿತ ಸಮಾಜ ಶ್ರೇಷ್ಠ ಸ್ಥಾನದಲ್ಲಿ ನಿಂತಿದೆ. ಯುವಕ-ಯುವತಿಯರು ಸರಳ ವಿವಚಾಹವಾಗಲು ಮುಂದಾಗಬೇಕು ಎಂದರು.
ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭದಲ್ಲಿ 6 ನವದಂಪತಿಗಳು ಹಿಂದೂ ಧರ್ಮದಂತೆ ಶಾಸ್ತ್ರಬದ್ಧವಾಗಿ ಹಾರ ಬದಲಾಯಿಸಿ ಹಸೆಮಣೆಯೇರಿದರು.
ಉತ್ತರ ಕನ್ನಡ ಜಿಲ್ಲಾ ಹಿಂದು ಮುಕ್ರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಆರ್.ಮುಕ್ರಿ ದಂಪತಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವಧು-ವರರ ಅಪಾರ ಬಂಧುಗಳು ವಿವಾಹ ¸ಮಹೋತ್ಸವಕ್ಕೆ ಆಗಮಿಸಿ ವಧು-ವರರನ್ನು ಆಶೀರ್ವದಿಸಿದರು.
ಮಾಜಿ ಜಿ.ಪಂ ಸದಸ್ಯ ಕೃಷ್ಣ ಗೌಡ, ಚಂದ್ರಶೇಖರ ಗೌಡ, ತಾ.ಪಂ. ಉಪಾಧ್ಯಕ್ಷೆ ಲಲಿತಾ ನಾಯ್ಕ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ವಿ. ಆಚಾರಿ ಇತರರು ಇದ್ದರು.
Leave a Comment