ಕಾರವಾರ:
ಬೈತಖೋಲ್ ಅಂಚೆ ಕಚೇರಿಯಲ್ಲಿ ಹಂಗಾಮಿ ಕೆಲಸ ನಿರ್ವಹಿಸುತ್ತಿದ್ದ ಕಡವಾಡದ ಲಕ್ಷ್ಮಣ ಗೋವಿಂದ್ ನಾಯ್ಕ ಎಂಬಾತ ಗ್ರಾಹಕರು ಉಳಿತಾಯ, ಆರ್ಡಿ, ಚಾಲ್ತಿ ಹೀಗೆ ವಿವಿಧ ಖಾತೆಗೆ ತುಂಬಲು ನೀಡಿದ್ದ ಹಣವನ್ನು ಖಾತೆಗೆ ತುಂಬದೆ ಮೋಸ ಮಾಡಿ ಪರಾರಿಯಾದ ಬಗ್ಗೆ ದೂರು ದಾಖಲಾಗಿತ್ತು. ಮೋಸ ಮಾಡಿ ಕಣ್ಮರೆಸಿಕೊಂಡಿರುವ ಆರೋಪಿ ಈವರೆಗೂ ಪತ್ತೆಯಾಗಿಲ್ಲ. ಇದರಿಂದ ಕಷ್ಟಪಟ್ಟು ಲಕ್ಷಾಂತರ ರೂ ಸಂಪಾದಿಸಿ ಅಂಚೆ ಕಚೇರಿಯಲ್ಲಿ ತುಂಬಲು ನೀಡಿದ್ದ ಜನರು ಹಣ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕಳೆದ ಮೂರು ದಿನಗಳಿಂದ ರಜೆ ಇದ್ದ ಕಾರಣ ಈ ಬಗ್ಗೆ ಗ್ರಾಹಕರಿಗೆ ಯಾವದೇ ಮಾಹಿತಿಯೂ ಇರಲಿಲ್ಲ. ಮಂಗಳವಾರ ತೆರೆದಿದ್ದು, ಎರಡು ನೂರಕ್ಕೂ ಹೆಚ್ಚು ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಂಚೆ ಮಾಸ್ತರ್ ಲಕ್ಷ್ಮಣ ನಾಯ್ಕ ಮಾಡಿದ ಮೋಸದಿಂದ ಲಕ್ಷಾಂತರ ರೂ ಕಳೆದುಕೊಂಡ ಗ್ರಾಹಕರ ಆಕ್ರೋಶ ಹೆಚ್ಚಿದೆ. ಮಂಗಳವಾರ ಕೂಡ ಸಾರ್ವಜನಿಕರು ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೂಡಲೇ ತಮ್ಮ ಹಣ ಹಿಂತಿರುಗಿಸುವಂತೆ ಅಂಚೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಅಂಚೆ ಕಚೇರಿಯನ್ನು ಪರಿಶೀಲಿಸಿದ ತನಿಖಾಧಿಕಾರಿಗಳು ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಖಾತೆದಾರರ ಕೆಲ ಪಾಸ್ಬುಕ್ಗಳು ದೊರೆತಿದ್ದು, ಒಂದು ಮೋಬೈಲ್ ಹಾಗೂ 10 ಸಾವಿರ ಹಣ ಸಿಕ್ಕಿದೆ. ಅಂಚೆ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಸಿಕ್ಕ ಪಾಸ್ಬುಕ್ಗಳನ್ನು ಅಧಿಕೃತ ಖಾತೆದಾರರಿಗೆ ನೀಡಿದ್ದಾರೆ. ಖಾತೆದರರ ಬಳಿ ಇರುವ ಪಾಸ್ಬುಕ್ಗಳನ್ನು ಪರಿಶೀಲಿಸಿ ಕಳೆದುಕೊಂಡ ಹಣ ಹಾಗೂ ಖಾತೆಯಲ್ಲಿ ಇರುವ ಹಣದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಉಳಿತಾಯ, ಆರ್ಡಿ, ಖಾತೆ ಸೇರಿದಂತೆ ವಿವಿಧ ರಿತಿಯ ಒಟ್ಟು ಸುಮಾರು 1500ಕ್ಕೂ ಹೆಚ್ಚು ಖಾತೆಗಳು ಬೈತಖೋಲ್ ಅಂಚೆ ಕಚೇರಿಯಲ್ಲಿದೆ. ಆದರೆ ಈವರೆಗೂ ಎಷ್ಟು ಖಾತೆಯಲ್ಲಿ ಎಷ್ಟು ಹಣ ಮೊಸ ಮಾಡಲಾಗಿದೆ ಎನ್ನುವ ಲೆಕ್ಕ ಸಿಕ್ಕಿಲ್ಲ.
ಎಲ್ಲಾ ಖಾತೆದಾರರಿಂದ ಮಾಹಿತಿ ಪಡೆಯುತ್ತಿದ್ದು, ಸದ್ಯ ಪಾಸ್ಪುಸ್ತಕದಲ್ಲಿರುವಂತೆ ಅವಶ್ಯವಿದ್ದಲ್ಲಿ ಹಣ ನೀಡಲಾಗುತ್ತದೆ. ಆದರೆ ಪಾಸ್ ಪುಸ್ತಕದಲ್ಲಿ ನಮೂದಾಗದೆ ಇರುವ ಹಣವನ್ನು ನಂತರ ತನಿಖೆ ನಡೆಸಿ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಮೋಹನ್ ತಿಳಿಸಿದರು. ಆದರೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೆಲವರು ಪಾಸ್ ಪುಸ್ತಕದಲ್ಲಿ ಕೇವಲ 50, 500 ರೂ ಬರೆಯಲಾಗಿದೆ. ಲಕ್ಷಾಂತರ ರೂಪಾಯಿ ಹಣ ಮೋಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
Leave a Comment