ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ರಸ್ತೆಗೆ ಅಡ್ಡ ಬರುವ ಹಳ್ಳ-ಕೊಳ್ಳಗಳಿಗೆ ಸೇತುವೆ ಭಾಗ್ಯ ಕೂಡಿ ಬಂದಿಲ್ಲ. ಹಲವು ಊರುಗಳಲ್ಲಿ ಶೌಚಾಲಯವಿಲ್ಲ. ರಾತ್ರಿ ಕತ್ತಲು ದೂರ ಮಾಡಲು ಇಲ್ಲಿ ವಿದ್ಯುತ್ ತಲುಪಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಸಂಪರ್ಕ ಸಾಧನಕ್ಕೆ ಪೂರಕವಾಗಿ ವಾಹನ ವ್ಯವಸ್ಥೆಯಿಲ್ಲ. ಕೆಲವಡೆ ಮೊಬೈಲ್ ಟವರ್ಗಳು ಇನ್ನು ಜನ್ಮ ತಾಳಿಲ್ಲ. ಆಸ್ಪತ್ರೆ ಆರೈಕೆ ಸೌಲಭ್ಯಗಳು ಸಿಗುತ್ತಿಲ್ಲ. ಮಕ್ಕಳ ಶಿಕ್ಷಣಿಕ ಅಭಿವೃದ್ದಿಗೆ ಪೂರಕವಾದ ಶಾಲಾ ವಾತಾವರಣವೂ ಹಳ್ಳಿಗಳಲ್ಲಿಲ್ಲ.
ಎಲ್ಲಡೆ ವಿಸ್ತಿರ್ಣ ಹಾಗೂ ಜನಸಂಖ್ಯೆ ಆಧಾರಿತವಾಗಿ ಸರ್ಕಾರ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರುತ್ತದೆ. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳ ಅಭಿವೃದ್ದಿಗೆ ಹೆಚ್ಚಿನ ಅನುಧಾನವನ್ನು ಬಿಡುಗಡೆ ಮಾಡಲಾಗುತ್ತದೆ. ಸಾಕಷ್ಟು ವಿಸ್ತಿರ್ಣವಿದ್ದರೂ ಅದಕ್ಕೆ ತಕ್ಕಂತೆ ಜನಸಂಖ್ಯೆ ಇಲ್ಲದ ಕಾರಣ ಉತ್ತರ ಕನ್ನಡ ಜಿಲ್ಲೆ ಇತರೆ ಜಿಲ್ಲೆಗಳಂತೆ ಬೆಳವಣಿಗೆ ಹೊಂದಿಲ್ಲ. ಜನಸಂಖ್ಯೆ ವಿರಳವಾಗಿರುವದೇ ಜಿಲ್ಲೆಯ ಅಭಿವೃದ್ದಿಗೆ ಶಾಪವಾಗಿ ಪರಿಣಮಿಸಿದೆ. ಸರ್ಕಾರ ರೂಪಿಸಿರುವ ಜನಸಂಖ್ಯೆ ಆಧಾರಿತ ಅಭಿವೃದ್ದಿ ನಿಯಮ ಇಲ್ಲಿನವರ ಹಕ್ಕು ಕಸಿದುಕೊಂಡಿದ್ದು, ಜಿಲ್ಲೆಯವರಿಗೆ ಹಲವು ಮೂಲಭೂತ ಸೌಕರ್ಯಗಳು ಮರಿಚಿಕೆಯಾಗಿದೆ. ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಜಿಲ್ಲೆಗಳಿಗೆ ಜನಸಂಖ್ಯೆ ಆಧಾರಿತ ಅಭಿವೃದ್ದಿ ನಿಯಮ ಅನ್ವಯಿಸದಿದ್ದರೆ ಇತರೆ ಜಿಲ್ಲೆಗಳಂತ ವೇಗವಾಗಿ ಉತ್ತರ ಕನ್ನಡವೂ ಅಭಿವೃದ್ದಿಯಾಗಲಿದೆ.
