ಕಾರವಾರ:
ಇಳಕಲ್ ರಾಜ್ಯ ಹೆದ್ದಾರಿಯನ್ನು ದುರಸ್ಥಿಗೊಳಿಸಿ ಅಗಲೀಕರಣ ಮಾಡುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯವರು ಶುಕ್ರವಾರ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಸರಕಾರವು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೋಟಿ ಕೋಟಿ ರೂ.ಗಳನ್ನು ವ್ಯಯ ಮಾಡುತ್ತದೆ. ಆದರೆ ಕೇವಲ ಪ್ರವಾಸಿ ತಾಣಗಳನ್ನು, ಕಡಲ ತೀರಗಲನ್ನು ಅಭಿವೃದ್ಧಿ ಮಾಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಕಾಣುವುದದಿಲ್ಲ. ಬದಲಿಗೆ ಮುಖ್ಯವಾಗಿ ರಸ್ತೆಗಳ ಅಭಿವೃದ್ಧಿ ಆಗ ಬೇಕಾಗಿರುವುದು ಅವಶ್ಯಕವಾಗಿದೆ ಎಂದರು.ನಗರದಿಂದ ಕೈಗಾ ಸಂಪರ್ಕ ಕಲ್ಪಿಸುವ ಕಾರವಾರ ಇಳಕಲ್ ರಾಜ್ಯ ಹೆದ್ದಾರಿಯು ಇತ್ತೀಚಿನ ದಿನಗಲಲ್ಲಿ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯ ಮಾರ್ಗದಲ್ಲಿ ಪ್ರಮುಖ ಕೇಂದ್ರವಾದ ರೈಲು ನಿಲ್ದಾಣವಿದ್ದು ಹಲವು ರಾಜ್ಯಗಳಿಂದ ಬರುವ ರೈಲುಗಳು ಇಲ್ಲಿನ ಸಂಪರ್ಕ ಹೊಂದಿವೆ. ಅಲ್ಲದೆ ಈ ರಸ್ತೆಯಲ್ಲಿ ದಿನದ 24 ಗಂಟೆಗಳೂ ಕೂಡ ವಾಹನಗಳು ಓಡಾಡುತ್ತಿರುತ್ತವೆ. ಆದರೆ ರಸ್ತೆ ಮಾತ್ರ ಕೆಲವು ಕಡೆಗಳಲ್ಲಿ ಅತ್ಯಂತ ಕಿರಿದಾಗಿದ್ದು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ ಎಂದು ದೂರಿದರು.ಕಳೆದ ವರ್ಷ ಜಿಲ್ಲಾಡಳಿತವು ಈ ರಸ್ತೆಯ ಪರಿಶೀಲನೆ ನಡೆಸಿ ಅಗಲೀಕರಣದ ಜೊತೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆಯು ಮಾತ್ರ ಪ್ರತಿ ವರ್ಷ ಮಳೆಗಾಲದ ಪೂರ್ವದಲ್ಲಿ ಚರಂಡಿಯ ಮಣ್ಣು ತೆಗೆದು ರಸ್ತೆಯ ಪಕ್ಕ ಹಾಕಿ ರಸ್ತೆ ಅಗಲೀಕರಣ ಮಾಡದೇ ಹಾಗೇ ಬಿಟ್ಟಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಧೂಳಿನ ಸಮಸ್ಯೆ ಉಂಟಾಗುತ್ತದೆ ಎಂದು ಆರೋಪಿಸಿದರು.ಇತ್ತೀಚಿನ ದಿನಗಳಲ್ಲಿ ಕೆಲವು ಮೊಬೈಲ್ ಕಂಪನಿಯವರು ರಸ್ತೆ ಪಕ್ಕದಲ್ಲಿ ಗುಂಡಿ ತೋಡಿ ಅಪಘಾತಗಳಿಗೆ ಕಾರಣವಾಗುತ್ತಿವೆ. ರ್ಯಲ್ವೇ ನಿಲ್ದಾಣದಿಂದ ಬಾಂಡಿಶಿಟ್ಟಾವರೆಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ಪೂರ್ತಿ ರಸ್ತೆಯ ಮೇಲಿನಿಂದ ಹರಿಯುವಂತಾಗಿದ್ದು ಸಾರ್ವಜನಿಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಆದ್ದರಿಂದ ಈ ಹೆದ್ದಾರಿಯನ್ನು ಅಗಲೀಕರಣದೊಂದಿಗೆ ದುರಸ್ಥಿ ಮಾಡುವ ಮೂಲಕ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸ ಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುಭಾಷ ಗುನಗಿ,ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿದಾಸ ನಾಯ್ಕ,ಇದ್ದರು.
Leave a Comment