ಹೊನ್ನಾವರ:
ನಾನು ಕುಳಿತ ಖುರ್ಚಿ ಬದಲಾಗಬಹುದು. ಮೈಯೊಳಗಿನ ರಕ್ತ ಬದಲಾಗುವುದಿಲ್ಲ. ಮೈಯೊಳಗಿನ ರಕ್ತದ ಗೌರವಕ್ಕೆ ಚ್ಯುತಿ ಬಂದರೆ ಈ ಖುರ್ಚಿ, ಅಧಿಕಾರ ಯಾವುದೂ ನನಗೆ ಬೇಡ ಎಂದು ಕೇಂದ್ರ ಸರಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಬಿಜೆಪಿ ತಾಲೂಕಾ ಮಂಡಲದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಅನಂತಕುಮಾರ ಹೀಗಾದ್ನಾ ಎಂದು ನಿಮ್ಮ ಯಾರ ಬಾಯಿಂದಲೂ ಬರಲಾರದು ಎಂದು ಅಭಿಮಾನಿಗಳನ್ನುದ್ದೇಶಿಸಿ ಹೇಳಿದರು.
ಜೀವನದಲ್ಲಿ ರಾಜಕಾರಣ, ಸಂಸದ, ಸಚಿವ ಸ್ಥಾನ ಯಾವುದನ್ನೂ ನಿರೀಕ್ಷೆ, ಅಪೇಕ್ಷೆ ಮಾಡಿಲ್ಲ. ಸಂಸದನಾಗುತ್ತೇನೆ ಎಂಬ ಕನಸೂ ಇರಲಿಲ್ಲ. ಆದರೆ ಅದೆಲ್ಲವನ್ನು ಭಗವಂತ ಕೊಟ್ಟಿದ್ದಾನೆ. ದೇವರ ಆಶೀರ್ವಾದ. ನಿಮ್ಮ ಪ್ರೀತಿ ವಿಶ್ವಾಸ ತನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ. 5 ಅವಧಿಗಳಲ್ಲಿ 1 ರೂ. ಯನ್ನೂ ಅಪೇಕ್ಷೆ ಮಾಡದೇ ಪ್ರೀತಿ, ವಿಶ್ವಾಸ ಕೊಟ್ಟು ಆರಿಸಿತಂದ್ದೀರಿ. ನಿಮ್ಮ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಶಿರಷಾಷ್ಟಾಂಗ ನಮಸ್ಕಾರ ಎಂದರು.
ಕಳೆದ ಸಲ ಆರಿಸಿ ಬಂದ ನಂತರ ರಾಜಕಾರಣದಿಂದ ತುಂಬ ದೂರವಾಗಿದ್ದೆ. ನಮ್ಮ ಜಿಲ್ಲೆಯವರು ಇವನು ಉಪಯೋಗ ಇಲ್ಲ ಎಂದು ಬೈದುಕೊಂಡು ಟಿಕೆಟ್ ತಪ್ಪಿಸಲಿ ಎಂದು ಕ್ಷೇತ್ರಕ್ಕೆ ಬರಬಾರದು ಅಂತಲೇ ತೀರ್ಮಾನಿಸಿದ್ದೆ. ಆದರೆ ಹೊಸ ಜವಾಬ್ದಾರಿ ನಿಮ್ಮ ಮುಂದೆ ತಂದು ನಿಲ್ಲಿಸಿದೆ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ನೀವು ಕೊಟ್ಟ ಅದೇ ಪ್ರೀತಿ, ವಿಶ್ವಾಸದಿಂದ ನಿಮ್ಮ ಮುಂದೆ ನಿಲ್ಲುತ್ತೇನೆ ಎಂದರು.
ಕೌಶಲ್ಯಾಭಿವೃದ್ದಿ ಮೂರುವರೆ ವರ್ಷಗಳ ಹಿಂದೆ ರಚಿಸಲಾದ ಹೊಸ ಮಂತ್ರಾಲಯ. ಇದರ ಮೂಲಕ ಬಡವರಿಗೆ ಹೊಸ ಆತ್ಮವಿಶ್ವಾಸ ತುಂಬುವ ಮಹತ್ವಾಕಾಂಕ್ಷೆಯನ್ನು ಪ್ರಧಾನಿಯವರು ಹೊಂದಿದ್ದಾರೆ., ಬಡವರಲ್ಲಿ ಆತ್ಮವಿಶ್ವಾಸ ಕುಗ್ಗಿದೆ. ಅಂತಸ್ತಿನ ಕಲ್ಪನೆ ಕಲ್ಪನೆಯಾಗಿಯೇ ಇದೆ. ಬಡವರ ಕನಸು, ಕೀಳರಿಮೆಗೆ ಉತ್ತರ ಕೊಡುವ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಆತ್ಮವಿಶ್ವಾಸ ನೀಡುವದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದ ಮೂಲ ಗುರಿ ಎಂದರು.
