ಕಾರವಾರ:
ಅರಗಾದ ನೇವಲ್ಬೇಸ್ ಮುಂಭಾಗ ನೌಕಾದಳದ ಹೊರ ಗುತ್ತಿಗೆ ನೌಕರರು ನೂರಾರು ಖಾಸಗಿ ವಾಹನವನ್ನು ನಿಲ್ಲಿಸುತ್ತಿದ್ದು, ಇದರಿಂದ ಪ್ರತಿದಿನ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಶನಿವಾರ ಬೆಳಗ್ಗೆ ನೇವಿ ಪೊಲೀಸರು ಹೊರಗೆ ನಿಲ್ಲಿಸಿಟ್ಟ ದ್ವಿಚಕ್ರ ವಾಹನವೊಂದಕ್ಕೆ ಬೀಗ ಹಾಕಿದ್ದು ಆಕ್ರೋಶಕ್ಕೆ ಕಾರಣವಾಯಿತು.
ನೆವಲ್ ಬೇಸ್ನಲ್ಲಿ ಹೊರ ಗುತ್ತಿಗೆ ನೌಕರರರಾಗಿ ಸ್ಥಳಿಯರು ಹಾಗೂ ಹೊರ ಭಾಗದ ಅನೇಕ ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಹೆದ್ದಾರಿಯಲ್ಲಿ ಭಾರೀ ಗಾತ್ರದ ಇತರೆ ವಾಹನಗಳು ಓಡಾಡುವದರಿಂದ ಪದೇ ಪದೇ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಇದಲ್ಲದೇ ಅಪಘಾತಗಳು ನಡೆಯುತ್ತಿವೆ. ಹೀಗಾಗಿ ನೌಕಾನೆಲೆ ಒಳಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎಂದು ವಿವಿಧ ಸಂಘಟನೆಯವರು ಒತ್ತಾಯಿಸಿದರು. ಆದರೆ, ನೌಕಾನೆಲೆ ಒಳಭಾಗದಲ್ಲಿ ನೇವಿ ಅಧಿಕಾರಿಗಳಿಗೆ ಮಾತ್ರ ವಾಹನ ಕೊಂಡೊಯ್ಯಲು ಅವಕಾಶವಿದ್ದು, ಹೊರ ಗುತ್ತಿಗೆ ನೌಕರರ ಬೇಡಿಕೆಯನ್ನು ನೌಕಾದಳದವರು ನಿರಾಕರಿಸಿದರು. ಈ ವೇಳೆ ನೌಕಾನೆಲೆ ಪ್ರವೇಶ ದ್ವಾರದ ಬಳಿ ನಿಲ್ಲಿಸಿದ ವಾಹನವೊಂದಕ್ಕೆ ನೇವಿ ಪೊಲೀಸರು ಬೀಗ ಜಡಿದಿದ್ದು, ಸ್ಥಳೀಯರನ್ನು ಕೆರಳಿಸಿತು. ಪ್ರತಿಭಟನೆ ನಡೆಸುವ ಹಂತ ತಲುಪಿದಾಗ ಬೀಗವನ್ನು ತೆರೆದರು. ನಿತ್ಯ ಬೆಳಗ್ಗೆ ಹಾಗೂ ಸಂಜೆ ನೌಕಾನೆಲೆ ಪ್ರವೇಶ ದ್ವಾರದಲ್ಲಿ ಟ್ರಾಪಿಕ್ ಜಾಮ್ ಆಗುವದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಗುರುಪ್ರಸಾದ ನಾಯ್ಕ ಹಾಗೂ ದೀಪಕ ನಾಯ್ಕ ಒತ್ತಾಯಿಸಿದರು.
Leave a Comment