ಹೊನ್ನಾವರ :
ಸಹಾಯಧನ ಪಡೆಯುವ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ನೂತನ ಸ್ವಂತ ಕಛೇರಿ ಕಟ್ಟಡದ ಉದ್ಘಾಟನಾ ಸಮಾರಂಭ ಜೂ.5 ರಂದು ಬೆಳಿಗ್ಗೆ 11 ಗಂಟೆಗೆ ನೆರವೇರಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ನೌಕರರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲು ಮೂರು ದಶಕಗಳ ಹಿಂದೆ ದಿವಂಗತ ಆರ್.ಆರ್.ಭಟ್ಟ ಮತ್ತು ಅವರ ಸಮಕಾಲೀನರು ಸೇರಿ ಪತ್ತಿನ ಸಹಕಾರಿ ಸಂಘವನ್ನು ಸ್ಥಾಪಿಸಿ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಂಡರು. ಈ ಸಂಸ್ಥೆ ಸೋಮವಾರ 30 ಲಕ್ಷ ರೂ. ವೆಚ್ಚದ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಉತ್ತಮ ಸ್ಥಿತಿಯಲ್ಲಿ ಆರ್ಥಿಕ ವ್ಯವಹಾರಗಳು ವೃದ್ಧಿಗೊಳ್ಳುತ್ತ ಪ್ರಸ್ತುತ ಜಿಲ್ಲೆಯ 6 ತಾಲೂಕುಗಳ ಅನುದಾನಿತ ವಿದ್ಯಾ ಸಂಸ್ಥೆಗಳ ನೌಕರರಿಗೆ ಗರಿಷ್ಠ 5 ಲಕ್ಷದವರೆಗೆ ಸಾಲ ಕೊಡಲು ಸದೃಢವಾಗಿದ್ದು, ಸುಮಾರು ವಾರ್ಷಿಕ 6 ಕೋಟಿಯ ವ್ಯವಹಾರವನ್ನು ನಡೆಸುತ್ತಿದೆ.
3 ವರ್ಷಗಳ ಹಿಂದೆ ಹೊನ್ನಾವರ ಹೃದಯ ಭಾಗದಲ್ಲಿರುವ ಕಿಂತಾಲಕೇರಿಯ ಹೆಬ್ಬಾರ ಕಂಪೌಂಡಿನ ಜಾಗದಲ್ಲಿ ನಿವೇಶನ ಖರೀದಿಸಿ ಕಟ್ಟಡದ ಶಂಖುಸ್ಥಾಪನೆಯನ್ನು ಮಾಜಿ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿ ನೆರವೇರಿಸಿದ್ದರು. ಜೂ.5 ರಂದು ಜರಗುವ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಉದ್ಘಾಟಕರಾಗಿ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕರಾದ ಜಿ.ಎಸ್.ಜಯಪ್ರಕಾಶರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಟಿ.ಭಟ್ಟ, ಸಾ.ಶಿ.ಇಲಾಖೆಯ ಉಪನಿರ್ದೇಶಕರಾದ ಪಿ.ಕೆ.ಪ್ರಕಾಶ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ಭಟ್ಟರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆ ಚಿಕ್ಕ,ಚೊಕ್ಕ ವ್ಯವಹಾರ ಮಾಡುತ್ತಾ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಹೊಸ ಕಟ್ಟಡ ಪ್ರವೇಶಿಸಲಿದೆ ಎಂದು ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಜಿ.ಭಟ್ಟ ತಿಳಿಸಿದ್ದಾರೆ.
Leave a Comment