ಹೊನ್ನಾವರ
ಶಾಸಕಿ ಶಾರದಾ ಶೆಟ್ಟಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿರುವುದನ್ನು ಖಂಡಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ರವೀಂದ್ರ ನಾಯ್ಕ ಹೇಳಿದರು.
ಪಟ್ಣದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರ ಪರವಾಗಿ ಸುದ್ದಿಗೋಷ್ಠಿ ಮಾಡಿದವರೆಲ್ಲ ಹಳದಿಪುರ ಜಿ.ಪಂ. ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ದ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದವರು ಎಂದು ಆರೋಪಿಸಿದರು.
ಕಡತೋಕಾ ಶಿವಾನಂದ ಹೆಗಡೆಯವರು ಒಳ್ಳೆಯ ರೀತಿಯಿಂದ ಕಾರ್ಯ ನಿರ್ವಹಿಸುತ್ತಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅವಧಿ ಇನ್ನೂ ಆರು ತಿಂಗಳಿತ್ತು. ರಾಜ್ಯದಲ್ಲಿ ಎಲ್ಲೂ ಬದಲಾವಣೆ ಮಾಡಿಲ್ಲ. ಹೊಸ ಅಧ್ಯಕ್ಷರನ್ನು ಚುನಾವಣೆ ಮೂಲಕ ನಡೆಸಬೇಕಾಗಿತ್ತು ಎಂದು ಹೇಳಿದರು.
ಶಾಸಕರು ವಾಮ ಮಾರ್ಗದಿಂದ ಐದಾರು ಬಿ. ಫಾರಂ ತಂದುಕೊಂಡು ಪಕ್ಷ ನಿಗದಿಪಡಿಸಿದ ಅಭ್ಯರ್ಥಿಗಳ ಹೊರತಾಗಿ ಬೇರೆಯವರಿಗೆ ಕೊಟ್ಟಿದ್ದರು. ಆದರೂ ಶಿವಾನಂದ ಹೆಗಡೆಯವರು ಗೆದ್ದಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ವಿನೋದ ನಾಯ್ಕ ಮಾತನಾಡಿ ಶಾಸಕಿ ಶಾರದಾ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ನಿಷ್ಕ್ರಿಯ ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ನೇರವಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಇವರು ಬಂದು ನಾಲ್ಕು ವರ್ಷ ಆಯಿತು. ಕಾಂಗ್ರೆಸ್ ನಡಿಗೆ ಜನರ ಬಳಿಗೆ ಬೃಹತ್ ಆಂದೋಲನವನ್ನು ಸಂಘಟಿಸಿದ್ದರಿಂದ ಅವರ ಗೆಲುವಿಗೆ ಕಾರಣವಾಗಿದೆ. ಪಕ್ಷ ಸಂಘಟನೆ ಇವರಿಗೇನು ಗೊತ್ತು. ಎಂದರು.
ದೊಡ್ಡ ಸಮುದಾಯಗಳನ್ನು ಸರಿಸಮಾನವಾಗಿ ನೋಡುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ ಜಿಲ್ಲಾ ಮಹಿಳಾ ಅಧ್ಯಕ್ಷ ಸ್ಥಾನವನ್ನು ಇವರೇ ಇಟ್ಟುಕೊಂಡು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿ. ಪಾರಂ ಅನ್ನು ತಾರಾ ಗೌಡರಿಗೆ ನೀಡಲಿ ಹಾಗೂ ಕರಾವಳಿ ಪ್ರಾಧಿಕಾರ ಅಧ್ಯಕ್ಷ ಸ್ಥಾನವನ್ನು ನೇತ್ರಾವತಿ ಹೆಗಡೆಯವರಿಗೆ ಈಗಲೇ ಬಿಟ್ಟುಕೊಡಲಿ. ಇವರ ಕುಟುಂಬಕ್ಕೆ 20 ವರ್ಷಗಳಿಂದ ಶಾಸಕ ಸ್ಥಾನವನ್ನು ಬಿಟ್ಟುಕೊಡಲಾಗಿದೆ. ಇನ್ನು ಬೇರೆಯವರಿಗೆ ಬಿಟ್ಟುಕೊಡಲಿ. ಬೇರೆಯವರ ಬಗ್ಗೆ ಹೇಳುವ ಮೊದಲು ಅವರು ಮೊದಲು ಆಚರಿಸಿ ತೋರಿಸಲಿ ಎಂದು ಸವಾಲೆಸೆದರು.
