ಕಾರವಾರ:
ಜಿಲ್ಲೆಯಲ್ಲಿ ಅತಿಸಾರ ಭೇದಿ ನಿಯಂತ್ರಣದಲ್ಲಿದ್ದು, ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜೂ. 12 ರಿಂದ 24ರವರೆಗೆ ನಿಯಂತ್ರಣ ಪಾಕ್ಷಿಕ ಆಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ ಕುಮಾರ್ ಹೇಳಿದರು.
ಶುಕ್ರವಾರ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಸರಕಾರದ ಸೂಚನೆಯಂತೆ ಅತಿಸಾರ ಭೇದಿಯಿಂದ ಮಕ್ಕಳ ಶೂನ್ಯ ಸಾವು ಎಂಬ ಅಂತಿಮ ಧ್ಯೇಯದೊಂದಿಗೆ ಪಾಕ್ಷಿಕ ಆಚರಣೆ ನಡೆಸಲಾಗುತ್ತಿದೆ. ಪಾಲಕರಲ್ಲಿ ಮಕ್ಕಳ ಮಕ್ಕಳ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಯಾವುದೇ ರೋಗ ಬಾರದಂತೆ ತಡೆಯಲು ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಅತಿಸಾರ ಬೇದಿಯಿಂದ ಸಾವಿರಕ್ಕೆ 43 ಮಕ್ಕಳು ಮರಣ ಹೊಂದುತ್ತಿದ್ದಾರೆ. ಐದು ವರ್ಷದೊಳಗಿನ ಒಟ್ಟು ಮರಣಗಳಲ್ಲಿ ಶೇ 10 ರಷ್ಟು ಮರಣ ಅತಿಸಾರ ಭೇದಿಯಿಂದ ಸಂಭವಿಸುತ್ತಿದೆ. ಆದರೆ ಇದನ್ನು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ 2025ಕ್ಕೆ ಮಕ್ಕಳ ಮರಣ ಸಂಖ್ಯೆಯನ್ನು 25ಕ್ಕೆ ಇಳಿಸುವ ಗುರಿ ಹೊಂದಿದ್ದು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಅತಿಸಾರ ಭೇದಿಯ ನಿಯಂತ್ರಣ ಪಾಕ್ಷಿಕೆಯನ್ನು ಮೊದಲು ಎಲ್ಲ ಇಲಾಖೆಯವರಿಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗುತ್ತದೆ. ಇಲಾಖೆಯ ಸುತ್ತಮುತ್ತಲಿನ ಪರಿಸರ, ನೀರಿನ ಮೂಲ, ಟ್ಯಾಂಕರ್, ನೀರು ಸಂಗ್ರಹಿಸುವ ಪಾತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ನಂತರ ಮಕ್ಕಳಲ್ಲಿ ಕಂಡುಬರುವ ಅತಿಸಾರ ಭೇದಿ ನಿಯಂತ್ರಣಕ್ಕೆ 5 ವರ್ಷದೊಳಗಿನ ಮಕ್ಕಳಿಗೆ ಓಆರ್ಎಸ್ ಹಾಗೂ ಝಿಂಕ್ ಮಾತ್ರೆಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತದೆ. ಈ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ನೀಡುವುದರ ಜತೆಗೆ ಪ್ರತಿ ನಿತ್ಯ ಮಕ್ಕಳು ಆಟವಾಡಿದಾಗ, ಊಟಮಾಡುವ ಮುನ್ನ ಕೈ ತೊಳೆಯುವುದರ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದಲ್ಲದೆ ಸ್ಲಮ್ ಪ್ರದೇಶದಲ್ಲಿರುವ ಶಾಲೆಗಳಲ್ಲಿ ಆರೋಗ್ಯ ತಪಾಸಣಾ ನಡೆಸಿ ಕೈ ತೊಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಗುವುದು ಎಂದರು.
ಆರೋಗ್ಯ ಸಂಸ್ಥೆಗಳಲ್ಲಿ ಅತಿಸಾರ ಭೇದಿ ಉಪಚಾರಕ್ಕೆ ಜಿಲ್ಲಾಮಟ್ಟದಲ್ಲಿ 1, ತಾಲೂಕುಮಟ್ಟದಲ್ಲಿ 14, ಗ್ರಾಮೀಣ ಪ್ರದೇಶದಲ್ಲಿ 82 ಆರೋಗ್ಯ ಕೇಂದ್ರಗಳಲ್ಲಿ ಇದರ ನಿರ್ವಹಣೆಗೆ ಓಆರ್ಎಸ್ ಮತ್ತು ಝಿಂಕ್ ಕಾರ್ನರ್ ಸ್ಥಾಪಿಸಲಾಗಿದೆ. ಅಲ್ಲದೆ ಪಾಲಕರಿಗೆ ಈ ಬಗ್ಗೆ ಪಾಕ್ಷಿಕೆಯ ಸಂಪೂರ್ಣ ಮಾಹಿತಿ ನೀಡಿ ಯಾವುದೇ ರೋಗ ಹರಡದಂತೆ ಎಚ್ಚರವಹಿಸಲಾಗುತ್ತಿದೆ ಎಂದರು. ಡಾ. ಶರದ್ ಇದ್ದರು
Leave a Comment