ಹಳಿಯಾಳ:
ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಕೈಯಲ್ಲಿ ಇರುವುದರಿಂದ ಅಧಿಕಾರಿಗಳು ಸ್ವಾರ್ಥಕ್ಕಾಗಿ ನೌಕರಿ ಮಾಡದೆ ತಮ್ಮ ಜವಾಬ್ದಾರಿ ಅರಿತು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಉದ್ಭವಿಸದೆ ಯೋಜನೆಗಳ ಲಾಭ ಎಲ್ಲರಿಗೂ ದೊರೆಯುತ್ತದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಶನಿವಾರ ನಡೆದ ತಾಲೂಕಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಸರ್ಕಾರದ ವಿಶೇಷ ಯೋಜನೆಯಡಿ ಹಳಿಯಾಳ-ಜೋಯಿಡಾ ಕ್ಷೇತ್ರಕ್ಕೆ 600 ಕಂಪ್ಯೂಟರ್ಗಳನ್ನು ಮುಂದಿನ 2-3 ತಿಂಗಳಲ್ಲಿ ವಿತರಿಸಲಾಗುವುದು ಇದು ರಾಜ್ಯದಲ್ಲೇ 5 ಕ್ಷೇತ್ರಕ್ಕೆ ಮಾತ್ರ ಮಂಜೂರಾಗಿರುವ ಯೋಜನೆ ಎಂದರು.
ಸರ್ಕಾರದ ಸಾಲ ಮನ್ನಾದಿಂದ ತಾಲೂಕಿನ 16397 ರೈತರಿಗೆ 55.71 ಕೋಟಿ ರೂ, ಜೋಯಿಡಾ ತಾಲೂಕಿನ 3614 ರೈತರಿಗೆ 14.64 ಕೋಟಿ ಸೇರಿದಂತೆ ಒಟ್ಟೂ 71 ಕೋಟಿ ರೂ ಮನ್ನಾ ಮಾಡಲಾಗಿದ್ದು ಸಾಲ ಮನ್ನಾ ಮತ್ತು ಸಬ್ಸಿಡಿ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆ ಆಗುವುದರಿಂದ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ತೊರಿದ್ದು ಇದನ್ನು ವಿರೋಧ ಪಕ್ಷದವರು ಅರಿತು ಇಲ್ಲ ಸಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.
ಪಶು ಇಲಾಖೆ ಅಧಿಕಾರಿ ಹಿರೇಮಠ ಇಲಾಖೆಯ ಪ್ರಗತಿಯನ್ನು ವಾಚಿಸಿ ಹಳಿಯಾಳ ಇಲಾಖೆಯಲ್ಲಿ ಸುಮಾರು 13 ಪ್ರಮುಖ ಹುದ್ದೆಗಳು ಖಾಲಿ ಇರುವ ಬಗ್ಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿದ ಸಚಿವ ದೇಶಪಾಂಡೆ ಪಶು ಸಂಗೋಪನಾ ಸಚಿವ ಮಂಜು ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಹುದ್ದೇಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಇನ್ನೂ ಇಲಾಖೆಯಲ್ಲಿ ಅಮೃತ ಹಾಗೂ ಪಶು ಭಾಗ್ಯ ಯೋಜನೆಯ ಸೇರಿದಂತೆ ಇನ್ನಿತರ ಯೋಜನೆಗಳನ್ನು ಅರ್ಹರಿಗೆ ತಲುಪುವಂತೆ ಮಾಡಲು ಜನಪ್ರತಿನಿಧಿಗಳ ಗಮನಕ್ಕೆ ತರುವ ಮೂಲಕ ಫಲಾನುಭವಿ ಆಯ್ಕೆ ಮಾಡುವಂತೆ ಹಾಗೂ ತಮ್ಮ, ವಿಪ ಸದಸ್ಯರ ಗಮನಕ್ಕೆ ತಂದು ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸಬೇಕೆಂದು ಸೂಚಿಸಿದರು.
