ಕಾರವಾರ:
ಜ್ಞಾನ, ವಿರ್ಶವಾಸ, ಪರಿಶ್ರಮ ಹಾಗೂ ಶಿಸ್ತಿನಿಂದ ಯಶಸ್ಸು ಸಿಗುತ್ತದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಆರ್.ಜಿ. ನಾಯಕ ಹೇಳಿದರು.
ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ತರಬೇತಿ ಸಂಸ್ಥೆ ಸಹಯೋಗತ್ವದಲ್ಲಿ ನಡೆದ ತಾಲೂಕು ಮಟ್ಟದ ಗ್ರಾಮೀಣ ಯುವಕ ಯುವತಿಯರಿಗೆ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.
ಸ್ಥಳೀಯವಾಗಿ ಉದ್ಯೋಗ ಸಿಗಬೇಕು ಎಂಬ ನಿರೀಕ್ಷೆ ಇದ್ದವರಿಗೆ ಅವಕಾಶಗಳು ಕಡಿಮೆ. ಅದರ ಬದಲು ಹೊರ ಪ್ರದೇಶಗಳಿಗೆ ತೆರಳಿ ಉದ್ಯೋಗ ಮಾಡಲು ಬಯಸುವರಿಗೆ ಸಾಕಷ್ಟು ಅವಕಾಶಗಳಿವೆ. ಇದರೊಂದಿಗೆ ಜ್ಞಾನವೂ ವೃದ್ದಿಯಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಜಿಲ್ಲೆಯಲ್ಲಿ ಕೈಗಾ ಸೀಬರ್ಡ್ನಂತಹ ಬೃಹತ್ ಯೋಜನೆಗಳಿದ್ದರು ಉದ್ಯೋಗಕ್ಕಾಗಿ ಯುವ ಜನಾಂಗ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ವಿದ್ಯೆಯ ಜೊತೆ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಉದ್ಯೋಗ ಖಂಡಿತ ಎಂದರು.
ಉದ್ಯೋಗ ಮೇಳದಲ್ಲಿ ಟಿಮ್ಲೀಸ್ ಸರ್ವಿಸ್ ಲೀಮಿಟೆಡ್ ಕಂಪೆನಿ, ಕಾಫಿ ಕೆಫೆ ಡೇ, ಉದ್ಯೋಗ ಸಮಯ ಕಂಪೆನಿ, ಕೆನರಾ ಬ್ಯಾಂಕ್ ದೇಶಪಾಂಡೆ ಗ್ರಾಮೀಣ ತರಬೇತಿ ಕೇಂದ್ರ, ಸಿಂಡ್ ಗ್ರಾಮೀಣ ಉದ್ಯೋಗ ತರಬೇತಿ ಕೇಂದ್ರಗಳು ಭಾಗವಹಿಸಿದ್ದವು. ಮೇಳದಲ್ಲಿ ಹೆಸರು ನೊಂದಾಯಿಸಿಕೊಂಡ 535 ಯುವಕ ಯುವತಿಯರಲ್ಲಿ 293 ಅಭ್ಯರ್ಥಿಗಳು ಕೌಶಲ್ಯ ತರಬೇತಿ ಮತ್ತು ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡರು. 134 ಅಭ್ಯರ್ಥಿಗಳು ವಿವಿಧ ಸ್ವಉದ್ಯೋಗದ ತರಬೇತಿಗೆ ಹಾಗೂ 108 ಯುವಕ-ಯುವತಿಯರು ರಾಜೀವ ಗಾಂಧೀ ಚೈತನ್ಯ ಯೋಜನೆಯ ಸ್ವ ಉದ್ಯೋಗವನ್ನು ಆಯ್ಕೆ ಮಾಡಿಕೊಂಡರು. ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ ಹೆಗಡೆ, ವಿವಿಧ ತರಬೇತಿ ಸಂಸ್ಥೆಗಳಿಂದ ಆಗಮಿಸಿದ ನಾರಾಯಣ, ಗೌರೀಶ್ ನಾಯ್ಕ, ಅಶೋಕ ಸೂರ್ಯವಂಶಿ ವೇದಿಕೆಯಲ್ಲಿದ್ದರು. ಚಿತ್ತಾಕುಲ ಪಂಚಾಯತ ಅಭಿವೃದ್ದಿ ಅಧಿಕಾರಿ ರಾಜೇಶ ನಾಯ್ಕ ನಿರ್ವಹಿಸಿದರು.
Leave a Comment