ದಾಂಡೇಲಿ :
ನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನಾ ಸಮಾರಂಭ ನೆರವೇರಿತು.
ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕರ ಮುಖಂಡರಾದ ಎಂ.ಬಿ ಕಟ್ಟಿ ಸಮಿತಿಯ ಉದ್ಘಾಟನೆ ನೆರವೇರಿಸಿ ಸಮಿತಿಯೂ ಪಕ್ಷಾತೀತವಾಗಿ ಹಾಗೂ ಜಾತಾತೀತವಾಗಿ ಕಾರ್ಯ ನಿರ್ವಹಿಸಿ ದಾಂಡೇಲಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಲಿ ಎಂದರು.
ಮುಖ್ಯ ಅತಿಥಿಯಾಗಿ ನಗರಸಭೆಯ ಅಧ್ಯಕ್ಷ ಎನ್.ಜಿ. ಸಾಳುಂಕೆ ಸಮಿತಿಯ ಜನಪರ ಕಾರ್ಯಗಳಿಗೆ ನಗರಸಭೆಯಿಂದ ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದರು.
ಸಂಘದ ಅಧ್ಯಕ್ಷ ಅಕ್ರಂ ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯು ದ್ಯೇಯದ್ದೇಶಗಳ ಬಗ್ಗೆ, ಸ್ಥಳೀಯ ಮುಚ್ಚಲ್ಪಟ್ಟ ಕಾರ್ಖಾನೆಗಳ ಪುನರ್ ಸ್ಥಾಪನೆಗೆ ಮತ್ತು ಸ್ವಾಮಿಲ್ ಪುನಶ್ಚೇತನಕ್ಕೆ, ಹಾಗೂ ನಗರದ ಹಲವಾರು ಜಲ್ವಂತ ಸಮಸ್ಯೆಗಳ ಬಗೆಹರಿವಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಹಾಗೂ ನಗರದ ಹಿರಿಯ ನ್ಯಾಯವಾದಿ ಅಜೀತ ನಾಯ್ಕ ವಹಿಸಿ ದಾಂಡೇಲಿ ನಗರದ ಹಲವಾರು ಸಮಸ್ಯೆಗಳ ಬಗ್ಗೆ ಈಗಾಗಲೇ ತಮ್ಮ ಸಮಿತಿಯ ಸದಸ್ಯರು ಹೋರಾಡುತ್ತಾ ಬಂದಿದ್ದಾರೆ. ಇನ್ನು ಮುಂದೆಯೂ ಕೂಡಾ ನಗರದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ಸಮಿತಿಯು ಪ್ರಯತ್ನಿಸುವುದಾಗಿ ತಿಳಿಸಿದರು. ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ಬದ್ಧತೆಯಡಿ ಸಮಿತಿ ಕಾರ್ಯನಿರ್ವಹಿಸಲಿದ್ದು, ದಾಂಡೇಲಿಯ ಸಮಗ್ರ ಅಭಿವೃದ್ಧಿಗಾಗಿ ಸಮಿತಿ ಪಕ್ಷಾತೀತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ ತಂಗಳ, ಸ್ಥಳೀಯ ಬಿಜೆಪಿ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಸ್ಥಳೀಯ ಜೆ.ಡಿ.ಎಸ್.ನ ಅಧ್ಯಕ್ಷ ರಿಯಾಜ ಶೇಖ, ಸಮಿತಿಯ ಉಪಾಧ್ಯಕ್ಷ ಫಿರೋಜ ಪೀರಜಾದೆ, ಸಿ.ಪಿ.ಎಂ ಪಕ್ಷದ ಮುಖಂಡ ಟಿ.ಎಸ್. ನಾಯ್ಕ, ಸಮಿತಿಯ ಸಹಕಾರ್ಯದರ್ಶಿ ರೇಣುಕಾ ಬಂದಮ್ಮ ಹಾಗು ಲೋಬೆ .ಮಾತನಾಡಿ ಸಮಿತಿಯ ಯಶಸ್ವಿಗೆ ಸಹಕರಿಸುವ ಭರವಸೆ ನೀಡಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ರಮೇಶ ನಾಯ್ಕ, ಡಾ. ಪಿ.ವಿ ಶಾನಭಾಗ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಎಂ.ಬಿ. ಕಟ್ಟಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ನಡೆಸಲು ಕರ್ನಾಟಕ ಭವನದಲ್ಲಿ ಅವಕಾಶ ನೀಡದಿರುವುದಕ್ಕೆ ಆಕ್ರೋಶ:
ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನಾ ಸಮಾರಂಭವನ್ನು ನಗರದ ಕಾರ್ಖಾನೆಯ ಸುಪರ್ಧಿಯಲ್ಲಿರುವ ಕರ್ನಾಟಕ ಸಂಘದ ಭವನದಲ್ಲಿ ಆಯೋಜಿಸಲು ಸಮಿತಿಯು ತೀರ್ಮಾನಿಸಿ, ಸಂಬಂಧಪಟ್ಟ ಕಾಗದ ಕಾರ್ಖಾನೆಯ ಅಧಿಕಾರಿಯವರಲ್ಲಿ ಕಾರ್ಯಕ್ರಮ ನಡೆಸಲು ಸಭಾಭವನ ನೀಡುವಂತೆ ಕೋರಿಕೊಂಡಾಗ, ಅದು ನೀಡಲು ಆಗುವುದಿಲ್ಲ ಎಂದು ಹೇಳಿ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಸಮಿತಿಯ ಪದಾಧಿಕಾರಿಗಳು ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಸಮಿತಿಯ ಕಾರ್ಯಕ್ರಮಕ್ಕೆ ಸಭಾಭವನ ನೀಡದಿರುವ ಕಾಗದ ಕಾರ್ಖಾನೆಯ ವಿರುದ್ದ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆಂದು ಬಲ್ಲಮೂಲಗಳಿಂದ ಮಾಹಿತಿ ಲಭ್ಯವಾಗುತ್ತಿದೆ
Leave a Comment