ಕಾರವಾರ: ಶಾಲೆಗೆ ಹೊರಟ ಬಾಲಕಿಯನ್ನು ಪೊಲೀಸರು ಒತ್ತಾಯಪೂರ್ವಕವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಬುಧವಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್ ದೂರು ನೀಡಿರುವ ಪಾಲಕರು, ಪೊಲೀಸರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜುಲೈ 31ರಂದು ತಮ್ಮ ಬೈಕ್ಗೆ ಬೈಕ್ಗೆ ಬಾಲಕಿ ಗೆರೆ ಎಳೆದು ಹಾಳು ಮಾಡಿರುವ ಬಗ್ಗೆ ಇಕ್ಬಾಲ್ ಇದಾಯತ್, ನಜೀರ್ ಶೇಖ್ ಎಂಬಾತರು ಪೊಲೀಸರಿಗೆ ದೂರು ನೀಡಿದ್ದರು. ಆಕೆಯನ್ನು ವಿಚಾರಣೆ ನಡೆಸುವಂತೆ ದೂರುದಾರರು ಪೊಲೀಸರ ಮೇಲೆ ಒತ್ತಡ ತಂದಿದ್ದರು. ವಿಚಾರಣೆಗಾಗಿ ಪೊಲೀಸರು ಕೋಣೆವಾಲಕ್ಕೆ ಆಗಮಿಸಿದಾಗ ಬಾಲಕಿ ಶಾಲೆಗೆ ಹೊರಡಲು ಸಿದ್ದವಾಗಿದ್ದು, ಠಾಣೆಗೆ ಬರುವಂತೆ ಸೂಚಿಸಿದರು. ಒಪ್ಪದಿದ್ದಾಗ ಸಮವಸ್ತ್ರದಲ್ಲಿಯೇ ಆಕೆಯನ್ನು ಒತ್ತಾಯಪೂರ್ವಕವಾಗಿ ಬೈಕ್ ಮೇಲೆ ಕೂರಿಸಿಕೊಂಡು ಕರೆದೊಯ್ಯಲಾಗಿದೆ. ಈ ಬಗ್ಗೆ ಪಾಲಕರಿಗೂ ಮಾಹಿತಿ ನೀಡಿಲ್ಲ ಎಂದು ವಿವರಿಸಿದರು.
“ಠಾಣೆಯಲ್ಲಿದ್ದ ಮೂವರು ಯುವಕರು ನನ್ನನ್ನು ಕಂಡ ಕೂಡಲೇ ಕೆಲ ಮಾತುಗಳಿಂದ ನಿಂದಿಸಿ ಪ್ರಕರಣವನ್ನು ದಾಖಲಿಸಿ ಜೈಲಿನಲ್ಲಿರುವಂತೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ಈ ವೇಳೆ ಪೊಲೀಸರ ಎದುರೇ ಹೊಡೆಯಲು ಮುಂದಾಗಿದ್ದು, ನಂತರ ಆಗಮಿಸಿದ ಪಾಲಕರಿಂದ ಪೊಲೀಸರು ಸಹಿ ಪಡೆದರು” ಎಂದು ಬಾಲಕಿ ವಿವರಿಸಿದರು. ಘಟನೆಯಿಂದ ಹೆದರಿರುವ ಮಗಳು ಕಳೆದ ಎರಡು ದಿನದಿಂದ ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ. ಊಟವನ್ನು ಮಾಡುತ್ತಿಲ್ಲ. ಪೊಲೀಸರ ವರ್ತನೆಯಿಂದ ಹೆದರಿರುವ ಮಗಳು ಬೇರೆ ಊರಿಗೆ ತೆರಳುವಂತೆ ಒತ್ತಾಯಿಸುತ್ತಿರುವದಾಗಿ ಬಾಲಕಿ ತಂದೆ ನಬಿಸಾಬ ಅಳಲು ತೋಡಿಕೊಂಡರು. ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೆ ವಿಷಯವನ್ನು ಬಹಿರಂಗ ಪಡಿಸದಂತೆ ಸೂಚಿಸುತ್ತಾರೆ. ತಮ್ಮ ಮೇಲೆ ನಿರಂತರವಾಗಿ ಇಕ್ಬಾಲ್ ಎನ್ನುವವರು ತೊಂದರೆ ನೀಡುತ್ತಿದ್ದು, ಅವರ ಕುಮ್ಮಕ್ಕಿನಿಂದ ಪೊಲೀಸರೇ ತಮ್ಮ ಮಗಳನ್ನು ಒತ್ತಾಯಪೂರ್ವಕವಾಗಿ ಠಾಣೆಗೆ ಕರೆದೊಯ್ದು ಹಿಂಸೆ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ತಾಯಿ ಚಮನ್ ಬಿ ದೂರಿದರು.
ನೆರೆಮನೆಯ ಇಕ್ಬಾಲ್ ಇನ್ನಿತರರು 2016ರಲ್ಲಿ ತಂಗಿಯ ಮಗಳನ್ನು ಕದ್ರಾಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದರಿಂದ ಮೂವರಿಗೆ ಜೈಲು ಶಿಕ್ಷೆಯಾಗಿತ್ತು. ಇದೀಗ ಅವರು ಜಾಮೀನಿನ ಮೇಲೆ ಹೊರ ಬಂದಿದ್ದು, ಇದೇ ಸೇಡಿನಿಂದ ಮಗಳ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ತಮ್ಮ ಜಮೀನು ಕಬಳಿಸಲು ಯತ್ನಿಸುತ್ತಿರುವ ಇಕ್ಬಾಲ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಚಮನ್ ಬಿ ಆಗ್ರಹಿಸಿದರು. ತಪ್ಪಿತಸ್ಥ ಪೊಲೀಸ್ ವಿರುದ್ದ ಕ್ರಮ ಜರುಗಿಸುವದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್ ತಿಳಿಸಿದರು.
Leave a Comment