*ವಿಸ್ತಿರ್ಣ ಹಾಗೂ ಜನಸಂಖ್ಯೆ:
ಕಾರವಾರದಿಂದ ಭಟ್ಕಳದವರೆಗೆ ಕಡಲು ಹಾಗೂ ಸಿದ್ದಾಪುರದಿಂದ ದಾಂಡೇಲಿಯವರೆಗೆ ದಟ್ಟ ಕಾನನವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಜನ ವಸತಿ ಹಂಚಿ ಹೋಗಿದೆ. ಜಿಲ್ಲೆಯೂ 8,15,017 ಹೆಕ್ಟೇರ್ ಅರಣ್ಯ ಭೂಮಿಯನ್ನು ಹೊಂದಿದೆ. ಇವೇ ಅರಣ್ಯಗಳಲ್ಲಿ ನೂರಾರು ಊರುಗಳು ನೆಲೆ ಕಂಡಿಕೊಂಡಿದ್ದು, ಜನ ಚಿಕ್ಕ ಪುಟ್ಟ ಅತಿಕ್ರಮಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸ್ವಂತ ಭೂಮಿ ಹೊಂದಿರುವವರ ಸಂಖ್ಯೆ ಕಡಿಮೆಯಿದೆ. ಜಿಲ್ಲೆಯಲ್ಲಿ 13,53,644 ಜನ ವಾಸವಾಗಿದ್ದಾರೆ. ಇವರಲ್ಲಿ 9,65,731 ರಷ್ಟು ಗ್ರಾಮೀಣ ಭಾಗದಲ್ಲಿದ್ದಾರೆ. ತೀರಾ ಹಿಂದೂಳಿದ ಹಾಗೂ ಆರ್ಥಿಕವಾಗಿ ಬೆಳವಣಿಗೆಯಾಗದವರ ಸಂಖ್ಯೆಯೇ ಹೆಚ್ಚಿದೆ. ಇದರ ನಡುವೆ ಮೂಲಭೂತ ಸೌಕರ್ಯ ವಂಚಿತ ಪ್ರದೇಶಗಳು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
* ಕತ್ತಲೆ ತುಂಬಿದ ಊರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ಇದಲ್ಲದೇ ಕೊಡಸಳ್ಳಿ, ಕದ್ರಾ, ಸುಪಾ, ತಟ್ಟಿಹಳ್ಳ, ಬೊಮ್ಮನಳ್ಳಿ, ಗೋರುಸೊಪ್ಪ ಹಾಗೂ ಲಿಂಗದಮಕ್ಕಿಗಳಲ್ಲಿ ಡ್ಯಾಂ ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಹೀಗಿದ್ದರೂ ಜಿಲ್ಲೆಯ 30ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಕತ್ತಲು ಆವರಿಸಿದೆ. ಪ್ರತಿ ದಿನ ರಾತ್ರಿ ಕತ್ತಲೆ ದೂರ ಮಾಡಲು ಇಲ್ಲಿನ ಜನ ದೀಪ ಬೆಳಗುತ್ತಾರೆ. ದೀಪ ಬೆಳೆಗಲು ಅವಷ್ಯವಿರುವ ಸೀಮೆಎಣ್ಣೆಗಾಗಿ ಹತ್ತಾರು ಕಿ.ಮೀ ನಡೆದು ಹೋಗುತ್ತಾರೆ. ಕಾರವಾರದ ಕಮ್ಮರಗಾಂವ್, ಮಾರ್ಕೋಳಿ, ದೇವಕಾರ್, ಅಂಕೋಲಾದ ಹೆಬ್ಬಾರ ಗುಡ್ಡ, ಸಿದ್ದಾಪುರದ ಮೇದಿನಿ, ಕುಮಟಾದ ಬ್ರಹ್ಮೂರು, ಯಲ್ಲಾಪುರದ ಗುಡ್ಡನಗದ್ದೆ, ಅತ್ತಿಸೌಲು, ಮಾರೋಳ್ಳಿ. ಕನಕಳ್ಳಿ, ಶಮೇಗುಳಿ,ಶೇಡಿಗುಡ್ಡೆ, ಲೆಕ್ಕೆಮನೆ, ಶೇಡಿಗುಳಿ ಹೀಗೆ ಹಲವು ಹಳ್ಳಿಗಳು ಕತ್ತಲೆಯಲ್ಲಿ ದಿನ ದೂಡುತ್ತಿವೆ. ಬೇಸಿಗೆಯಲ್ಲಿ ಇಲ್ಲಿನ ಊರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತವೆ. ಕೃಷಿ ಜೀವನ ನಂಬಿರುವ ರೈತರು ಹೈರಣಾಗುತ್ತಾರೆ.
ಕಾಡಿನಂಚಿನಲ್ಲಿ ಇರುವ ಊರುಗಳಿಗೆ ಯಾವದೇ ರಸ್ತೆಗಳಿಲ್ಲ. ಹೀಗಾಗಿ ಸರ್ಕಾರಿ ಸವಾಮ್ಯದ ಬಸ್ಗಳು ಕೂಡ ಇಲ್ಲಿ ಸಂಚರಿಸುವದಿಲ್ಲ. ಅಲ್ಲಲ್ಲಿ ಸರ್ಕಾರಿ ಶಾಲೆಗಳಿದ್ದು, ಪುರಾತನ ಮಣ್ಣಿನ ಗೋಡೆಯ ಶಾಲೆಗಳು ಶಿಥಿಲಾವ್ಯವಸ್ಥೆ ತಲುಪಿವೆ. ಆಸ್ಪತ್ರೆಗಳು ಸಮೀಪದಲ್ಲಿರದ ಕಾರಣ ಅನಾರೋಗ್ಯ ಪೀಡಿತರನ್ನು ಕಂಬಳಿಯಲ್ಲಿ ಹೊತ್ತು ನಗರಕ್ಕೆ ತರಬೇಕಾದ ಪರಿಸ್ಥಿತಿ ಇದೆ. ಇದರೊಂದಿಗೆ ಬಹುತೇಕ ಊರುಗಳಲ್ಲಿ ಸಾರ್ವಜನಿಕ ಶೌಚಾಲಯ, ಸಮುದಾಯ ಭವನ, ಆಟದ ಮೈದಾನಗಳ ಕೊರತೆಯಿದೆ. ಜನಸಂಖ್ಯೆ ಆಧಾರಿತ ಅಭಿವೃದ್ದಿ ಯೋಜನೆಯನ್ನು ಬದಿಗಿಟ್ಟು, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ವಿಶೇಷ ಪ್ಯಾಕೇಜ್ ನೀಡಿದಲ್ಲಿ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ದಿ ಸಾದ್ಯವಿದೆ.
Leave a Comment