ದಾಂಡೇಲಿ:
ಇಲ್ಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಯೋಜನೆಗೆ ಮಾನವ ಸಂಪನ್ಮೂಲ ಪೂರೈಕೆ ಮಾಡಲು ಟೆಂಡರ್ ಕರೆದಿದ್ದು, ಇಷ್ಟು ವರ್ಷಗಳ ನಂತರ ಯೋಜನೆ ಟೆಂಡರ್ ಪ್ರಕ್ರಿಯೆಗೆ ಮುಂದಾಗಿರುವುದು ಈಗಿರುವ ನೌಕರರಲ್ಲಿ ಆತಂಕ ಹುಟ್ಟಿಸಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘದ ಅಧ್ಯಕ್ಷ ಹರೀಶ ನಾಯ್ಕ ಹಾಗೂ ನಗರಸಭಾ ಸದಸ್ಯ ಡಿ. ಸ್ಯಾಮಸನ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ರಾಜ್ಯದ ಇತರೆ ಯೋಜನೆಗಳು ಕೇಂದ್ರ ಸರಕಾರದ ಯೋಜನೆಯಾಗಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿ ಹಿಂದೆ ದಾಂಡೇಲಿ ಅಣಶಿ ಹುಲಿ ಯೋಜನೆಯನ್ನೇ ಮರುನಾಮಕರಣ ಮಾಡಲಾಗಿದೆ. ದಾಂಡೇಲಿ ಅಣಶಿ ಹುಲಿ ಯೋಜನೆ ಪ್ರಾರಂಭವಾದಾಗಿನಿಂದಲೂ ನೌಕರರು ದಿನಗೂಲಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಯೋಜನೆಯು ಕೇಂದ್ರ ಸರಕಾರದ ಕನಿಷ್ಟ ವೇತನ ಭವಿಷ್ಯನಿಧಿ, ಇ.ಎಸ್.ಐ.ಸಿ.ಗಳಂತಹ ಸಾಮಾಜಿಕ ಭದ್ರತೆಯಿಂದ ವಂಚಿಸಿದೆ.
ಈಗಾಗಲೇ ಯೋಜನೆಯಲ್ಲಿ ದಿನಗೂಲಿ ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದಲ್ಲಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಭವಿಷ್ಯನಿಧಿ ಮತ್ತು ಇ.ಎಸ್.ಐ.ಸಿ.ಗಳಂತಹ ಸಾಮಾಜಿಕ ಭದ್ರತೆ ಕೊಡಬೇಕಾಗಿದೆ. ಯೋಜನೆಗೆ ಕೇಂದ್ರ ಸರಕಾರದ ಸಂಪೂರ್ಣ ಅನುದಾನದಿಂದ ನಡೆಯುತ್ತಿದ್ದು, ಅದರ ಮೇಲ್ವಿಚಾರಣೆ ಮಾತ್ರ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ.
ಯೋಜನೆಯಲ್ಲಿ ದಿನಗೂಲಿ, ಸಮಾನ ಕೆಲಸಕ್ಕೆ ಸಮಾನ ವೇತನ ಅಥವಾ ಗುತ್ತಿಗೆ ಪದ್ಧತಿ ಕೇಂದ್ರ ಸರಕಾರದ ನಿಯಮಾವಳಿಗಳಂತೆ ಇರಬೇಕೆಂದು ಹಾಗೂ ಯೋಜನೆಯ ನಿರಂತರವಾಗಿ ನಡೆಯುತ್ತಿದ್ದು, ನೌಕರರನ್ನು ಖಾಯಂಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಂದುವೇಳೆ ಟೆಂಡರ್ ಪ್ರಕ್ರಿಯೆ ಮುಂದುವರೆಯುವುದೇ ಆದರೆ ನೌಕರರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕನಿಷ್ಟ ವೇತನ ಇ.ಎಸ್.ಐ.ಸಿ., ಪಿ.ಎಫ್.ಬೋನಸ್ ಮತ್ತು ಸುರಕ್ಷಾ ಸಾಮಾಗ್ರಿಗಳನ್ನು ವಾರದ ರಜೆ, ಗಳಿಕೆ ರಜೆಯನ್ನು ಕೊಡಬೇಕಾಗಿದೆ. ಎಂಟು ಗಂಟೆಗೂ ಹೆಚ್ಚು ಕೆಲಸ ನಿರ್ವಹಿಸಿದರೆ ದುಪ್ಪಟ್ಟು ವೇತನ ಕಾನೂನಿನಂತೆ ಕೊಡಬೇಕಾಗಿದೆ. ಖಾಯಂ ಅಲ್ಲದ ಕಾರ್ಮಿಕರು ಯಾವ ವರ್ಷದಿಂದ ಕೆಲಸ ಮಾಡುತ್ತಾರೋ ಅವರಿಗೆ ಅದೇ ವರ್ಷದಿಂದ ಭವಿಷ್ಯನಿಧಿಯ ವಂತಿಗೆದಾರರನ್ನಾಗಿ ಮಾಡಬೇಕೆಂದು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘ ಅಧ್ಯಕ್ಷ ಹರೀಶ ನಾಯ್ಕ, ಡಿ. ಸ್ಯಾಮಸನ್ ಒತ್ತಾಯಿಸಿದ್ದಾರೆ.
Leave a Comment