ಹೊನ್ನಾವರ: `
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳಂತಹ ಹಲವಾರು ಬಹುಮುಖಿ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಜನರ ಮನವನ್ನು ತಲುಪಲು ಸಾಧ್ಯವಾಗಿದ್ದು, ಅನೇಕ ಬಡಜನರಿಗೆ ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದೆ’ ಎಂದು ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು.
ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಾಲಯದ ಸಭಾಭವನದಲ್ಲಿ ಹೊನ್ನಾವರ-ಭಟ್ಕಳ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 8 ದಿನಗಳ ಕಾಲ ನಡೆಯುತ್ತಿರುವ 1108ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕವಾದ ಅಭಿವೃದ್ಧಿಗೆ, ಆರ್ಥಿಕವಾದ ಚಲನಶೀಲತೆಗೆ ಈ ಯೋಜನೆ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಮದ್ಯವರ್ಜನ ಶಿಬಿರ ಅತ್ಯಂತ ಮುಖ್ಯವಾದ, ಜನಪರ ಹಾಗೂ ಶಾಶ್ವತವಾಗಿ ಜನಮಾನಸದಲ್ಲಿ ನೆಲೆನಿಲ್ಲುವ ಕಾರ್ಯಕ್ರಮವಾಗಿ ಬೆಳೆದಿದೆ. ಇವತ್ತಿನ ಜೀವನದಲ್ಲಿ ಮದ್ಯ ವ್ಯಸನ ಎನ್ನುವುದು ಜನರನ್ನು ಕಾಡುತ್ತಿರುವ ಒಂದು ದೊಡ್ಡ ಸಮಸ್ಯೆ. ದೇಶದ ಮೂಲೆ-ಮೂಲೆಗಳಲ್ಲಿ ಇಂತಹ ಸಮಸ್ಯೆ ತಲೆದೋರಿದೆ. ಮದ್ಯ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಿದ್ದರೂ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಪ್ರತಿ ಮನೆ-ಮನೆಗಳಲ್ಲಿ ಆರೋಗ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಬಂದಿದ್ದು, ಆರೋಗ್ಯ ಸಮಸ್ಯೆಗಾಗಿ ಲಕ್ಷಾಂತರ ರೂ. ಹಣವನ್ನು ಆಸ್ಪತ್ರೆಗಳಿಗೆ ವ್ಯಯ ಮಾಡುತ್ತಿದ್ದಾರೆ. ಕುಟುಂಬದ ಒಬ್ಬ ಸದಸ್ಯ ಕುಡಿತದ ಚಟಕ್ಕೆ ಒಳಗಾದರೆ ಆ ಕುಟುಂಬದ ಗೌರವ ಹಾಳಾಗುತ್ತದೆ ಎನ್ನುವುದನ್ನು ಗಮನದಲ್ಲಿಡಬೇಕಾಗಿದೆ. ಕುಟುಂಬದ ಮಹಿಳೆಯರಿಗೆ, ಮಕ್ಕಳಿಗೆ, ಪ್ರತಿಯೊಬ್ಬರಿಗೂ ಕುಡಿತದಿಂದ ಬಹಳ ತೊಂದರೆಯಾಗುತ್ತಿದೆ. ಕುಟುಂಬದ ಒಬ್ಬನಿಂದ ಪ್ರಾರಂಭವಾದ ಮದ್ಯ ವ್ಯಸನ ಕನಿಷ್ಠ ಮೂರು ತಲೆಮಾರಿನ ವರೆಗಿನ ಕುಟುಂಬ ಸಂಪೂರ್ಣ ಹಾಳಾಗುತ್ತದೆ. ಇದನ್ನು ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಾಗಿದೆ. ಹಲವಾರು ತಲೆಮಾರುಗಳಿಗೂ ನಿರಂತರವಾಗಿ ಈ ಮದ್ಯ ವ್ಯಸನ ರೂಢಿಸಿಕೊಂಡಲ್ಲಿ ಆ ಕುಟುಂಬ ಸಂಪೂರ್ಣ ಸರ್ವನಾಶವಾಗಲು ಕಾರಣವಾಗುತ್ತದೆ.
