ಹೊನ್ನಾವರ:
ಪೂರ್ವಜರು ನಮಗೆ ನೀಡಿದ ಸ್ವಚ್ಛ-ಸುಂದರ ಪರಿಸರವನ್ನು ರಕ್ಷಿಸಿ, ಪೋಷಿಸಿ ನಾಳಿನ ಸಮಾಜಕ್ಕಾಗಿ ಕಾಯ್ದಿಡುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಹೊನ್ನಾವರ ಸಿವಿಲ್ ಜಜ್ ಹಿರಿಯ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಕಾನೂನು ನೆರವು ಸಮಿತಿ ವಕೀಲರ ಸಂಘ ಹಾಗೂ ನ್ಯೂ ಇಂಗ್ಲೀಷ್ ಸ್ಕೂಲ್ ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಂತರ್ರಾಷ್ಟ್ರೀಯ ಪರಿಸರ ಪೂರಕ ಒಪ್ಪಂದಗಳ ಕುರಿತು ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳು ನಾಳಿನ ನಾಗರಿಕರು. ಹಸಿರು ಮತ್ತು ಪರಿಸರದ ಪ್ರೀತಿ-ಆತ್ಮೀಯತೆಯನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಕೆ. ಮಧುಕರ ಭಾಗ್ವತ ಮಾತನಾಡಿ ಪ್ರಕೃತಿ ಮಾತೆ ನಮ್ಮ ತಾಯಿಯಂತೆ, ತಾಯಿಯನ್ನು ಎಂದಿಗೂ ಹಿಂಸಿಸಬಾರದು, ಪರಿಸರ ನಾಶ ಎಂದರೆ ಜನ್ಮ ನೀಡಿದ ತಾಯಿಗೆ ನೀಡುವ ಹಿಂಸೆಯಂತೆ. ಪರಿಸರದ ಮೇಲಿನ ಹಿಂಸೆ ನಿಲ್ಲಿಸಿ ಪರಿಸರ ಪ್ರೀತಿಸಿ. ವಿದ್ಯುತ್ಶಕ್ತಿ ಮತ್ತು ಇಂಧನವನ್ನು ಮಿತವ್ಯಯವಾಗಿ ಬಳಸಿ ಪರಿಸರ ರಕ್ಷಿಸಿ. ಪರಿಸರ ಕಾಳಜಿಯನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ನ್ಯಾಯಾವಾದಿ ಉಮಾ ಡಿ. ನಾಯ್ಕ ಪರಿಸರ ಕಾಳಜಿ ಮತ್ತ ಕಾನೂನು ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯೂ ಇಂಗ್ಲೀಷ್ ಸ್ಕೂಲಿನ ಮುಖ್ಯಾಧ್ಯಾಪಕ ವಿ.ಎಸ್. ಅವಧಾನಿ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಅನಿರುದ್ಧ ಭಟ್ ಸ್ವಾಗತಿಸಿದರು. ಶಿಕ್ಷಕ ಶಂಕರ ಹೆಗಡೆ ವಂದಿಸಿದರು. ಶಿಕ್ಷಕಿ ಪವಿತ್ರಾ ಭಟ್ಟ ನಿರೂಪಿಸಿದರು.
Leave a Comment