ಪಣಜಿ(ವಾಸ್ಕೊ): ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ಸರ್ಕಾರ ಬೈನಾದಲ್ಲಿ 2004 ರಿಂದ ಕನ್ನಡಿಗರನ್ನು ಒಕ್ಕಲೆಬ್ಬಿಸುವ ಕೃತ್ಯವನ್ನು ಎಸಗುತ್ತಿದೆ. ಬೈನಾದಲ್ಲಿ ಕಳೆದ 40 ವರ್ಷಗಳ ಹಿಂದೆ ಬಸವಾಭಿಮಾನಿಗಳು ಕಟ್ಟಿಕೊಂಡಿದ್ದ ದೇವಸ್ಥಾನವನ್ನು ಕೂಡ ಗೋವಾ ಸರ್ಕಾರ ಯಾವುದೇ ನೋಟಿಸ್ ಕೂಡ ನೀಡದೆಯೇ ತೆರವು ಕಾರ್ಯಾಚರಣೆ ಕೈಗೊಂಡಿದೆ. ಲಂಡನ್ನಲ್ಲಿ ಪ್ರಧಾನಿ ಮೋದಿಯವರು ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ತಮ್ಮ ಬಸವಾಭಿಮಾನವನ್ನು ಎತ್ತಿತೋರಿಸಿದರೆ, ಅದೇ ಬಿಜೆಪಿ ನೇತೃತ್ವದ ಮನೋಹರ್ ಪರೀಕರ್ ನೇತೃತ್ವದ ಗೋವಾ ಸರ್ಕಾರ ಬೈನಾದಲ್ಲಿ ಬಸವಣ್ಣನವರ ದೇವಸ್ಥಾನವನ್ನೇ ನಿರ್ನಾಮ ಮಾಡುವ ಮೂಲಕ ಬಸವ ತತ್ವಕ್ಕೆ ಕೊಡಲಿ ಪೆಟ್ಟು ಹಾಕುವ ಕೃತ್ಯವೆಸಗಿದೆ ಎಂದು ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಗೋವಾ ಸರ್ಕಾರದ ಈ ಕೃತ್ಯವನ್ನು ಖಂಡಿಸಿದ್ದಾರೆ. ಮಂಗಳವಾರ ಬೈನಾದಲ್ಲಿ ನಿರಾಶ್ರಿತ ಕನ್ನಡಿಗರನ್ನು ಭೇಟಿ ಮಾಡಿ ಶ್ರೀಗಳು ಮಾತನಾಡುತ್ತಿದ್ದರು.
2004 ರಲ್ಲಿ ಶಿವರಾಜ್ ಪಾಟೀಲ್ ರವರು ಗೃಹಮಂತ್ರಿಯಿದ್ದ ಸಂದರ್ಭದಲ್ಲಿ ಗೋವಾ ಮತ್ತು ಕರ್ನಾಟಕದ ನಡುವೆ ಒಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. 40 ಕ್ಕೂ ಹೆಚ್ಚು ವರ್ಷಗಳಿಂದ ವಾಸಿಸುತ್ತಿರುವ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಿಕೊಟ್ಟೇ ಅವರ ಮನೆಗಳನ್ನು ತೆರವುಗೊಳಿಸುತ್ತೇವೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ರವರು ಲಿಖಿತವಾಗಿ ಒಪ್ಪಂದಕ್ಕೆ ಸಹಿಹಾಕಿದ್ದರು. ಆದರೆ ಆ ಒಪ್ಪಂದವನ್ನು ಪರೀಕರ್ ರವರು ಗಾಳಿಗೆ ತೂರಿದ್ದಾರೆ. ಗೋವಾದಲ್ಲಿನ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕೊಡದೆಯೇ ಒಕ್ಕಲೆಬ್ಬಿಸಲಾಗುತ್ತಿದೆ. ಈಗಲಾದರೂ ಗೋವಾ ಮುಖ್ಯಮಂತ್ರಿಗಳು ಆ ಒಪ್ಪಂದದಂತೆ ನಡೆದುಕೊಳ್ಳಬೇಕು, ಈ ಎಲ್ಲ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕು. ಇಲ್ಲವಾದರೆ ಗೋವಾ ಸರ್ಕಾರವು ಈ ಕನ್ನಡಿಗರಿಗೆ ಗೋವಾದಲ್ಲಿ ಜಾಗವನ್ನಾದರೂ ನೀಡಿದರೆ ನಾವು ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರಿ ಆ ಜಾಗದಲ್ಲಿ ಕನ್ನಡಿಗರಿಗೆ ಮನೆಕಟ್ಟಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಇದ್ಯಾವುದೂ ಸಾಧ್ಯವಾಗದ ಪಕ್ಷದಲ್ಲಿ ಕರ್ನಾಟಕ ಸರ್ಕಾರ ಈ ನಿರಾಶ್ರಿತ ಕನ್ನಡಿಗರಿಗೆ ಜಾಗವನ್ನಾದರೂ ನೀಡಿದರೆ ಈ ನಿರಾಶ್ರಿತರು ಅಲ್ಲಿ ಗುಡಿಸಲನ್ನಾದರೂ ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಇಲ್ಲವಾದರೆ ಪ್ರಧಾನಮಂತ್ರಿಗಳು