ಹಳಿಯಾಳ ;
ಅತಿಥಿ ಉಪನ್ಯಾಸಕರ ಕೊರತೆಯ ಕಾರಣ ಪಾಠಗಳು(ಸಿಲೆಬಸ್) ಪೂರ್ಣ ಆಗದಿರುವುದರಿಂದ ಕರ್ನಾಟಕ ವಿಶ್ವ ವಿದ್ಯಾಲಯವು ಅಕ್ಟೋಬರ್ ತಿಂಗಳಿನ 23 ರಿಂದ ಆರಂಭಿಸಲು ಉದ್ದೇಶಿಸಿರುವ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಹಳಿಯಾಳದ ಹವಗಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲದಾರ ವಿದ್ಯಾದರ ಗುಳಗುಳಿ ಅವರಿಗೆ ಸಲ್ಲಿಸಿದರು.
ಮಂಗಳವಾರ ಈ ಬಗ್ಗೆ ಸಭೆ ನಡೆಸಿದ ವಿದ್ಯಾರ್ಥಿಗಳು ಮಹಾವಿದ್ಯಾಲಯದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿರುವ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಕೊರತೆಯ ಕಾರಣ ಕಳೆದ ಒಂದೂವರೆ ತಿಂಗಳಿನ ಅವಧಿಯಲ್ಲಿ ನಿಗದಿತ ಸಿಲೆಬಸ್ ಮುಗಿಯದೇ ಕೇವಲ ಒಂದೆರಡು ಪಾಠಗಳು ಮಾತ್ರ ಮುಗಿದಿದ್ದು ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಅಕ್ಟೋಬರ 23 ರಿಂದ ಪದವಿಯ ಪರೀಕ್ಷೆಯನ್ನು ನಡೆಸುವುದಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯಲು ಅಸಾಧ್ಯವಾಗಿದ್ದು ಇಗಾಗಲೇ ಪ್ರಕಟಿಸಿದ ಪರೀಕ್ಷೆಗಳನ್ನು ನವೆಂಬರ್ 25ರ ನಂತರ ನಡೆಸುವಂತೆ ಒತ್ತಾಯಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯವು ಸ್ಥಳೀಯ ಕಾಲೇಜಿನ ಪರಿಸ್ಥಿತಿಯನ್ನು ಅವಲೋಕಿಸಿ ಪರೀಕ್ಷೆಗಳನ್ನು ಮುಂದೂಡಲು ಮೀನಮೇಷ ಎಣಿಸಿದರೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಹಾದಿಯನ್ನು ತುಳಿಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಲಾಗಿದೆ.
ಮೆರವಣಿಗೆಯ ನೇತೃತ್ವವನ್ನು ವಿದ್ಯಾರ್ಥಿ ಮುಖಂಡರಾದ ರೋಹನ್ ಕಡಬಕಟ್ಟಿ, ವಿಜಯ ಬೂದಪ್ಪನ್ನವರ, ಚೇತನ ಅಷ್ಟೇಕರ, ಕುಮಾರ ಮಿಂಡೋಳ್ಕರ, ಅಪ್ಪಾಸಾಹೇಬ ಹುಂಡೇಕರ, ಅಕ್ಷಯ ಬಾಳೇಕುಂದ್ರಿ, ಸಾಗರ ಕಾಜಗಾರ, ಅಶ್ವಿನ್ ಶೆಟ್ಟಿ, ಅಕ್ಷತಾ ಅಂಗ್ರೋಳ್ಳಿ, ಸೌಮ್ಯ ಅಂಗ್ರೋಳ್ಳಿ, ಶೃತಿ ಹುಲಿಕಟ್ಟಿ ಇತರರು ವಹಿಸಿದ್ದರು.
Leave a Comment