ಹೊನ್ನಾವರ:
ಶಿವಾನಂದ ಹೆಗಡೆ ಕಡತೋಕ ಅವರು 3 ವರ್ಷಗಳ ಅವಧಿ ಸಾಲದೇ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹುದ್ದೆಯನ್ನು ಕಳೆದ 6 ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಪಕ್ಷಕ್ಕೆ ಹಾನಿ ತರುವ ಕೆಲಸ ಮಾಡಿದ್ದಾರೆ. ಇವರು ಈಗ ಇತರ ಸಮಾಜದ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ತಾರಾ ಗೌಡ ಹೇಳಿದರು.
ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗಿದ್ದರೆ ವರ್ಷಗಳ ಕಾಲಾವಧಿ ಮುಗಿದಾಗ ಇತರ ಸಮಾಜದವರಿಗೆ ಬ್ಲಾಕ್ ಕಾಂಗ್ರೆಸ್ ಹುದ್ದೆಯನ್ನು ಬಿಟ್ಟು ಕೊಡಬೇಕಾಗಿತ್ತು. ಇವರು ಎಲ್ಲಾ ಹುದ್ದೆಯನ್ನು ಅನುಭವಿಸಿದ್ದಾರೆ. ಇವರಿಗೆ ಇನ್ನೂ ಅಧಿಕಾರದ ದುರಾಸೆ ಇದೆ. ನಮ್ಮ ನಾಯಕಿ ಶಾರದಾ ಶೆಟ್ಟಿ ಅವರು ಬ್ಲಾಕ್ ಕಾಂಗ್ರೆಸ್ ಬದಲಿಸಿ ಪಕ್ಷದ ರಾಜ್ಯಾಧ್ಯಕ್ಷರಿಂದ ಆದೇಶ ತಂದಿದ್ದಾರೆ. ಆದರೂ ತನಗೆ ಅಧಿಕೃತವಾದ ಪತ್ರ ಬರಲಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಇವರು ಜೆಡಿಎಸ್ ನೊಂದಿಗೆ ಸಂಬಂಧ ಹೊಂದಿದ್ದರಿಂದ ಹಳದೀಪುರ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದಾಗ ಜೆಡಿಎಸ್ ನವರು ಅಭ್ಯರ್ಥಿಯನ್ನು ಹಾಕಿರಲಿಲ್ಲ. ಹಾಗಾಗಿ ಆಯ್ಕೆಯಾಗಿದ್ದಾರೆ. ಎಲ್ಲರೂ ಪಕ್ಷ ಸಂಘಟಿಸುವಲ್ಲಿ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸಬೇಕು ಎಂದರು.
ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ನೇತ್ರಾವತಿ ಹೆಗಡೆ ಮಾತನಾಡಿ, ಶಾಸಕಿ ಶಾರದಾ ಶೆಟ್ಟಿ ಅವರು ಎಲ್ಲಾ ಸಮಾಜದವರಿಗೂ ಸಮಾನ ಸ್ಥಾನಮಾನ ನೀಡಿದ್ದಾರೆ. ಬ್ರಾಹ್ಮಣ ಸಮಾಜದ ನನ್ನನ್ನು ತಾಲೂಕು ಮಹಿಳಾ ಅಧ್ಯಕ್ಷೆಯನ್ನಾಗಿ, ಹಾಲಕ್ಕಿ ಸಮಾಜದ ತಾರಾ ಗೌಡ ಅವರನ್ನು ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಲಲಿತಾ ನಾಯ್ಕ ಅವರನ್ನು ತಾ.ಪಂ.ಉಪಾಧ್ಯಕ್ಷರನ್ನಾಗಿಸಿದ್ದಾರೆ. ಮೀನುಗಾರ ಸಮಾಜದ ಶರಾವತಿ ಮೇಸ್ತ ಅವರನ್ನು ಪ.ಪಂ.ಉಪಾಧ್ಯಕ್ಷರನ್ನಾಗಿಸಿದ್ದಾರೆ. ಅಲ್ಲದೇ ಇತರ ಎಲ್ಲಾ ಸಮುದಾಯದ ಮುಖಂಡರನ್ನು ವಿವಿಧ ಹುದ್ದೆಯನ್ನು ನೀಡಿ ಗೌರವಿಸಿದ್ದಾರೆ. ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ, ಒಡಕು ಉಂಟಾಗಲು ಶಿವಾನಂದ ಹೆಗಡೆ ಹುನ್ನಾರ ನಡೆಸಿದ್ದಾರೆ. ಇವರ ಈ ಹುನ್ನಾವರಕ್ಕೆ ಕಡಿವಾಣ ಹಾಕಿ ಪಕ್ಷವನ್ನು ಬಲಗೊಳಿಸುವ ಉದ್ದೇಶದಿಂದ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಶಾರದಾ ಶೆಟ್ಟಿ ಅವರ ಜನಪರ ಕಾರ್ಯಗಳನ್ನು ಎಲ್ಲರೂ ಮೆಚ್ಚಿದ್ದಾರೆ. ಇದನ್ನು ಸಹಿಸದೇ ದೂರುತ್ತಿರುವುದು ಸರಿಯಲ್ಲ ಎಂದರು.
ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಹುಸೇನ್ ಖಾದ್ರಿ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ನಾನು ಅಧಿಕಾರ ಪಡೆದಿದ್ದೇನೆ. ಆದರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಿವಾನಂದ ಹೆಗಡೆ ಒಮ್ಮೆಯೂ ನನ್ನನ್ನು ಸಭೆಗೆ ಆಹ್ವಾನಿಸಲಿಲ್ಲ. ಸೌಜನ್ಯಕ್ಕೆ ಸಂಪರ್ಕಿಸಲೂ ಇಲ್ಲ. ನಮ್ಮ ಸಮಾಜಕ್ಕೆ ಮಾನ್ಯತೆ ನೀಡದೇ ಇರುವುದು ಅವಮಾನದ ಸಂಗತಿ. ಹೀಗೆ ಮಾಡಿದರೆ ಪಕ್ಷದ ಸಂಘಟನೆ ಹೇಗಾಗುತ್ತದೆ. ಶಾಸಕಿಯ ಜೊತೆಯಲ್ಲಿ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗಲಿಲ್ಲ. ಇದರಿಂದ ಜನರಲ್ಲಿ ಅಭಿಪ್ರಾಯ ವ್ಯತ್ಯಾಸವುಂಟಾಗುತ್ತಿದೆ. ಅಧಿಕಾರದ ಅವಧಿಯಲ್ಲಿ ಅವರಿಗೆ ಇದು ನೆನಪಾಗಲಿಲ್ಲ ಎಂದರು.
ಮೀನುಗಾರ ಮುಖಂಡ ಗಣಪತಿ ಮೇಸ್ತ ಮಾತನಾಡಿ `ನಮ್ಮ ಸಮಾಜದ ಶರಾವತಿ ಸುರೇಶ ಮೇಸ್ತ ಅವರಿಗೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಸ್ಥಾನವನ್ನು ಶಾಸಕಿಯವರು ನೀಡಿದ್ದಾರೆ ಇದನ್ನು ಕಸಿದುಕೊಳ್ಳುವ ಹುನ್ನಾರ ಶಿವಾನಂದ ಹೆಗಡೆ ನಡೆಸುತ್ತಿದ್ದಾರೆ. ಒಂದೊಮ್ಮೆ ಅವರನ್ನು ಪದಚ್ಯುತಗೊಳಿಸಿದರೆ ನಮ್ಮ ಸಮಾಜದವರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಮುಗ್ವಾ ಗ್ರಾ.ಪಂ.ಸದಸ್ಯ ಗಣೇಶ ನಾಯ್ಕ ಮಾತನಾಡಿ ಭಿನ್ನಾಭಿಪ್ರಾಯವನ್ನು ಮರೆತು ಕಾಂಗ್ರೆಸ್ ಜಯಭೇರಿ ಬಾರಿಸುವಂತಾಗಬೇಕು ಇದನ್ನು ಬಿಟ್ಟು ಭಿನ್ನಾಭಿಪ್ರಾಯ ಮೂಡಿಸುವಂತ ಹೇಳಿಕೆಯನ್ನು ನೀಡುವುದನ್ನು ನಿಲ್ಲಸಬೇಕು. ಶಾರದಾ ಶೆಟ್ಟಿ ಅವರು ಎಲ್ಲಾ ಸಮಾಜದವರನ್ನು ಸಮಾನವಾಗಿ ನೋಡಿ ಸ್ಥಾನಮಾನ ನೀಡುತ್ತಿದ್ದಾರೆ ಎಂದು ಹೇಳಿದರು.
