ಕಾರವಾರ:
ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ನಿರ್ಲಕ್ಷ್ಯ ಖಂಡಿಸಿ ಶುಕ್ರವಾರ ರೋಗಿಗಳು ಪ್ರತಿಭಟಿಸಿದರು.
ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ಆಗಮಿಸಿದ್ದ ಕೆಲ ರೋಗಿಗಳು ವೈದ್ಯರು ಸಿಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ತೀವ್ರ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಲು ತೆರಳಿದಾಗ ಅಲ್ಲಿ ವೈದ್ಯರಿಲ್ಲದಿರುವರಿಂದ ರೋಗಿ ಪರದಾಡುವಂತಾಯಿತು. ವೈದ್ಯರ ಲಭ್ಯತೆ ಇಲ್ಲದಿರುವ ಕುರಿತು ಸಹಾಯವಾಣಿಗೆ ಸಂಪರ್ಕಿಸಿದರೆ, ಅಲ್ಲಿಯೂ ಸರಿಯಾದ ಸ್ಪಂದನೆ ಸಿಗಲಿಲ್ಲ. ಹೀಗಾಗಿ ರೋಗಿಗಳು ಪ್ರತಿಭಟಿಸಿದರು. ಸುಮಾರು ಒಂದು ಗಂಟೆಯಿಂದ ವೈದ್ಯರಿಗಾಗಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇವೆ. ಆದರೆ ಯಾರೂ ಕೂಡ ಬಂದಿಲ್ಲ. ಈ ಬಗ್ಗೆ ಇಲ್ಲಿನ ದಾದಿಯರನ್ನ ಕೇಳಿದರೆ, ಈಗ ಬರ್ತಾರೆ. 10 ನಿಮಿಷ ಬಿಟ್ಟು ಬರ್ತಾರೆ ಎನ್ನುತ್ತಿದ್ದಾರೆ. ಅನೇಕ ವೈದ್ಯರು ರಜೆಯಲ್ಲಿದ್ದು, ದಾಖಲಾತಿಯಲ್ಲಿ ನಮೂದಿಸಿಲ್ಲ ಎಂದು ದೂರಿದರು.
ರೋಗಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಳಕರ್, ಪ್ರತಿದಿನ ಆಸ್ಪತ್ರೆಗೆ 800 ಮಂದಿ ರೋಗಿಗಳು ಚಿಕಿತ್ಸೆ ಹಾಗೂ ಇನ್ನಿತರೆ ಅವಶ್ಯಕತೆಗಾಗಿ ಬಂದು ಹೋಗುತ್ತಿರುತ್ತಾರೆ. ಅವರನ್ನೆಲ್ಲ ಇರುವ 8 ವೈದ್ಯರೇ ನಿಭಾಯಿಸಬೇಕು. ಕೆಲವು ವೈದ್ಯರು ಬೆಳಿಗ್ಗೆ ಪಾಳಿಯಲ್ಲಿದ್ದರೆ ರಾತ್ರಿ ವಿಶ್ರಾಂತಿಗೆ ತೆರಳುತ್ತಾರೆ. ರಾತ್ರಿ ಪಾಳಿಯಲ್ಲಿದ್ದರೆ ಬೆಳಿಗ್ಗೆ ವಿಶ್ರಾಂತಿಗೆ ತೆರಳುತ್ತಾರೆ. ಕೆಲವೊಬ್ಬರು ರಜೆ ತೆಗೆದುಕೊಂಡಿದ್ದಾರೆ. ತುರ್ತು ಚಿಕಿತ್ಸೆ ಅವಶ್ಯ ಇರುವ ರೋಗಿಗಳಿಗೆ ಚಿಕಿತ್ಸೆ ನೀಡಿ, ಕಚೇರಿಗೆ ಆಗಮಿಸುವವರೆಗೆ ವಿಳಂಭವಾಗುತ್ತದೆ ಎಂದರು. ತುರ್ತು ಸೇವೆಗೆ ಲಭ್ಯ ಇರುವ ವೈದ್ಯರ ಬಳಿ ಚಿಕಿತ್ಸೆ ಪಡೆಯಬಹುದು ಎಂದರು. ಶುಶ್ರೂಷಕಿಯರು, ಸಹಾಯವಾಣಿ ಸಿಬ್ಬಂದಿ, ಕೆಲ ವೈದ್ಯರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಹಾಗೂ ಜನರಿಗೆ ಸ್ಪಂದಿಸುವಂತೆ ಸೂಚಿಸಿದರು.
