ಹಳಿಯಾಳ:
ಕನ್ನಡ ನಾಡಿನ ಹೆಮ್ಮೆಯ ಪುತ್ರರು, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ, ಖ್ಯಾತ ವಿಜ್ಞಾನಿಯೂ ಆಗಿದ್ದ ಜಗತ್ತಿನ ಅಗ್ರಪಂಕ್ತಿಯ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಂತು ನಮ್ಮ ರಾಜ್ಯದ ಮತ್ತು ನಮ್ಮ ರಾಷ್ಟ್ರದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದ ಡಾ.ಯು.ಆರ್.ರಾವ್ ಅವರ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಶೊಕ ಸಂದೇಶ ಮಾಧ್ಯಮಕ್ಕೆ ನೀಡಿರುವ ಅವರು ಬಾಹ್ಯಾಕಾಶ ವಿಜ್ಞಾನ, ಕ್ಷಿಪಣಿ ಆವಿಷ್ಕಾರ, ರಾಕೆಟ್ ತಂತ್ರಜ್ಞಾನ, ಉಪಗ್ರಹ ಉಡಾವಣೆ, ಖಗೋಳಶಾಸ್ತ್ರ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತಮ್ಮ ಅಪ್ರತಿಮ ಸಂಶೋಧನೆ ಮತ್ತು ಕೊಡುಗೆಗಳಿಂದ ಡಾ.ರಾವ್ ಅವರು ಅಜರಾಮರರಾಗಿದ್ದಾರೆ. ಇಸ್ರೋದಂತಹ ಸಂಸ್ಥೆಯ ಮುಖ್ಯಸ್ಥರಾಗಿ ಅನೇಕ ಸಾಧನೆಗಳಿಗೆ ಪ್ರೇರಕರಾಗಿದ್ದ ಡಾ. ರಾವ್ ಅವರು ಜಗತ್ತಿನ ಅಗ್ರಪಂಕ್ತಿಯ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಂತು ನಮ್ಮ ರಾಜ್ಯದ ಮತ್ತು ನಮ್ಮ ರಾಷ್ಟ್ರದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದು ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದರು. ಇಂತಹ ಮೇರು ವ್ಯಕ್ತಿಯನ್ನು ಕಳೆದುಕೊಂಡಿದ್ದು, ನಿಜಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ನಾನು ಚಿರಶಾಂತಿ ಕೋರುತ್ತೇನೆ. ಡಾ.ರಾವ್ ಅವರ ಅಗಲಿಕೆಯಿಂದ ತೀವ್ರ ಆಘಾತದಲ್ಲಿರುವ ಅವರ ಕುಟುಂಬದ ಸದಸ್ಯರಿಗೂ ನಾನು ಈ ಮೂಲಕ ನನ್ನ ಸಾಂತ್ವನಗಳನ್ನು ತಿಳಿಸಬಯಸುತ್ತೇನೆ ಎಂದಿದ್ದಾರೆ.
Leave a Comment