ಕಳೆದ ಜಿಲ್ಲಾ ಪಂಚಾಯತಿ ಚುನಾಔನೆಯಲ್ಲಿ ಶಿವಾನಂದ ಹೆಗಡೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಗ ಇವರ ವಿರುದ್ಧ ಶಾಸಕರು ಬಂಡಾಯವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು ಎಂಬ ಆರೋಪವಿದೆಯಲ್ಲ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ ತಾರಾ ಗೌಡ ಮಾತನಾಡಿ ಪಕ್ಷದಲ್ಲಿ ಇಬ್ಬರಿಗೆ ನಿಲ್ಲುವ ಆಕಾಂಕ್ಷೆಯಿದ್ದರೆ ಅದನ್ನು ಬೇಡ ಎಂದರೂ ನಿಂತಿರಬಹುದು. ಶಾಸಕರು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಸತ್ಯಕ್ಕೆ ದೂರವಾದ ವಿಚಾರ ಎಂದರು.
ಹುಸೇನ ಖಾದ್ರಿ ಮಾತನಾಡಿ ಕಳೆದ ಪ.ಪಂ.ಚುನಾವಣೆಯಲ್ಲಿ ನನಗೆ ಪಕ್ಷದ ಟಿಕೇಟ್ ನೀಡುತ್ತೇನೆ ಎಂದು ಶಿವಾನಂದ ಹೆಗಡೆ ಆಶ್ವಾಸನೆ ನೀಡಿದ್ದರು. ನಂತರ ಬೇರೆಯವರಿಗೆ ನನ್ನ ವಾರ್ಡಿನಲ್ಲಿ ಟಿಕೇಟ್ ನೀಡಿದ್ದರು. ಅಷ್ಟೇ ಅಲ್ಲ ನೀವೂ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಹೇಳಿ ಪ್ರೋತ್ಸಾಹ ನೀಡಿ ಹಣವನ್ನೂ ನೀಡಿದ್ದರು. ಈ ಬಗ್ಗೆ ನನ್ನಲ್ಲಿ ದಾಖಲೆಯಿದೆ. ಶಿವಾನಂದ ಹೆಗಡೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ ನಾಯ್ಕ, ಪ.ಪಂ.ಸದಸ್ಯ ಮಂಜುನಾಥ ಖಾರ್ವಿ, ನವಿಲಗೋಣ ಗ್ರಾ.ಪಂ ಅಧ್ಯಕ್ಷ ಸತೀಶ ಹೆಬ್ಬಾರ, ಕಡತೋಕ ಗ್ರಾ.ಪಂ.ಅಧ್ಯಕ್ಷೆ ಶೋಭಾ ಶ್ರೀಧರ ನಾಯ್ಕ, ಹೊಸಾಕುಳಿಯ ತಿಮ್ಮಣ್ಣ ಹೆಗಡೆ, ಮುಗ್ವಾದ ಗೌರಿ ಕೃಷ್ಣ ಅಂಬಿಗ, ದಾಮೋದರ ನಾಯ್ಕ ಹಳದೀಪರ, ಆರ್ಕೆ.ಹೆಗಡೆ ಸಾಲ್ಕೋಡ, ಮಂಜುಳಾ ನಾಯ್ಕ, ನಾಗವೇಣಿ ಗೌಡ, ಐ.ವಿ.ನಾಯ್ಕ, ಸೀತೆ ಗೌಡ, ಹೇಮಾ ಗೌಡ, ನಾರ್ಣಪ್ಪ ಗೌಡ, ವಿನಾಯಕ ಶೇಟ್ ಇತರರಿದ್ದರು.
Leave a Comment