ಕುಮಟಾ ತಾಲೂಕಿನ ಕುಗ್ರಾಮ ಮೇದನಿ ವಿದ್ಯುತ್ ಸಂಪರ್ಕ ಪಡೆದ ವಾರದಲ್ಲಿಯೇ ಕತ್ತಲಾಗಿದೆ. ಅನಾದಿಕಾಲದಿಂದಲೂ ಚಿಮಣಿ ದೀಪದ ಮುಂದೆ ಜೀವನ ಸಾಗಿಸುತ್ತಿದ್ದ ಗ್ರಾಮಕ್ಕೆ ಸರಕಾರ ಈಚೆಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿತ್ತು. 2016ರ ನವೆಂಬರ್ ತಿಂಗಳಿನಲ್ಲಿ ಕಾಮಗಾರಿಗೆ ಕುಮಟಾ ಶಾಸಕಿ ಶಾರದಾ ಶೆಟ್ಟಿ ಚಾಲನೆ ನೀಡಿದ್ದರು. ಆರಂಭದಲ್ಲಿ ನೆಲದಡಿ ಕೇಬಲ್ ಎಳೆಯುವ ಪ್ರಸ್ತಾಪವಾಗಿತ್ತಾದರೂ ಬಳಿಕ ಕಂಬಗಳ ಮೂಲಕ ಕೋಟಿಂಗ್ ವೈಯರ್ ಬಳಸಿ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂ ಮುಂದಾಗಿತ್ತು. ಅದರಂತೆ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿಯ ಸಾಯಿಮನೆಯಿಂದ ಮೇದನಿ ಗ್ರಾಮಕ್ಕೆ ಸುಮಾರು 13 ಕಿ.ಮೀ. ವರೆಗೆ 300ಕ್ಕೂ ಹೆಚ್ಚು ಕಂಬಗಳನ್ನು ಅರಣ್ಯ ಪ್ರದೇಶದಲ್ಲಿ ಹಾಕಲಾಗಿತ್ತು. ಹೀಗೆ ಸುಮಾರು 5 ತಿಂಗಳು ಕಾಮಗಾರಿ ನಡೆಸಿ ನಾಲ್ಕೈದು ಮನೆಗಳನ್ನು ಹೊರತುಪಡಿಸಿ ಎಲ್ಲ ಮನೆಗಳಿಗೂ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಈ ವಿದ್ಯುತ್ ಸಂಪರ್ಕ ಮೂರೇ ದಿನಕ್ಕೆ ಕಂಬ ಮುರಿದು ಪೂರೈಕೆ ನಿಂತಿದೆ.
ಆಗೊಮ್ಮೆ ಹೆಸ್ಕಾಂನವರು ಬಂದು ದುರಸ್ಥಿಗೊಳಿಸಿದರು. ಆದರೆ ಮಳೆಗಾಲದ ಆರಂಭದಲ್ಲಿ ಗಾಳಿ ಮಳೆಗೆ ಮತ್ತೆ ಮರಗಳುರುಳಿ ಸುಮಾರು ನಾಲ್ಕೈದು ವಿದ್ಯುತ್ ಕಂಬಗಳು ಮುರಿದಿದ್ದು, ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸರಬರಾಜಾಗುತ್ತಿಲ್ಲ. ಬೆಳಕು ಸಿಕ್ಕ ಖುಷಿಯಲ್ಲಿದ್ದ ಗ್ರಾಮಸ್ಥರಿಗೆ ವಾರದೊಳಗೆ ಕತ್ತಲು ಆವರಸಿಕೊಂಡಿದೆ. ರಸ್ತೆ, ಸಾರಿಗೆ, ಕುಡಿಯುವ ನೀರು ಹೀಗೆ ಬಹುತೇಕ ಎಲ್ಲ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮ ಅಭಿವೃದ್ಧಿಗೆ ಎದುರು ನೋಡುತ್ತಿದೆ. ಚಿಕ್ಕಪುಟ್ಟ ಕೆಲಸಗಳಿಗೂ 8 ಕಿ.ಮೀ ಕಾಲುನಡಿಗೆಯಲ್ಲಿ ಸಾಗಿ ಬಳಿಕ ವಾಹನ ಹಿಡಿದು ಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಇರುವ ಈ ಊರಿಗೆ ಸರಕಾರ ನೀಡುವ ಅಲ್ಪ ಸ್ವಲ್ಪ ಸೌಕರ್ಯಗಳು ಸಿಗುತ್ತಿಲ್ಲ.
