ಕಾರವಾರ: ಚಿಕ್ಕಮಂಗಳೂರು ಜಿಲ್ಲೆಯಲ್ಲಿ ವರದಿಮಾಡಲು ತೆರಳಿದ್ದ ಖಾಸಗಿ ವಾಹಿನಿಯೊಂದರ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು.
ವಯೋವೃದ್ಧನೊಬ್ಬರನ್ನು ಸರಕಾರಿ ಆಸ್ಪತ್ರೆಯಿಂದ ಹೊರ ಹಾಕಿರುವ ಕುರಿತು ಸುದ್ದಿ ಮಾಡಲು ತೆರಳಿದ್ದ ಪ್ರಜಾ ಟಿವಿಯ ಚಿಕ್ಕಮಗಳೂರಿನ ಕ್ಯಾಮೆರಾಮನ್ ಭರತ್ ಎಂಬುವವರ ಮೇಲೆ ಅಲ್ಲಿನ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪ ಎಂಬುವವರು ಅಡ್ಡಿಪಡಿಸಿದ್ದಲ್ಲದೇ, ಅವರ ಅಂಗಿಯನ್ನು ಹರಿದಿದ್ದಾರೆ. ಬಳಿಕ ಕ್ಯಾಮೆರಾ ಕಸಿದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆಯನ್ನು ವರದಿ ಮಾಡಲು ತೆರಳಿದವರ ಮೇಲೆ ಈ ರೀತಿ ವರ್ತನೆ ಮಾಡಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.
ವರದಿ ಮಾಡಲು ತೆರಳುವ ಮಾಧ್ಯಮದವರ ಮೇಲೆ ಪದೆ ಪದೆ ಹಲ್ಲೆಗಳಾಗುತ್ತಿದೆ. ಇದರಿಂದ ಪತ್ರಕರ್ತರಿಗೆ ಭದ್ರತೆಯೇ ಇಲ್ಲದಂತಾಗಿದೆ. ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಮತ್ತೆ ಇನ್ನೆಂದು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮುನ್ಸಿಪಲ್ ತಹಶೀಲ್ದಾರ ವಿ.ಜೆ.ಲಾಂಜೇಕರ್ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಟಿ.ಬಿ.ಹರಿಕಂತ್ರ, ಉಪಾಧ್ಯಕ್ಷ ನವೀನ ಸಾಗರ್, ಕಾರ್ಯದರ್ಶಿ ಶೇಷಗಿರಿ ಮುಂಡಳ್ಳಿ, ಖಜಾಂಚಿ ಸುಭಾಷ್ ಧೂಪದಹೊಂಡ ಇತರರಿದ್ದರು.
Leave a Comment