ಹೊನ್ನಾವರ :
ಕಾಂಗ್ರೆಸ್ ಪಕ್ಷದ ತಳಹಂತದ ಸಂಘಟನೆಯಲ್ಲಿ ಬಾರಿ ಚುರುಕಿನÀ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಸ್ವತಃ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ದೇಶದಾದ್ಯಂತ ಪ್ರತಿ ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೆ ನೇರಸಂವಾದ ನಡೆಸಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಹಗಲು ರಾತ್ರಿ ಪರಿಶ್ರಮಿಸುತ್ತಿದ್ದು, ರಾಹುಲ್ ಗಾಂಧಿಯವರ ಬದ್ದತೆಯನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಅನುಸರಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಎನ್. ಮೂರ್ತಿ ಕರೆ ನೀಡಿದರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಹಿಂದೆಂದೂ ಕಂಡರಿಯದಷ್ಟು ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು ರಾಜ್ಯಾದ್ಯಂತ ಎಲ್ಲಾ ಬೂತ್ ಮಟ್ಟದ ಸಮಿತಿಗಳು ರಚನೆಯಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಮನೆಮನೆಗೆ ಕಾಂಗ್ರೆಸ್ ಎನ್ನುವ ಸಂದೇಶದೊಂದಿಗೆ ಪ್ರತಿ ಮನೆಗೆ ತೆರಳಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತಂದ ಅನೇಕ ಜನಪ್ರೀಯ ಯೋಜನೆಗಳ ಬಗ್ಗೆ ವಿವರಿಸಲಾಗುವುದು ಎಂದುರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವಿ. ಎಸ್. ಆರಾಧ್ಯ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಪಕ್ಷದ ಬೆನ್ನೆಲುಬಾಗಿದ್ದು, ಮುಂಬರಲಿರುವ ಚುನಾವಣೆಯಲ್ಲಿ ಪಕ್ಷವನ್ನು ಸನ್ನಧಗೊಳಿಸಲು ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಲು ಕರೆ ನೀಡಿದರು. ಯಾರಿಗೆ ಕೆಲಸ ಮಾಡುವ ಮನಸ್ಸಿಲ್ಲವೊ ಅವರು ತಮ್ಮ ಸ್ಥಾನವನ್ನು ತ್ಯಜಿಸಿ ಇನ್ನೊರ್ವರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಇಲ್ಲದಿದ್ದಲ್ಲಿ ಪಕ್ಷ ಇಂತವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ|| ರಾಜನಂದಿನಿ ಕಾಗೋಡ ಮಾತನಾಡಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಎಲ್ಲಾ ಬೂತ್ ಮತ್ತು ಪಂಚಾಯತ ಘಟಕಗಳು ರಚನೆಯಾಗಿದ್ದು ತುಂಬಾ ಕ್ರೀಯಾಶ್ರೀಲತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಖುದ್ದು ನಾನು ಪ್ರತಿ ಬೂತ್ ಮಟ್ಟದಲ್ಲಿ ಸಂಚರಿಸಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುತ್ತೇನೆ ಎಂದರು.
ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಮೋಹನ ಶೇಟ್ಟಿ ಮಾತನಾಡಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದು ನಾಲ್ಕುವರೆ ವರ್ಷ ಕಳೆದಿದ್ದು ಅನೇಕ ಜನಪರ ಕಾರ್ಯನಡೆಸುತ್ತಿದೆ. ಚುನಾವಣಾ ಪೂರ್ವ ಕೊಟ್ಟ 160 ಆಶ್ವಾಸನೆಗಳಲ್ಲಿ ಬಹುತೇಕ ಎಲ್ಲವನ್ನು ಕಾರ್ಯಗತಗೊಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ರೈತರ ಸಾಲ ಮನ್ನದಂತಹ ಅನೇಕ ದಿಟ್ಟ ನಿರ್ದಾರ ಕೈಗೊಂಡ ಸರಕಾರದ ಕ್ರಮವನ್ನು ಜನರಿಗೆ ಮುಟ್ಟಿಸುವಂತೆ ಕರೆ ನಿಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ನಾಯ್ಕ ಮಾತನಾಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಸದೃಢವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಆರ್. ವಿ. ದೇಶಪಾಂಡೆಯವರ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲಾ ಆರು ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಕೈವಶ ಮಾಡಿಕೊಳ್ಳುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸಭೆಯಲ್ಲಿ ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಸ್. ಕೆ. ಭಾಗವತ, ತಾಲೂಕಾ ಪಂಚಾಯತ ಉಪಾಧ್ಯಕ್ಷ ಲಲಿತಾ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಪರಿಶಿಷ್ಟ ವಿಭಾಗದ ಅಧ್ಯಕ್ಷ ಸೋಮಯ್ಯ ಮುಕ್ರಿ, ಕಿಸಾನ್ ಸೆಲ್ ಅಧ್ಯಕ್ಷ ಕೆ.ವಿ. ಭಟ್ಟ ವಂದೂರು, ಜಿಲ್ಲಾ ಕಾಂಗ್ರೆಸ್ ವೀಕ್ಷಕ ವಾಮನ ನಾಯ್ಕ ಮಂಕಿ, ಮುಂತಾದವರು ಪಾಲ್ಗೊಂಡಿದ್ದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
Leave a Comment