ಹೊನ್ನಾವರ :
ಪಟ್ಟಣದ ಬಸ್ನಿಲ್ದಾಣವು ಪ್ರಯಾಣಿಕರಿಗಿಂತ ಸಮಯ ಕಳೆಯುವವರು ಹಾಗೂ ಖಾಸಗಿ ವಾಹನ ಹಾಗೂ ಬೈಕ್ ಇಡುವ ಜನರೇ ಹೆಚ್ಚಾಗಿದ್ದಾರೆ ಆದ್ದರಿಂದ ಇದು ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ.
ಬಸ್ಗಳು ಒಳಪ್ರವೇಶಿಸುವ ಮಾರ್ಗದಲ್ಲಿ ದ್ವಿಚಕ್ರವಾಹನಗಳು ಸಾಲಾಗಿ ನಿಂತಿರುವುದರಿಂದ ಬಸ್ ಚಾಲಕರಿಗೆ ನಿಲ್ದಾಣದೊಳಗೆ ಪ್ರವೇಶಿಸುವುದಕ್ಕೆ ಬಹಳ ತೊಂದರೆಯುಂಟಾಗುತ್ತಿದೆ. ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ಪ್ರವೇಶವಿಲ್ಲ ಎಂದು ಧ್ವನಿವರ್ಧಕದ ಮೂಲಕ ಸೂಚನೆ ನೀಡುತ್ತಿರುತ್ತಾರೆ ಆದರೂ ಖಾಸಗಿ ವಾಹನ ಸವಾರರು ಬಸ್ನಿಲ್ದಾಣದ ಒಳಗಡೆ ತಮ್ಮ ದ್ವಿಚಕ್ರ ವಾಹನಗಳನ್ನು ತಂದು ನಿಲ್ಲಿಸಿಡುತ್ತಾರೆ. ಇದರಿಂದ ಅಂಗವಿಕಲರಿಗೆ ಹಾಗೂ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಬಹಳ ತೊಂದರೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಹಾಗೂ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಅಥವಾ ಪೋಲಿಸರನ್ನು ನೇಮಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಿಗೆ ಹೋಗುವ ಬಸ್ಗಳು ಸಮಯಕ್ಕೆ ಸರಿಯಾಗಿ ಬರದಿದ್ದರಿಂದ ಪ್ರಯಾಣಿಕರು ಅನಾವಶ್ಯಕವಾಗಿ ನಿಲ್ದಾಣದಲ್ಲಿ ಕಾಯುತ್ತಿರಬೇಕಾಗುತ್ತದೆ. ಫಲಕದಲ್ಲಿ ಒಂದು ಸಮಯ ಬರೆದಿಟ್ಟು ನಂತರ ಅದನ್ನು ತಾಸು ಅಥವಾ 2 ತಾಸು ತಡವಾಗಿ ಬಿಡುತ್ತಾರೆ. ಪ್ರಯಾಣಿಕರು ಚಾಲಕರು ಹಾಗೂ ನಿರ್ವಾಹಕರಲ್ಲಿ ವಿಚಾರಿಸಿದಾಗ ಬಸ್ ಕೆಟ್ಟು ಹೋಗಿದೆ ಅದನ್ನು ಸರಿಪಡಿಸಿಕೊಂಡು ಹೋಗಬೇಕೆಂದು ಹೇಳುತ್ತಾರೆ ಇದರಿಂದ ಪ್ರಯಾಣಿಕರು ತೊಂದರೆ ಪಡುವಂತಾಗಿದೆ.
ಹೊಸನಿಲ್ದಾಣ ಅಡಿಗಲ್ಲು ಯಾವಾಗ?
ಹೊಸ ಬಸ್ನಿಲ್ದಾಣಕ್ಕೆ ಅಡಿಗಲ್ಲು ಇಡುವ ಬಗ್ಗೆ ಆಶ್ವಾಸನೆಗಳು ಆಗಾಗ ಕೇಳಿ ಬರುತ್ತಿದೆ. ಆದರೆ
ಇಲ್ಲಿಯವರೆಗೂ ಕೆಲಸ ಆಗಿಲ್ಲ. ಶಾಸಕಿ ಶಾರದಾ ಶೆಟ್ಟಿಯವರ ಅಧಿಕಾರದ ಅವಧಿಯಲ್ಲಿಯೇ ಅಂದರೆ ಚುನಾವಣೆಯ ಮುನ್ನವೇ ಈ ಕೆಲಸ ಪೂರ್ಣಗೊಳ್ಳುವುದೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Leave a Comment