ಕಾರವಾರ: ಜಿಲ್ಲೆಯ ಯಾತ್ರಾ ತಾಣಗಳಿಗೆ ಕೇಂದ್ರ ಸ್ಥಾನವಾದ ಕಾರವಾರದಿಂದ ಬಸ್ ಸೌಲಭ್ಯ ಒದಗಿಸಬೇಕು ಹಾಗೂ ಸ್ಥಗಿತವಾಗಿರುವ ದಾಂಡೇಲಿ-ಮಂಗಳೂರು ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಜನಶಕ್ತಿವೇದಿಕೆ ಅಧ್ಯಕ್ಷ ಮಾಧವ ನಾಯಕ ಶುಕ್ರವಾರ ಸಚಿವ ದೇಶಪಾಂಡೆಯವರಿಗೆ ಮನವಿಯ ಮೂಲಕ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಹಲವಾರು ಯಾತ್ರಾ ಸ್ಥಳಗಳಿದ್ದು ಇವುಗಳಲ್ಲಿ ಗೋಕರ್ಣ, ಯಾಣ, ಬನವಾಸಿ ಹಾಗೂ ಉಳವಿ ಕ್ಷೇತ್ರಗಳು ಬಹು ಮುಖ್ಯ ಧಾರ್ಮಿಕ ಸ್ಥಳಗಳಾಗಿವೆ. ಆದರೆ ಈ ಯಾವ ಪ್ರದೇಶಗಳಿಗೂ ಜಿಲ್ಲಾ ಕೇಂದ್ರ ಕಾರವಾರದಿಂದ ನೇರ ಬಸ್ ಸೌಕರ್ಯ ಇಲ್ಲ. ಹೊರ ರಾಜ್ಯದ ಪ್ರವಾಸಿಗರು ನಗರಕ್ಕೆ ಬಂದ ಬಳಿಕ ಈ ಯಾತ್ರಾ ಸ್ಥಳಗಳಿಗೆ ತೆರಳಬೇಕೆಂದರೆ ವಿಶೇಷ ಬಾಡಿಗೆ ವಾಹನಗಳನ್ನು ಪಡೆದೇ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಹಲವಾರು ವರ್ಷಗಳಿಂದ ದಾಂಡೇಲಿಯಿಂದ ಪ್ರತಿದಿನ ಸಂಜೆ 5 ಗಂಟೆಗೆ ಕಾರವಾರದ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಬಸ್ ಸೌಲಭ್ಯವನ್ನು ಕಳೆದ 4ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ದಾಂಡೇಲಿಯಿಂದ ಕಾರವಾರದವರೆಗಿನ ಸಾರ್ವಜನಿಕರಿಗೆ ಮಂಗಳೂರಿಗೆ ಪ್ರಯಾಣಿಸಲು ಅನಾನುಕೂಲವಾಗಿದೆ. ಆದ್ದರಿಂದ ಈ ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು. ಪ್ರವಾಸೋದ್ಯಮ ಬೆಳೆಸಲು ಅನುಕೂಲವಾಗುವಂತೆ ಹಾಗೆಯೇ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳಗಳಿಗೆ ಜಿಲ್ಲಾ ಕೇಂದ್ರದಿಂದ ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಮನವಿಯ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸುರೇಶ ನಾಯ್ಕ, ರಾಜೀವ ನಾಯ್ಕ, ದೀಪಕ ನಾಯ್ಕ, ಶಿವಾನಂದ ಮೇತ್ರಿ, ಖೈರುನ್ನಿಸಾ ಶೇಖ್, ಪ್ರಭಾಕರ ಮಹಾಳ್ಸೇಕರ, ರೋಹಿದಾಸ ವೈಂಗಣಕರ ಮುಂತಾದವರು ಇದ್ದರು.
Leave a Comment