ಹೊನ್ನಾವರ:
ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಕಳೆದ ಐದು ದಿನಗಳಿಂದ ವಿದ್ಯಾರ್ಥಿಗಳಿಂದ ಭಕ್ತಿಭಾವ ಹಾಗೂ ವಿವಿಧ ಪೂರಕ ಕಾರ್ಯಕ್ರಮಗಳೊಂದಿಗೆ ಪೂಜಿಸಲ್ಪಟ್ಟ ಗಣಪನನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೂರ್ವವಿದ್ಯಾರ್ಥಿಗಳು ಬೃಹತ್ ಮೆರವಣಿಗೆಯಲ್ಲಿ ತೆರಳಿ ಶರಾವತಿ ನದಿಯಲ್ಲಿ ಗಣಪತಿಯ ಮೂರ್ತಿಯನ್ನು ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನಗೊಳಿಸಿದರು.
ಇದಕ್ಕೂ ಮುನ್ನ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಶಾಲೆಯಲ್ಲಿ ಕಳೆದ 76 ವರ್ಷಗಳಿಂದ ನಡೆದುಕೊಂಡು ಬಂದ ಗಣೇಶೋತ್ಸವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಿ.ಎಸ್. ನಾಯ್ಕ, ದೈಹಿಕ ಶಿಕ್ಷಣ ವಿಷಯದ ಪರಿವೀಕ್ಷಕ ಎಸ್.ಎನ್. ಗೌಡ, ಕಛೇರಿ ವ್ಯವಸ್ಥಾಪಕರು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗಿದ್ದು ದೇವರ ಆಶಿರ್ವಾದ ಪಡೆದರು. ಶಾಲಾ ಮುಖ್ಯಾಧ್ಯಾಪಕರು ಪೂಜಾಕಾರ್ಯಕ್ರಮಕ್ಕೆ ಅಥಿತಿಗಳನ್ನು ಸ್ವಾಗತಿಸಿದರು. ಶಿಕ್ಷಕರಾದ ಅಶೋಕ ನಾಯ್ಕ ಧನ್ಯವಾದ ಹೇಳಿದರು.
ಸಂಸ್ಥೆಯ ಇಂಗ್ಲಿಷ್ ಮಾಧ್ಯಮ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗಣಪತಿಗೆ ಬೆಳ್ಳಿ ಆಭರಣಗಳನ್ನು ತೊಡಿಸಿ ಆಂಗ್ಲ ಮಾಧ್ಯಮದ ರಜತಮಹೋತ್ಸವಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಕಿರಣ ಪ್ರಭು, ರಘು ಪೈ ಹಾಗೂ ತಿಮ್ಮಪ್ಪ ಪೈ ಇವರ ಉಪಸ್ಥಿತಿಯಲ್ಲಿ ಪೂರ್ವ ವಿಧ್ಯಾರ್ಥಿ ಮೋಹನ ಪ್ರಭು ಇವರಿಂದ ದೀಪೋತ್ಸವ ಕಾರ್ಯ ನಡೆಯಿತು.
ಶಾಲೆಯ ನಿವೃತ್ತ ಶಿಕ್ಷಕ ಬಿ.ಜೆ. ನಾಯ್ಕರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಛಾಯಾಚಿತ್ರಗಳ ಪ್ರದರ್ಶನ, ವಿದ್ಯಾರ್ಥಿಗಳ ರಂಗೋಲಿಗಳನ್ನು, ಬಿ.ಜೆ. ನಾಯ್ಕ ಹಾಗೂ ಯಶ್ವಂತ ಮೇಸ್ತ ಇವರ ಶ್ರಮದ ಫಲವಾಗಿ ಮಾರುತಿಯೊಂದಿಗಿರುವ ಶ್ರೀ ರಾಮರೂಪಿ ಗಣಪನೊಂದಿಗೆ ವೀಕ್ಷಿಸಿ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಸಮುದಾಯ ಸಂತಸಪಟ್ಟಿತು.
Leave a Comment