ಕಾರವಾರ:
ಕೆಸಲ್ ಎಕ್ಸ್ಪೋಟ್ರ್ಸ್ ಪ್ರೈ.ಲಿ. ಕಂಪೆನಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಒಮ್ಮೆಲೆ ಕೆಲಸದಿಂದ ತೆಗೆದುಹಾಕಿರುವ ಕ್ರಮವನ್ನು ಖಂಡಿಸಿ ಕಾರ್ಮಿಕರು ಹಾಗೂ ಅವರ ಕುಟುಂಬದವರು ಬೈತಖೋಲ್ ಬಳಿ ಇರುವ ಕಂಪೆನಿ ಗೇಟ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರಿಗೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಿದ್ದ ಕಂಪೆನಿ ಈಗ ಮತ್ತೊಂದು ನೋಟಿಸ್ ನೀಡಿ ಕೆಲಸದಿಂದ ವಜಾ ಮಾಡಿರುವ ಬಗ್ಗೆ ತಿಳಿಸಿದೆ. ಇದರಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರು ಅತಂತ್ರರಾಗಿದ್ದಾರೆ. ಈ ಬಗ್ಗೆ ಕಂಪೆನಿಯ ವ್ಯವಸ್ಥಾಪಕರನ್ನು ಕೇಳಲು ಹೊದರೆ ಅವರು ಕೂಡ ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ. ಕಂಪೆನಿ ನೀಡಿದ ನೋಟಿಸ್ ಪತ್ರಗಳನ್ನು ಗೇಟ್ಗೆ ಹಚ್ಚಿದ್ದು, ಕಳೆದ ಹತ್ತಾರು ವರ್ಷಗಳಿಂದ ದಿನವಿಡಿ ದುಡಿದ ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಂಪೆನಿ ವಿರುದ್ಧ ಘೋಷಣೆ ಕೂಗಿದರು.
ಹದಿನಾರು ವರ್ಷಗಳಿಂದ ಕಂಪೆನಿಯಲ್ಲಿ 10 ಮಂದಿ ಕೆಲಸ ಮಾಡುತಿದ್ದೇವು. ಆರಂಭದಲ್ಲಿ ಪ್ರತಿಯೊಬ್ಬರಿಗೆ ಕೇವಲ 1,800 ರೂ ಸಂಬಳ ನೀಡಲಾಗುತ್ತಿತ್ತು. ಆದರೆ ತೀರಾ ಕಡಿಮೆ ಸಂಬಳ ಇರುವ ಕಾರಣ ಸಂಬಳ ಹೆಚ್ಚಿಸುವಂತೆ ಒತ್ತಾಯಿಸಿದ್ದೇವು. ಬಳಿಕ ಇಲ್ಲಿನ ಕೆಲಸ ಮಾಡುವ 10 ಜನರು ಸೇರಿ ಸಂಘವನ್ನು ರಚಿಸಿಕೊಂಡು ನಮಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದರು. ಬಳಿಕ ಸಂಬಳವನ್ನು 11 ಸಾವಿರಕ್ಕೆ ಎರಿಸಿದ್ದರು. ಆದರೆ ಸಂಘವನ್ನು ರಚಿಸಿಕೊಂಡು ನಮ್ಮ ಸೌಲಭ್ಯಗಳ ಬಗ್ಗೆ ಕೇಳುತ್ತಿರುವುದನ್ನು ಸಹಿಸದ ಕಂಪೆನಿಯವರು ಬಳಿಕ ನಮಗೆ ಆಗಾಗ ಕಿರುಕುಳ ನೀಡುತ್ತಿದ್ದರು ಎಂದು ಕಾರ್ಮಿಕ ಸಂತೋಷ ದೂರಿದರು.