ಬೆನ್ನು ಮೂಳೆಯ ನೋವಿನಿಂದ ಬಳಲುತ್ತಿದ್ದ ತಾಯಿ ರಾಮೇಶ್ವರಿ ನಾಯ್ಕಗೆ ಗುರುವಾರ ರಾತ್ರಿ ಎಕ್ಸ್ ರೇ ತೆಗೆಯಲು ಆಸ್ಪತ್ರೆಯ ಕ್ಷ ಕಿರಣ ವಿಭಾಗಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಎಕ್ಸ್ ರೇ ಮಾಡಿದಾಗ ಅದು ಸರಿಯಾಗಿ ಬಂದಿಲ್ಲ. ಈ ಬಗ್ಗೆ ವಿಚಾರಿಸಿದರೆ ಅದರಲ್ಲಿ ಇಂಕ್ ಇಲ್ಲ ಎಂಬ ಉತ್ತರ ಬಂದಿದೆ ಎಂದು ರೋಗಿ ಸಂಬಂಧಿ ಆರೋಪಿಸಿದರು. ಖಾಸಗಿಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ ಬಗ್ಗೆ ದೂರಿದರು. ವೈದ್ಯಕೀಯ ಮಹಾವಿದ್ಯಾಲಯದ ಎಕ್ಸ್ ರೇ ಮಶೀನ್ ನಲ್ಲಿ ಮಾಡುವಂತೆ ತಿಳಿಸಿದರೆ ಫಿಲ್ಮ್ ಇಲ್ಲ ಎಂದರು. ಕಾರಣ ಕೇಳಿದರೆ ಜಿಎಸ್ಟಿ ಯಿಂದಾಗಿ ಫಿಲ್ಮ್ ಕಳುಹಿಸಿಲ್ಲ ಎಂದು ಕಾರಣ ನೀಡಿದರು ಎಂದು ನಂದನಗದ್ದಾದ ನಿವಾಸಿ ರಮೇಶ್ ನಾಯ್ಕ ದೂರಿದರು.
ತಿಂಗಳಾದರು ಆಸ್ಪತ್ರೆಯಲ್ಲಿ ಮಾತ್ರೆಗಳು ಸಿಗುತ್ತಿಲ್ಲ. ಖಾಸಗಿಯಲ್ಲಿ ಮಾತ್ರೆ ತೆಗೆದುಕೊಳ್ಳುವಂತೆ ಇಲ್ಲಿನ ವೈದ್ಯರು ತಿಳಿಸುತ್ತಾರೆ. ಆದರೆ ಎಲ್ಲಿಯೂ ಆ ಮಾತ್ರೆಗಳು ಸಿಗುವುದಿಲ್ಲ ಎಂದು ರೋಗಿಯೊಬ್ಬರು ಅಳಲು ತೋಡಿಕೊಂಡರು. ಕೆಲ ಮಾತ್ರೆಗಳು ಬರಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ರೋಗಿಗಳಿಗೆ ಬದಲಿ ಮಾತ್ರೆಗಳನ್ನು ನಾವು ಶಿಫಾರಸ್ಸು ಮಾಡುತ್ತೇವೆ ಎಂದು ವೈದ್ಯಾಧಿಕಾರಿಗಳು ಸಮಾಧಾನ ಪಡಿಸಿದರು. ನಗರ ಠಾಣೆಯ ಪಿಎಸ್ಐ ಉಮೇಶ್ ಪಾವಸ್ಕರ್ ಭೇಟಿ ನೀಡಿದ್ದರು.
Leave a Comment