ಕಾರವಾರ:
ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ್ದ ಲಕ್ಷಾಂತರ ರೂ ಹಣ ದೋಚಿ ಇಲಾಖೆ ನೌಕರರೊಬ್ಬರು ಪರಾರಿಯಾದ ಘಟನೆ ಬೈತಖೋಲ್ದಲ್ಲಿ ನಡೆದಿದೆ. ಶನಿವಾರ ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ಜನ ಅಂಜೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಡವಾಡ ಮೂಲದ ಲಕ್ಷಣ ಗೋವಿಂದ ನಾಯ್ಕ ಆರೋಪಿ. 1993ರಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ಸೇರಿದ ಈತ ಬೈತಖೋಲ್ ಭಾಗದ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಜನರ ಉಳಿತಾಯ ಖಾತೆ, ಆರ್.ಡಿ ಹಾಗೂ ಇನ್ನಿತರ ಖಾತೆಗಳ ಮೇಲ್ವಿಚಾರಣೆ ನಡೆಸುತ್ತಿದ್ದ. ಸಾಕಷ್ಟು ಜನ ಬೈತಖೋಲ್ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿದ್ದು, ಹಣ ಜಮಾ ಮಾಡುತ್ತಿದ್ದರು. ಅದನ್ನು ದುರುಪಯೋಗ ಪಡಿಸಿಕೊಂಡ ಆರೋಪಿ 400 ಆರ್.ಡಿ ಪುಸ್ತಕ, ಸೌಜನ್ಯ ಯೋಜನೆಯಲ್ಲಿನ ಹಣ ಹಾಗೂ ಇನ್ನಿತರ ಖಾತೆಗಳ ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ನೂರಾರು ಜನ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ದರಣಿ ನಡೆಸಿದರು. ಅಂಚೆ ಇಲಾಖೆ ಲೆಕ್ಕದ ಪ್ರಕಾರ ಆರೋಪಿ 88,500ರೂ ವಂಚನೆ ಮಾಡಿದ್ದಾನೆಂದು ಹೇಳಲಾಗಿದೆ. ಆದರೆ, ಸಾರ್ವಜನಿಕರ ಹೇಳಿಕೆಯಂತೆ ಲಕ್ಷಕ್ಕೂ ಅಧಿಕ ಹಣ ವಂಚನೆಯಾಗಿದೆ.
ಸಾರ್ವಜನಿಕರು ನೀಡಿದ ಹಣವನ್ನು ಅಂಚೆ ಇಲಾಖೆಯಲ್ಲಿರಿಸದೇ ಪಾಸ್ಬುಕ್ನ್ನು ಕೂಡ ತನ್ನಲ್ಲಿಯೇ ಇರಿಸಿಕೊಳ್ಳುತ್ತಿದ್ದ ಆರೋಪ ಲಕ್ಷಣ ಗೋವಿಂದ ನಾಯ್ಕ ಮೇಲಿದೆ. ಈತನ ವಿರುದ್ದ ಅಂಚೆ ಇಲಾಖೆಯ ಅಸಿಸ್ಟೆಂಡ್ ಸುಪ್ರಿಡೆಂಟ್ ಮಹೇಶ್ ಆಚಾರ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಾಸ್ಬುಕ್ನಲ್ಲಿ ನಮೂದಾಗಿರುವಂತೆ ಜನರಿಗೆ ಹಣ ಹಿಂತಿರುಗಿಸುವ ಬಗ್ಗೆಯೂ ಅವರು ಭರವಸೆ ನೀಡಿದ್ದಾರೆ.
Leave a Comment