ಕಂಪೆನಿಗೆ 5 ನಿಮಿಷ ತಡವಾಗಿ ಬಂದರು ಒಂದು ಹೊತ್ತಿನ ಕೆಲಸದ ಸಂಬಳವನ್ನು ಕಡಿತಗೊಳಿಸುತ್ತಾರೆ. ಆದರೆ ಆ ದಿನ ದಿನವಿಡಿ ಕೆಲಸ ಮಾಡಬೇಕು. ಕೆಲಸ ಮಾಡುವಾಗ ಹೆಲ್ಮೇಟ್, ಬೂಟು, ಬಟ್ಟೆ ಸೇರಿದಂತೆ ಯಾವುದೇ ಸುರಕ್ಷತಾ ಪರಿಕರಗಳನ್ನು ನೀಡುವುದಿಲ್ಲ. ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದಿಲ್ಲ. ಪಿಎಫ್, ಇಎಸ್ಐ, ಮೆಡಿಕಲ್ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಆದರೆ ಕಂಪೆನಿ ಕರೆದ ಸಮಯಕ್ಕೆಲ್ಲ ಬಂದು ಕೆಲಸ ನಿರ್ವಹಿಸಬೇಕು. ಇಷ್ಟಾದರು ಕಾರ್ಮಿಕರಿಗೆ ಒಂದು ಡ್ರೆಸಿಂಗ್ ರೂಮ್ ನಿರ್ಮಿಸಲಿಲ್ಲ. ಈ ಬಗ್ಗೆ ಕೇಳಿದರೆ ಇಲ್ಲ ಸಲ್ಲದ ಕಾರಣ ಹೇಳಿ ನೋಟಿಸ್ ನೀಡಿ ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಂಪೆನಿಯು ಉತ್ತಮ ಲಾಭದಲ್ಲಿದೆ. ಕಳೆದ ಐದು ದಿನಗಳಿಂದಷ್ಟೆ ಯಾವುದೇ ವ್ಯವಹಾರವಿಲ್ಲ. ಆದರೆ ಈ ಹಿಂದೆ ಉತ್ತಮ ವ್ಯವಹಾರ ನಡೆಸಿರುವ ಬಗ್ಗೆ ರಾಜ್ಯಮಟ್ಟದ ಮೂರು ಪ್ರಶಸ್ತಿಗಳು ಲಭ್ಯವಾಗಿದೆ. ಕಂಪೆನಿಯವರಿಗೆ ನಾವು ಸಂಘವನ್ನು ಕಟ್ಟಿಕೊಂಡಾಗಿನಿಂದ ನಮ್ಮ ಮೇಲೆ ಒಂದಲ್ಲ ಒಂದು ಕಾರಣ ನೀಡಿ ಕಿರುಕುಳ ನೀಡುತ್ತಿದ್ದರು. ಅದರಂತೆ ಸಂಘದ ಅಧ್ಯಕ್ಷರನ್ನು ವರ್ಷದ ಹಿಂದೆ ವಜಾಗೊಳಿಸಿದ್ದರು. ಅಲ್ಲದೆ ಕಳೆದ ಕೆಲ ತಿಂಗಳ ಹಿಂದೆ ಮೂರು ಜನರಿಗೆ ಇದೆ ರಿತಿ ನೋಟಿಸ್ ನೀಡಿ ವಜಾ ಮಾಡಿದ್ದರು. ಇದೀಗ ಕಂಪೆನಿಯು ಉಳಿದ ಆರು ಮಂದಿಗೂ ನೋಟಿಸ್ ನೀಡಿದ್ದು ಇದೀಗ ಕೆಲಸವಿಲ್ಲ ಅತಂತ್ರರಾಗಿದ್ದೇವೆ ಎಂದು ದೂರಿದರು.
ಕೂಡಲೇ ಕಂಪನಿ ವಜಾಗೊಳಿಸಿದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡು ಅವರಿಗೆ ನೀಡಬೇಕಾದ ಸೌಲಭ್ಯ ಹಾಗೂ ಕನಿಷ್ಠ ವೇತನವನ್ನು ನೀಡಬೇಕು. ಇಲ್ಲವಾದಲ್ಲಿ ಕಂಪೆನಿಯನ್ನು ಇಲ್ಲಿ ಬಂದ್ ಮಾಡಬೇಕು. ಇದಾವುದನ್ನು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
Leave a Comment