ಶೇಕಡಾ 85 ರಷ್ಟು ಜನರ ವಿದ್ಯಾಬ್ಯಾಸಕ್ಕೂ ಬದುಕಿಗೂ ಸಂಬಂಧವೇ ಇಲ್ಲ. ಈ ಮಂತ್ರಾಲಯ ಬದುಕಿನ ಕಲೆ ಕಲಿಸುವುದು. ಅವರವರ ಕೌಶಲ್ಯಕ್ಕೆ ಅನುಗುಣವಾಗಿ ಮಾನ್ಯತೆ ನೀಡಲಾಗುತ್ತದೆ. ಕೈತುಂಬಾ ದುಡಿಮೆ ಇದ್ದರೂ ಬದುಕಿನ ಆತ್ಮ ವಿಶ್ವಾಸ ಕಳೆದುಕೊಂಡ, ಸರ್ಟಿಫಿಕೇಟ್ ಜಗತ್ತಿನಲ್ಲಿ ಅಸ್ತಿತ್ವ ಕಳೆದುಕೊಂಡ, ದುಡಿಯುವ ಕೈಗಳಿಗೆ ಆತ್ಮವಿಶ್ವಾಸ ತುಂಬುವ, ಸ್ವಾಭಿಮಾನದ ಬದುಕು ಕಲ್ಪಿಸುವ ಅವರನ್ನು ತಲೆ ಎತ್ತಿ ನಿಲ್ಲಿಸುವ ಆಶಯವೇ ಈ ಮಂತ್ರಾಯಲದ ಗುರಿ ಎಂದರು.
ಪ್ರತಿ ವರ್ಷ 1 ಕೋಟಿ 96 ಲಕ್ಷ ಹೊಸ ಉದ್ಯೋಗ ಸೃಷ್ಠಿಯಾಗಬೇಕು. ಅವರ ಬದುಕಿಗೆ ವಿಶ್ವಾಸ ಗೌರವ ತುಂಬಬೇಕು. ಉದ್ಯೋಗದ ಭರವಸೆ ಕೊಡಬೇಕು. ಕೌಶಲ್ಯ ಅಭಿವೃದ್ದಿ ಆಗಬೇಕು 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಚುನಾವಣಾ ಪ್ರಣಾಳಿಕೆಯಲ್ಲಿ ಉದ್ಯಮಶೀಲತಾ ಮಂತ್ರಾಲಯದ ಸಾಧನೆ ವಿವರವನ್ನು ಇರುವಂತೆ ಮಾಡುತ್ತೇನೆ ಎಂದರು.
ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ಅನಂತಕುಮಾರ ಹೆಗಡೆ ಅವರು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪೋಲಿಸರ ಸರ್ಪಗಾವಲನ್ನೂ ಬೇಧಿಸಿ ಜೀವಕ್ಕೂ ಹೆದರದೇ ರಾಷ್ಟ್ರ ಧ್ವಜ ಹಾರಿಸಿ ದೇಶಪ್ರೇಮ ಮೆರೆದಿದ್ದರು ಎಂದು ಸ್ಮರಿಸಿದರು.
ತಾಲೂಕಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಸ್ವಾಗತಿಸಿದರು. ವಿಶ್ವನಾಥ ನಾಯಕ ವಂದೇ ಮಾತರಂ ಗೀತೆ ಹಾಡಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಜಿ. ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರುಗಳಾದ ಡಾ. ಎಂ.ಪಿ. ಕರ್ಕಿ, ದಿನಕರ ಶೆಟ್ಟಿ, ಜೆ.ಡಿ.ನಾಯ್ಕ, ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ, ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ, ಧುರೀಣರುಗಳಾದ ಸುನೀಲ ನಾಯ್ಕ, ಕವಲಕ್ಕಿ ವೆಂಕಟರಮಣ ವಿ. ಹೆಗಡೆ, ನಾಗರಾಜ ನಾಯಕ ತೊರ್ಕೆ, ಪ್ರಮೋದ ಹೆಗಡೆ, ಗಾಯತ್ರಿ ಗೌಡ, ಉಮೇಶ ನಾಯ್ಕ, ಗೋವಿಂದ ನಾಯ್ಕ, ಯಶೋಧರ ನಾಯ್ಕ, ವಿನೋದ ಪ್ರಭು, ಕೇಶವ ನಾಯ್ಕ ಬಳಕೂರು, ಸೂರಜ್ ನಾಯ್ಕಸೋನಿ ಮತ್ತಿತರರು ಉಪಸ್ಥಿತರಿದ್ದರು. ವಿ.ಜಿ. ಹೆಗಡೆ ಗುಡಗೆ ಅಭಿನಂದನಾ ಗೀತೆ ಹಾಡಿದರು. ಬಿ.ಟಿ. ನಾಯ್ಕ ಬಳಕೂರು ಕಾರ್ಯಕ್ರಮ ನಿರೂಪಿಸಿದರು.
Leave a Comment