ಕಾರವಾರ: ಜಿಲ್ಲೆಯಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಅರಣ್ಯ ಪ್ರದೇಶಗಳ ಮಾರ್ಗವಾಗಿ ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗದಲ್ಲಿ ನಿರ್ಮಾಣ ಮಾಡಲು ಸರಕಾರ ಸಜ್ಜಾಗಿದೆ.
ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಿ ಮಳೆಗಾಲದ ಮುಕ್ತಾಯದ ನಂತರ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕೆ ಪರಿಸರವಾದಿಗಳು ಮತ್ತು ವನ್ಯ ಜೀವಿ ಪ್ರಿಯರಿಂದ ತೀವ್ರ ವಿರೋಧದ ವ್ಯಕ್ತವಾಗುತ್ತಿದೆ. ಕಾಳಿ ಹುಲಿ ಸಂರಕ್ಷಣಾ ಪ್ರದೇಶ ಹಾಗೂ ದಾಂಡೇಲಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಕೆನರಾ ಟ್ರೇಲ್ ಯೋಜನೆಯ ಚಾರಣ ಮಾರ್ಗ ಹಾದು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ವನ್ಯ ಜೀವಿ ಮಂಡಳಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಅನುಮತಿ ಪಡೆಯದೆ ನಿರ್ಲಕ್ಷ್ಯ ವಹಿಸಿದೆ. ಅಲ್ಲದೆ ಎರಡು ವರ್ಷಗಳ ಹಿಂದೆಯೇ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿತ್ತು. ಈ ನಡುವೇ ಹುಲಿ ವನ್ಯಧಾಮ, ಇತರ ವನ್ಯ ಜೀವಿಗಳು ಆವಾಸ ಸ್ಥಾನಕ್ಕೆ ಧಕ್ಕೆಯಾಗುವ ಕಾರಣ ನೀಡಿ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಯೋಜನೆಗೆ ಹಿನ್ನಡೆಯಾಗಿತ್ತು.
ಈ ಯೋಜನೆಗೆ ಅನುಷ್ಠಾನಕ್ಕೆ ತಂದು ಮರುಜೀವ ನೀಡುವ ದೃಷ್ಟಿಯಿಂದ ಯೋಜನೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಕಳೆದ ಜು.28ರಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆ ನಡೆಸಲಾಗಿದೆ. ಕಾಳಿ ಹುಲಿ ಸಂರಕ್ಷಣಾ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ (ಕೋರ್ ಝೋನ್) ಬರುವ ಸುಮಾರು 97 ಕಿ. ಮೀ. ಮಾರ್ಗವನ್ನು ಬದಲಾಯಿಸಿ ಹೊರ ವಲಯದ ಮೂಲಕ (ಬಫರ್ ಝೋನ್) ಯೋಜನೆಯನ್ನು ಅನುಷ್ಠಾನಗೊಳಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ವನ್ಯ ಜೀವಿ ಕಾಯಿದೆ ಹಾಗೂ ಹುಲಿ ಸಂರಕ್ಷಣಾ ಕಾಯಿದೆ ಪ್ರಕಾರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಪ್ರವಾಸೋದ್ಯಮ ಚಟುವಟಿಕೆಯನ್ನು ನಡೆಸುವಂತಿಲ್ಲ. ಇದರಿಂದ ಬಫರ್ ಝೋನ್ ಮೂಲಕ ಕೆನರಾಟ್ರೇಲ್ ಹಾದು ಹೋಗುವುದು ಕೂಡ ನಿಯಮದ ಉಲ್ಲಂಘನೆಯಾಗಲಿದೆ. ಈ ನಡುವೆ ಅರಣ್ಯ ಇಲಾಖೆಯ ಮಾರ್ಗ ಬದಲಾವಣೆ ಮಾಡುತ್ತೇವೆ ಎನ್ನುವುದಕ್ಕೂ ಆಕ್ಷೇಪಗಳು ಎದುರಾಗಿದೆ.
ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯ ಮಾರ್ಗ ಜೋಗದ ಮಲಮನೆಯಿಂದ ಪ್ರಾರಂಭಗೊಂಡು ಸಿದ್ದಾಪುರದ ಕತ್ಲೆಕಾನ ನೀರಿಷ್ಠಿಕಾ ಸ್ವಾಮ್ಪ ಮೂಲಕ ಹಾದು ಹೋಗಲಿದೆ. ಈ ಪ್ರದೇಶ ಅತೀಸೂಕ್ಷ ಪ್ರದೇಶವಾಗಿದೆ. ಅಲ್ಲದೆ ಶಿರಸಿ ಭಾಗದ ಸಂರಕ್ಷಿತ ಕಾಡಿನಲ್ಲಿ ಸಿಂಗಳಿಕ ಸಂರಕ್ಷಣಾ ಪ್ರದೇಶವಿದೆ. ಅಲ್ಲದೆ ಸಾತೋಡಿ, ಮಾಗೇಡು ಜಲಪಾತ ಸುತ್ತಮುತ್ತಲಿನ ಪ್ರದೇಶದ ಜೊತೆಗೆ ದಾಂಡೇಲಿ ವನ್ಯ ಜೀವಿ ಸಂರಕ್ಷಣಾ ಧಾಮದಿಂದ ಮಾರ್ಗ ಹಾದು ಹೋಗುತ್ತದೆ. ಚಾರಣಕ್ಕೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಸಂಬಂಧಪಟ್ಟ ಇಲಾಖೆ ಪರವಾನಿಗಿಬೇಕು. ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಪ್ರವಾಸಿಗರು ಪರಿಸರ ಮಾಲೀನ್ಯ, ರಾತ್ರಿ ವೇಳೆ ಸಂರಕ್ಷಿತ ಪ್ರದೇಶದಲ್ಲಿ ಫೈಯರ್ ಕ್ಯಾಪ್ಗಳನ್ನು ಮಾಡಿ, ಅದರಿಂದ ಯಾವುದಾರೂ ಅನಾಹುತ ಸಂಭವಿಸಿದರೆ ಯಾರೂ ಜವಾಬ್ದಾರರು ಎನ್ನುವ ಪ್ರಶ್ನೆ ಎದುರಾಗಿದೆ.
ಸಿದ್ದಾಪುರ ತಾಲೂಕಿನ ಮಲಮನೆಯಿಂದ ದಾಂಡೇಲಿಯ ವನ್ಯಜೀವಿ ಧಾಮದ ಕ್ಯಾಸಲ್ರಾಕ್ವರೆಗೆ ಸುಮಾರು 270 ಕಿ.ಮೀ. ದೂರಕ್ಕೆ ದಟ್ಟ ಅರಣ್ಯದ ನಡುವೆ ಪರಿಸರ ಪೂರಕ ಚಾರಣ ಪ್ರವಾಸ ನಡೆಸುವುದು ದಿ ಗ್ರೇಟ್ ಕೆನರಾ ಟ್ರೇಲ್ ಯೋಜನೆಯಾಗಿದೆ. ಕ್ಯಾಸಲ್ ರಾಕ್ನಲ್ಲಿ ನಿರ್ಮಿಸಲಾಗಿರುವ ಕ್ಯಾನೋಪಿ ವಾಕ್ ಕೂಡ ಈ ಯೋಜನೆ ಒಳಗೊಂಡಿದೆ. ಕ್ಯಾನೋಪಿ ವಾಕ್ಗೆ 84 ಲಕ್ಷ ರೂ., ಕೆನರಾ ಟ್ರೇಲ್ಗೆ ಒಂದು ಕೋಟಿ ರೂ. ಯೋಜನೆ ಇದಾಗಿದೆ. ಜಿಲ್ಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳು ವಾಸಿಸುವ ಕೇಂದ್ರ ಸ್ಥಾನವನ್ನು ಕೋರ್ ಝೋನ್ ಎಂದು ಹೊರ ವಲಯವನ್ನು ಬಫರ್ ಝೋನ್ ಎಂದೂ ಇಲಾಖೆ ವಿಭಾಗಿಸಿದೆ. ಹುಲಿ ಸಂರಕ್ಷಣಾ ಕಾಯಿದೆಯ 2012ರ ನಿಯಮದ ಪ್ರಕಾರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಪ್ರವಾಸೋದ್ಯಮ ಚಟುವಟಿಕೆ ಮಾಡುವಂತಿಲ್ಲ. ಈ ನಿಯಮ ಕೋರ್ ಮತ್ತು ಬಫರ್ ಝೋನ್ ಎರಡಕ್ಕೂ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ಕೆನರಾ ಟ್ರೇಲ್ ಯೋಜನೆ ವನ್ಯ ಜೀವಿಗಳು ಹಾಗೂ ಹುಲಿ ಸಂರಕ್ಷಣೆಗೆ ಮಾರಕವಾಗಲಿದೆ ಎನ್ನುವುದು ಆರೋಪಗಳು ಕೇಳಿಬಂದಿದೆ.
Leave a Comment