ಕಾರವಾರ:
ಅಬಕಾರಿ ಇಲಾಖೆಯಲ್ಲಿನ ಅನುಪಯುಕ್ತ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು, ಬಹುತೇಕರು ಸಾರಿಗೆ ಅಧಿಕಾರಿಗಳು ನಿಗದಿ ಪಡಿಸಿದಕ್ಕಿಂತಲೂ ಕನಿಷ್ಟ ಬೆಲೆಗೆ ಹರಾಜು ಕೂಗಿದರು. ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ವಾಹನಗಳನ್ನು ಬಿಡುವದಿಲ್ಲ ಎಂದು ಅಬಕಾರಿ ಇಲಾಖೆಯವರು ಸ್ಪಷ್ಟ ಪಡಿಸಿದರು. ಆದರೂ ಮೂರು ಕಾಸಿನ ದರಕ್ಕೆ ಕೂಗುವವರ ಸಂಖ್ಯೆ ಕಡಿಮೆಯಿರಲಿಲ್ಲ.
ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಜಿ.ಎಸ್.ಟಿ ಗೊಂದಲದಿಂದಾಗಿ ಮದ್ಯಾಹ್ನ ಆರಂಭವಾಯಿತು. ಅಕ್ರಮ ಮದ್ಯ ಸಾಗಾಟ ವೇಳೆ ಸಿಕ್ಕಿ ಬಿದ್ದಿದ್ದ ಬೈಕ್, ಕಾರು ಹಾಗೂ ಲಾರಿಗಳನ್ನು ಬಹಿರಂಗ ಹರಾಜು ಹಾಕಲಾಯಿತು. ಒಂದೆರಡು ಹೊಸ ಬೈಕ್ ಹೊರತು ಪಡಿಸಿದರೆ ಉಳಿದವು ಗುಜರಿ ಸೇರುವಂತಹ ವಾಹನಗಳಾಗಿದ್ದವು. ಹೀಗಿದ್ದರೂ ನೂರಾರು ಮಂದಿ ಹರಾಜು ಸ್ಥಳದಲ್ಲಿ ಹಾಜರಿದ್ದರು. ಮುಂಗಡ ಹಣ ಪಾವತಿಸಿ ಟೋಕನ್ ಪಡೆದವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದ್ದು, ಆರಂಭದಲ್ಲಿ ಎಲ್ಲವೂ ಗೊಂದಲಗಳಿಂದ ಕೂಡಿತ್ತು. ಮೂರನೇ ಮಹಡಿಯಲ್ಲಿ ನಡೆಯುತ್ತಿದ್ದ ಹರಾಜು ಪ್ರಕ್ರಿಯೆಗೆ ಸಾರ್ವಜನಿಕರ ಅಡ್ಡಿ ಎದುರಾಗಿದ್ದರಿಂದ ಟೋಕನ್ ಪಡೆದವರನ್ನು ಕೋಣೆಯೊಳಗೆ ಕರೆಯಿಸಿಕೊಂಡು ಅಲ್ಲಿ ಹರಾಜು ಕೂಗಲಾಯಿತು. ಗುಣಮಟ್ಟದಿಂದ ಕೂಡಿದ್ದ ಬೈಕ್ವೊಂದನ್ನು ಬಚ್ಚಿಟ್ಟು ಹರಾಜು ಕೂಗಿದ ಪ್ರಸಂಗವೂ ನಡೆದಿದ್ದು, ಅದು ಬೆಳಕಿಗೆ ಬಂದ ನಂತರ ಮರು ಹರಾಜು ನಡೆಸಲಾಯಿತು. ಕೆ.ಎ 30. 7540 ನೊಂದಣಿಯ ಬೈಕ್ವೊಂದನ್ನು ಮೂಲೆಯೊಂದರಲ್ಲಿ ಬಚ್ಚಿಟ್ಟು, ಗುಣಮಟ್ಟವಿಲ್ಲದ ಇನ್ನೊಂದು ಬೈಕ್ ಪ್ರದರ್ಶಿಸಿ ಹರಾಜು ಕೂಗಲಾಗಿತ್ತು. ವ್ಯಕ್ತಿಯೊಬ್ಬರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಗಲಾಟೆ ಆರಂಭಿಸಿದಾಗ ಅಧಿಕಾರಿಗಳು ಸಮಜಾಯಿಶಿ ಕೊಟ್ಟು ಮರು ಹರಾಜು ನಡೆಸಿದರು.
ಬೈಕ್ವೊಂದರ ಮೂಲ ಮಾಲಿಕರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ತಮ್ಮ ಬೈಕ್ ಪಡೆಯಲು ನಾನಾ ರೀತಿಯ ಕಸರತ್ತು ನಡೆಸಿದರು. ಕೊನೆಗೆ ಗರಿಷ್ಟ ಮೊತ್ತ ದಾಖಲಿಸಿ ತಮ್ಮ ಬೈಕ್ನ್ನು ತಾವೇ ಪಡೆದರು. ಒಟ್ಟು 18 ವಾಹನಗಳ ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಇವುಗಳಲ್ಲಿ ಮೂರು ವಾಹನಗಳು ಮಾಜಾಳಿ ಚಕ್ಪೋಸ್ಟ್ನಲ್ಲಿದ್ದವು. 8 ವಾಹನಗಳ ಕುರಿತು ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ಹರಾಜು ಕೂಗಿದ್ದರಿಂದ ಅವುಗಳ ಪ್ರಕ್ರಿಯೆಯನ್ನು ರದ್ದು ಪಡಿಸಲಾಯಿತು. ಆರು ತಿಂಗಳ ನಂತರ ಮತ್ತೆ ಹರಾಜು ಪ್ರಕ್ರಿಯೆ ನಡೆಸುವದಾಗಿ ಇಲಾಖೆಯ ಡೆಪ್ಟಿ ಸುಪ್ರಿಡೆಂಟ್ ಆರ್.ವಿ ತಳ್ಳೆಕರ್ ತಿಳಿಸಿದರು.
Leave a Comment