ವೈದ್ಯಕೀಯ ತಾಜ್ಯವನ್ನು ಧಾರವಾಡಕ್ಕೆ ಸಾಗಿಸುವ ಬದಲು ದೂರದ ಅಂಕೋಲಾ ಪಟ್ಟಣಕ್ಕೆ ಸಾಗಾಟ ನಡೆಸಲು ಲಕ್ಷಾಂತರ ಅನುದಾನವು ಅನವಶ್ಯಕವಾಗಿ ವೆಚ್ಚವಾಗುತ್ತಿದೆ ಎಂಬ ವಿಷಯವನ್ನು ಹಾಗೂ 108 ವಾಹನ ಸಮಸ್ಯೆಯ ಬಗ್ಗೆ ಸಭೆಯಲ್ಲಿ ಆರೋಗ್ಯಾಧಿಕಾರಿಗಳು ಪ್ರಾಸಾಪಿಸಿದಾಗ ತಕ್ಷಣ ದೂರವಾಣಿ ಮೂಲಕ ಆರೋಗ್ಯ ಸಚಿವರನ್ನು ಸಂಪರ್ಕಿಸಿದ ದೇಶಪಾಂಡೆ ಸಮಸ್ಯೆಯನ್ನು ಪರಿಹರಿಸಿದರು. ಹಳಿಯಾಳ ಸರ್ಕಾರಿ ಆಸ್ಪತ್ರೆ ಸುಸಜ್ಜಿತವಾಗಿದ್ದು ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದ್ದು ರೋಗಿಗಳಿಗೆ ಧಾರವಾಡ-ಹುಬ್ಬಳ್ಳಿಗಳಿಗೆ ಕಳಿಸದೆ ಇಲ್ಲಿಯೇ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ಕೃಷಿ ಇಲಾಖೆ ಅಧಿಕಾರಿ ಮಾತನಾಡಿ ತಾಲೂಕಿನಲ್ಲಿ ಈವರೆಗೆ ಶೇ.51 ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದ್ದು ಭತ್ತದ ಬೆಳೆಯು ಸುಧಾರಣೆಯ ಹಂತದಲ್ಲಿದ್ದು, ಮೆಕ್ಕೆಜೋಳ, ಕಬ್ಬು ಮತ್ತು ಹತ್ತಿಯ ಬೆಳೆಯು ಉತ್ತಮವಾಗಿದೆ. ತುಂತುರು ನೀರಾವರಿ, ಕೃಷಿ ಉಪಕರಣಗಳ ವಿತರಣೆ ಸೇರಿದಂತೆ ಸಬ್ಸಿಡಿ ದರದಲ್ಲಿ ಇನ್ನಿತರ ಕೃಷಿಗೆ ಸಂಬಂದಿಸಿದ ಪರಿಕರಗಳನ್ನು ವಿತರಿಸಲಾಗಿದೆ ಎಂದು ಕೃಷಿ ಅಕಾರಿಗಳು ಸಭೆಗೆ ತಿಳಿಸಿದರು.
ತಾಲೂಕಿನಲ್ಲಿ ಒಟ್ಟೂ 180 ಪ್ರಾಥಮಿಕ ಹಾಗೂ 37 ಪ್ರೌಢಶಾಲೆಗಳಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ, ಶಿಕ್ಷಕರ ಕೊರತೆ ಇಲ್ಲ, ಪಟ್ಟಣದ ಕಾರ್ಮೇಲ್ ಶಾಲೆಯಲ್ಲಿ ಸೈಕಲ್ಗಳ ಜೊಡಣೆ ಕಾರ್ಯ ನಡೆಯುತ್ತಿದ್ದು ಸದ್ಯದಲ್ಲೇ ಅವುಗಳನ್ನು ವಿತರಿಸಲಾಗುವುದು ಎಂದ ಅವರು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ಸಮವಸ್ತ್ರ , ಶೂ-ಸಾಕ್ಸ್ಗಳ ಖರೀದಿಗಾಗಿ ಶಾಲಾ ಅಭಿವೃದ್ದಿ ಸಮಿತಿಗಳಿಗೆ ಈಗಾಗಲೇ ಹಣ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ ಹಳಿಯಾಳದಿಂದ ವರ್ಗವಾಗಿ ಹೊಗುತ್ತಿರುವ ಬಿಇಓ ಸಿಎಸ್ ನಾಯ್ಕ ಕಾರ್ಯವನ್ನು ಶ್ಲಾಘನೆ ವ್ಯಕ್ತಪಡಿಸುತ್ತಾ ನಾಯ್ಕ ರವರು ಹಳಿಯಾಳ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಣ ಇಲಾಖೆಯಲ್ಲಿ ಹೊಸ ಆಯಾಮ ಸೃಷ್ಠಿಸಿದ್ದು ಅವರಂತೆ ಇತರ ಅಧಿಕಾರಿಗಳು ವೃತ್ತಿಯ ಬಗ್ಗೆ ಶೃದ್ದಾಭಕ್ತಿಯಿಂದ ಕಾರ್ಯನಿರ್ವಹಿಸುವಂತೆ ಕಿವಿ ಮಾತು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್. ಲಕ್ಷ್ಮೀ ಕೋರ್ವೆಕರ, ಬಗರ ಹುಕುಂ ಸಮಿತಿಯ ಅಧ್ಯಕ್ಷ ಸುಭಾಶ ಕೋರ್ವೆಕರ, ತಹಶೀಲದಾರ ವಿದ್ಯಾಧರ ಗುಳಗುಳಿ, ತಾಪಂ ಈಒ ಲಕ್ಷ್ಮಣರಾವ್ ಯಕ್ಕುಂಡಿ ಎಲ್ಲ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದರು.
Leave a Comment