ಅನ್ಯಾಯದ ಬಗ್ಗೆ ಮನೆಮನೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಎಚ್ಚರಿಸಿದರು.
ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹುಲಿಯಣ್ಣ ಗೌಡ ಮಾತನಾಡಿ ತಾನು ಹಿಂದುಳಿದ ಹಾಲಕ್ಕಿ ಸಮಾಜದವನಾಗಿದ್ದು ಶಾಸಕಿ ಶಾರದಾ ಶೆಟ್ಟಿ ತನ್ನ ಎಪಿಎಂಸಿ ನಾಮನಿರ್ದೇಶನ ಸದಸ್ಯತ್ವವನ್ನು ತೆಗೆಸಿ ಹಾಲಕ್ಕಿ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಹಾಲಕ್ಕಿ, ನಾಮಧಾರಿ, ಬ್ರಾಹ್ಮಣ ಸಮಾಜದವರನ್ನು ಪಕ್ಷದಿಂದ ಹೊರಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಗೋವಿಂದ ಜೋಶಿ ಮಾತನಾಡಿ ಶಾಸಕಿ ಶಾರದಾ ಶೆಟ್ಟಿ ಪಕ್ಷದ ಕಾರ್ಯಕರ್ತರನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.
ತಾ.ಪಂ. ಸದಸ್ಯೆ ರೂಪಾ ಗೌಡ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನನ್ನ ವಿರುದ್ದ ಇನ್ನೊಬ್ಬರಿಗೆ ಬಿ. ಫಾರಂ ಕೊಡಲಾಗಿತ್ತು ಎಂದು ಆರೋಪಿಸಿದರು.
ಹಳದಿಪುರ ಗ್ರಾ.ಪಂ. ಅಧ್ಯಕ್ಷೆ ಗುಣಮಾಲಾ ಇಂದ್ರ ಮಾತನಾಡಿ ಮಹಿಳಾ ಘಟಕಕ್ಕೆ ಅಧ್ಯಕ್ಷರನ್ನು ಮಾಡಿದ್ದೇ ಗೊತ್ತಿಲ್ಲ, ಬಿಜೆಪಿಯಲ್ಲಿದ್ದವರನ್ನು ತಂದು ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಜಮೀಲಾ ಶೇಖ್, ರವಿ ಪಟಗಾರ, ರಾಜಶ್ರೀ ನಾಯ್ಕ, ತುಳಸೀದಾಸ ಪುಲಕರ, ಸುರೇಶ ಪಟಗಾರ, ಅಸಿಫ್ ಅಲಿ, ಮಾಬ್ಲೇಶ್ವರ ಮೇಸ್ತ, ನಳಿನಾಕ್ಷಿ ಹೆಗಡೆ, ಜಟ್ಟು ಗೌಡ, ರಾಮಚಂದ್ರ ನಾಯ್ಕ, ಎಂ.ಎಸ್. ಹೆಗಡೆ, ನಾಗರಾಜ ಇಂದ್ರ, ಕಲ್ಪನಾ ನರೋನ್ಹಾ, ಪೂರ್ಣಿಮಾ ಹೆಗಡೆ, ಸುರೇಶ ಮೇಸ್ತ, ಗಜಾನನ ನಾಯ್ಕ, ಶ್ರೀಮತಿ ಆಚಾರಿ ಮತ್ತಿತರರು ಉಪಸ್ಥಿತರಿದ್ದರು.
———————–
ಶಾಸಕಿ ಶಾರದಾ ಶೆಟ್ಟಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡ್ತಿದ್ದಾರೆ. ಇವರೆಲ್ಲ ಎಂ.ಪಿ., ಜಿ.ಪಂ. ತಾ.ಪಂ. ಪ.ಪಂ. ಚುನಾವಣೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಮಾಡಿದ್ದು ಸುಳ್ಳು ಎಂದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವೀಂದ್ರ ನಾಯ್ಕ, ಕೆಪಿಸಿಸಿ ಸದಸ್ಯ ವಿನೋದ ನಾಯ್ಕ ಸವಾಲೆಸೆದರು.
Leave a Comment