ಮೇದನಿಯಲ್ಲಿ 42 ಮನೆಗಳಿವೆ. ನಾಲ್ಕೈದು ಮನೆಗಳನ್ನು ಹೊರತುಪಡಿಸಿ ಬಹುತೇಕ ಮನೆಗಳಿಗೆ ಉಚಿತವಾಗಿ ವಿದ್ಯುತ್ ಮೀಟರ್ ಅಳವಡಿಸಿ ಸಂಪರ್ಕ ಕಲ್ಪಿಸಲಾಗಿದೆ. ಉಳಿದಿರುವ ಮನೆಯವರಿಗೂ ಉಚಿತ ಸಂಪರ್ಕ ನೀಡುವಂತೆ ಸ್ಥಳೀಯ ಶಾಸಕಿ ಶಾರದಾ ಶೆಟ್ಟಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅವರ ಸೂಚನೆ ಪಾಲನೆಯಾಗಿಲ್ಲ.
ದಶಕಗಳ ಬೇಡಿಕೆ ಈಡೇರಿಸಿ ಊರಿಗೆ ಬೆಳಕು ಬಂದಿತೆಂದು ಅಲ್ಲಿನ ಜನ ಸಂತಸ ಪಟ್ಟಿದ್ದರು. ಹೊಂಡ ತೋಡಿ ವಿದ್ಯುತ್ ಕಂಬ ನೆಡುವದರಿಂದ ಹಿಡಿದು ವಿದ್ಯುತ್ ಸಂಪರ್ಕ ಕಲ್ಪಿಸುವವರೆಗೂ ಬಹುತೇಕ ಎಲ್ಲಾ ಕೆಲಸಗಳನ್ನು ಗ್ರಾಮಸ್ಥರೇ ನಿಭಾಯಿಸಿದ್ದರು. ಆದರೆ, ವಿದ್ಯುತ್ ಸಂಪರ್ಕ ಒದಗಿದ ವಾರದೊಳಗೆ ಸಂಪರ್ಕ ಕಡಿತಗೊಂಡಿರುವದು ಜನರಲ್ಲಿ ನಿರಾಸೆ ಹುಟ್ಟಿಸಿದೆ.
ಗ್ರಾಮವು ಅರಣ್ಯ ಪ್ರದೇಶದಲ್ಲಿರುವುದರಿಂದ ನೆಲದಡಿ ಕೇಬಲ್ ಎಳೆದು ವಿದ್ಯುತ್ ಸಂಪರ್ಕ ನೀಡುವಂತೆ ಕೇಳಲಾಗಿತ್ತು. ಅದನ್ನು ನಿರಾಕರಿಸಿದ ಹೆಸ್ಕಾಂ ಕಂಬದ ಮೇಲೆ ಸಂಪರ್ಕ ಕಲ್ಪಿಸಿದ್ದು, ಇದೀಗ ಮೂರು ತಿಂಗಳ ಹಿಂದೆ ಮರಗಳು ಬಿದ್ದು ಕಂಬ ಮುರಿದಿದೆ. ಅದನ್ನು ಸರಿಪಡಿಸದ ಕಾರಣ ನಾವು ಮತ್ತೆ ಕತ್ತಲೆಯಲ್ಲಿರುವಂತಾಗಿದೆ.
-ಪರಮೇಶ್ವರ ಗೌಡ, ಗ್ರಾಮಸ್ಥ
Leave a Comment