ಮದ್ಯ ವ್ಯಸನದಿಂದ ಸಮಾಜದಲ್ಲಿ ಯಾವುದೇ ಗೌರವ, ಪ್ರಯೋಜನವೂ ಇಲ್ಲ. ಇಡೀ ಸಮಾಜದ, ಕುಟುಂಬದ ಭವಿಷ್ಯ ಹಾಳಾಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮದ್ಯ ಸೇವನೆಯಿಂದ ದೂರವಿರುವ ಪಣ ತೊಟ್ಟಿದ್ದಲ್ಲಿ ಇಡೀ ಸಮಾಜ, ಕುಟುಂಬ ಬಲಿಷ್ಟವಾಗಲಿದೆ. ಪ್ರತಿಯೊಬ್ಬರೂ ಸಮಾಜದಲ್ಲಿ ಗೌರವ ಗಳಿಸಬೇಕು ಮತ್ತು ಮುಂದಿನ ಪೀಳಿಗೆಗಳಿಗೂ ಗೌರವ ಸಿಗುವಂತೆ ಮಾಡಬೇಕು. ಹೊನ್ನಾವರ ತಾಲೂಕಿನಾದ್ಯಂತ ಸುಮಾರು 450ಕ್ಕೂ ಹೆಚ್ಚು ಜನರನ್ನು ಮದ್ಯವ್ಯಸನದಿಂದ ದೂರವಿಟ್ಟ ಗ್ರಾಮಾಭಿವೃದ್ಧಿ ಯೋಜನೆಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ ಎಂದು ಶುಭ ಹಾರೈಸಿದರು.
ಶಿಬಿರಾಧಿಕಾರಿ ನಾಗೇಶ ಮಾತನಾಡಿ ಮದ್ಯ ವ್ಯಸನದಿಂದ ಮಾನಸಿಕ, ದೈಹಿಕ ನೆಮ್ಮದಿಯಿಲ್ಲವಾಗಿದೆ. ವ್ಯಕ್ತಿಯ ಜೀವನದಲ್ಲಿ ಈ ವ್ಯಸನವನ್ನು ಹೋಗಲಾಡಿಸಿ ಶಕ್ತಿಯನ್ನು ತುಂಬಿ ಸುಂದರ ಬದುಕಿನ ನಿರ್ಮಾಣ ಮಾಡಲಾಗುವುದು. ವ್ಯಸನದಿಂದ ಸಮಾಜದಲ್ಲಿ ರೋಗಿಗಳಾಗಿದ್ದಾರೆ. ಈಗ ಮದ್ಯವರ್ಜನ ಶಿಬಿರದಿಂದಾಗಿ ರೋಗವನ್ನು ಹೋಗಲಾಡಿಸುವ ಯೋಗ ಬಂದಿದೆ. ಪ್ರತಿಯೊಬ್ಬ ಶಿಬಿರಾರ್ಥಿಯೂ ಈ ಯೋಗವನ್ನು ಪ್ರೀತಿಯಿಂದ ಸ್ವೀಕರಿಸಿ ಮನೆಗೆ ಶಕ್ತಿಯಾಗಿ ಹೋಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದ್ಯ ವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಎಸ್.ನಾಯ್ಕ ಮಾತನಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಮದ್ಯ ರಾಕ್ಷಸನ ಸಂಹಾರಕ್ಕೆ ಶಿಬಿರಾರ್ಥಿಗಳು ಮನಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ಶಿಬಿರದ ಪ್ರಯೋಜನವನ್ನು ಪಡೆದುಕೊಂಡು ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಬೇಕು’ ಎಂದರು.
ತಾ.ಪಂ. ಸದಸ್ಯರಾದ ರೂಪಾ ಗೌಡಾ, ಲೋಕೇಶ ನಾಯ್ಕ, ಜನಜಾಗೃತಿ ಸಮಿತಿ ಸದಸ್ಯರಾದ ಶಿವರಾಜ ಮೇಸ್ತ, ರಾಮಚಂದ್ರ ನಾಯ್ಕ, ದೇವಾಲಯದ ಆಡಳಿತ ಮಂಡಳಿ ಮೊಕ್ತೆಸರ ಎ.ಆರ್.ನಾಯ್ಕ, ಎಚ್.ಎಸ್.ನಾಯ್ಕ, ದೇವು ಗೌಡ, ಸತೀಶ ಶೇಟ್, ಅರುಣ ನಾಯ್ಕ, ಕೃಷ್ಣ ಗೌಡ, ಎಂ.ಜಿ.ನಾಯ್ಕ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಯೋಜನಾಧಿಕಾರಿ ಎಂ.ಎಸ್.ಈಶ್ವರ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಧರ ನಿರೂಪಿಸಿದರು. ಮೇಲ್ವಿಚಾರಕಿ ಶ್ಯಾಮಲಾ ವಂದಿಸಿದರು. ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಸುಮಾರು 86 ಜನರು ಶಿಬಿರಾರ್ಥಿಗಳಿಗೆ ಆರೋಗ್ಯ ಪರೀಕ್ಷೆ ನಡೆಸಲಾಯಿತು.
Leave a Comment