ಹಾಗೂ ಗೃಹಸಚಿವರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆವಹಿಸಿ ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಶ್ರೀಗಳು ಆಘ್ರಹಿಸಿದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ್ರೊಂದಿಗೆ ನಾನು ಮಾತನಾಡಿದ್ದೇನೆ. ಗೋವಾ ಸರ್ಕಾರ ಜಾಗವನ್ನು ಕೊಟ್ಟರೆ ನಮ್ಮ ಕರ್ನಾಟಕ ಸರ್ಕಾರದಿಂದ ಅಲ್ಲಿ ಕನ್ನಡಿಗರಿಗೆ ಮನೆ ಕಟ್ಟಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಒಂದುವೇಳೆ ಗೋವಾ ಸರ್ಕಾರ ಜಾಗವನ್ನೂ ನೀಡದಿದ್ದರೆ ಕರ್ನಾಟಕ ಸರ್ಕಾರದ ಮೂಲಕವಾಗಿಯೇ ಆ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಲು ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ಸರ್ಕಾರದ ಪರವಾಗಿ ಎಂ.ಬಿ. ಪಾಟೀಲ್ ರವರು ಭರವಸೆ ನೀಡಿದ್ದಾರೆ. ಇದರಿಂದಾಗಿ ಈ ಹಿಂದಿನಂತೆ ಆಗಲು ನಾವು ಬಿಡುವುದಿಲ್ಲ. ಬೈನಾ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿಕೊಟ್ಟೇ ಕೊಡುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ನುಡಿದರು.
ಈಗಿನ ಗೋವಾ ಸರ್ಕಾರದಂತೆ ಬಹುಶಃ ದೇಶದಲ್ಲಿ ಯಾವ ಸರ್ಕಾರವೂ ಇಲ್ಲ. ಕರ್ನಾಟಕದಲ್ಲಿ ನಾವು ಟಿಬೇಟಿಯನ್ ಜನರಿಗೆ ನಾವು ವಸತಿ ಕಲ್ಪಿಸಿಕೊಟ್ಟಿದ್ದೇವೆ. ತಮಿಳರಿಗೂ ಸ್ಥಳಕೊಟ್ಟಿದ್ದೇವೆ. ಆದರೆ ಅವರೆಲ್ಲರನ್ನ ಒಕ್ಕಲೆಬ್ಬಿಸುವ ಕೃತ್ಯವನ್ನು ಕರ್ನಾಟಕ ಸರ್ಕಾರ ಎಂದೂ ಮಾಡಿಲ್ಲ. ಆ ನಿಟ್ಟಿನಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ರವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. 2014 ರಲ್ಲಿ ನಾವು ಹಾಗೂ ಆರ್.ವಿ. ದೇಶಪಾಂಡೆಯವರು ಪರೀಕರ್ ರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುತ್ತೇವೆ ಎಂದು ಮಾತುಕೊಟ್ಟಿದ್ದರು. 2015 ರಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದ ಲಕ್ಷ್ಮೀಕಾಂತ ಪಾರ್ಸೇಕರ್ ರವರು ಕೂಡಾ ಮಾತುಕೊಟ್ಟಿದ್ದರು. ಗೋವಾ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಶ್ರೀಗಳು ಗೋವಾ ಸರ್ಕಾರವನ್ನು ಆಘ್ರಹಿಸಿದರು.
ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕೊಡಿಸುವುದಾಗಿ ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಪ್ರಭಾಕರ ಕೋರೆಯವರೂ ಕೂಡ ಈ ಕನ್ನಡಿಗರಿಗೆ ಮಾತುಕೊಟ್ಟಿದ್ದರು. ಇದರಿಂದಾಗಿ ಕೊಟ್ಟ ಮಾತನ್ನು ಉಳಿಸಿಕೊಂಡು ಅವರು ಗೋವಾ ಸರ್ಕಾರದ ಮನವೊಲಿಸಿ ಬೈನಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಆಘ್ರಹಿಸಿದರು.
Leave a Comment