ಮನೆಯಲ್ಲಿನ ಹಸಿ ತ್ಯಾಜ್ಯಗಳನ್ನೇ ಬಳಿಸಿಕೊಂಡು ಉತ್ತಮ ಸಾವಯವ ಗೊಬ್ಬರ ತಯಾರಿಸಿ ತಮ್ಮ ಮನೆಯ ಸುತ್ತಮುತ್ತಲಿನ ಮರಗಿಡಗಳಿಗೆ ಉತ್ತರ ಗೊಬ್ಬರ ತಯಾರಿಸಿಕೊಂಡು ತ್ಯಾಜ್ಯ ನಿರ್ವಹಣೆ ಮಾಡುವುದರಲ್ಲಿ ಈ ನಿವೃತ್ತ ಶಿಕ್ಷಕರೊಬ್ಬರು ಎಲ್ಲೆಂದರಲ್ಲಿ ಎಸೆಯುವರಿಗೆ ಮಾದರಿಯಾಗಿದ್ದಾರೆ.
ಕಾರವಾರ ತಾಲೂಕಿನ ಖಾಲ್ವಾಡೇಕರ್ ವಾಡದ ನಿವಾಸಿಯಾಗಿರುವ ವಿಠೋಬಾ ಆರ್. ರಾಣೆ ಅವರೇ ಪೈಪ್ ಕಂಪೋಸ್ಟ್ ಮಾದರಿ ಸಾಹಸಕ್ಕೆ ಕೈ ಹಾಕಿದ್ದವರು. ಆಹಾರ ಸೇವನೆ ಬಳಿಕ ಉಳಿದ ತ್ಯಾಜ್ಯಗಳನ್ನು ಉತ್ತಮ ಗೊಬ್ಬರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. 5 ಅಡಿ ಎತ್ತರದ ಹಾಗೂ 10 ಇಂಚು ಸುತ್ತಳತೆಯ ನಾಲ್ಕು ಸಿಮೆಂಟ್ ಪೈಪ್ಗಳನ್ನು ತೋಟದಲ್ಲಿ ಅಳವಡಿಸಿ, ಕಳೆದ 2 ವರ್ಷಗಳಿಂದ ಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ. ಪೈಪ್ನ ಅರ್ಧ ಅಡಿ ಭಾಗವನ್ನು ಭೂಮಿಗೆ ಹುದುಗಿಸಿ ಲಂಬವಾಗಿ ನಿಲ್ಲಿಸುತ್ತಾರೆ. ತ್ಯಾಜ್ಯಗಳನ್ನು ಪೈಪ್ಗಳಲ್ಲಿ ಹಾಕುವ ಪೂರ್ವದಲ್ಲಿ ಎರೆಹುಳುಗಳನ್ನು ಆಕರ್ಷಿಸಲು ಪೈಪ್ನ ತಳಭಾಗಕ್ಕೆ ಸಗಣಿ ಹಾಗೂ ಬೆಲ್ಲ ಹಾಕುತ್ತಾರೆ. ಬಳಿಕ ಅಡುಗೆ ಕೋಣೆಯಲ್ಲಿ ನಿತ್ಯ ಉತ್ಪತ್ತಿಯಾದ ಹಸಿ ತ್ಯಾಜ್ಯವನ್ನು ಮೇಲ್ಭಾಗದಿಂದ ಪೈಪ್ನಲ್ಲಿ ಹಾಕುತ್ತಾರೆ.
ಅದೇ ಪ್ರಕಾರ ನಾಲ್ಕು ಪೈಪ್ಗಳನ್ನು ಅವರು ಅಳವಡಿಸಿಕೊಂಡಿದ್ದು ಪ್ರತಿ ಪೈಪ್ಗಳಿಗೆ 1, 2, 3, 4 ಎಂದು ಸಂಖ್ಯೆ ನೀಡಿದ್ದಾರೆ. ಒಂದು ಪೈಪ್ ಭರ್ತಿಯಾಗಲು ನಾಲ್ಕು ತಿಂಗಳ ಕಾಲಾವಧಿ ಬೇಕಾಗಿದ್ದು ಒಂದು ಪೈಪ್ ತುಂಬಿತ ನಂತರ ಇನ್ನೊಂದು ಪೈಪ್ಗೆ ತ್ಯಾಜ್ಯಗಳನ್ನು ಹಾಕುತ್ತಾರೆ. ಮೀನಿನ ತ್ಯಾಜ್ಯ ಹಾಕಿದ್ದಾಗ ಅದರ ಮೇಲೆ ಸ್ವಲ್ಪ ಮಣ್ಣನ್ನು ಹಾಕುತ್ತೇವೆ. ಇದರಿಂದ ಯಾವುದೇ ದುರ್ವಾಸನೆ ಕೂಡ ಬರುವುದಿಲ್ಲ. ಪೈಪ್ನಲ್ಲಿ ಭರ್ತಿಯಾದ ಹಸಿ ತ್ಯಾಜ್ಯ ನಾಲ್ಕು ತಿಂಗಳಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತನೆ ಆಗುತ್ತದೆ. ಅಡಿಗೆ ತ್ಯಾಜ್ಯಗಳನ್ನು ಹಾಕಿದ ಉತ್ತಮ ಗೊಬ್ಬರ ಪಡೆಯಬಹುದು ಎನ್ನುತ್ತಾರೆ ವಿಠೋಬಾ ರಾಣೆ ಅವರು. ಗೊಬ್ಬರನ್ನು ತೋಟದ ಗಿಡ, ಮರಗಳಿಗೆ ಬಳಕೆ ಮಾಡುತ್ತಿದ್ದೇನೆ. ಅಲ್ಲದೇ ನೆಲದ ಮೇಲೆ ಬಿದ್ದ ಒಣ ಎಲೆಗಳನ್ನು ಸಂಗ್ರಹಿಸಿ, ಅದರಿಂದಲೂ ಪ್ರತ್ಯೇಕವಾಗಿ ಗೊಬ್ಬರ ತಯಾರಿಸುತ್ತಾರೆ.
ಅಡುಗೆ ಕೋಣೆಯಲ್ಲಿ ಉತ್ಪತ್ತಿಯಾದ ತರಕಾರಿ ತ್ಯಾಜ್ಯ, ಆಹಾರ ತ್ಯಾಜ್ಯವನ್ನು ಬಿಸಾಡುವ ಬದಲು ಅದನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ರೀತಿಯನ್ನು ಅವರು `ಪೈಪ್ ಕಂಪೋಸ್ಟ್’ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು 24 ಗುಂಟೆಯೊಳಗೆ ವಾಸಕ್ಕೆ ಒಂದು ಪುಟ್ಟ ಮನೆಯೊಂದನ್ನು ಕಟ್ಟಿಕೊಂಡಿದ್ದು, ಇನ್ನುಳಿದ ವಿಸ್ತಾರವಾದ ಜಾಗದಲ್ಲಿ ತೋಟ ಮಾಡಿದ್ದಾರೆ.
60 ತೆಂಗಿನ ಮರ, 25ರಿಂದ 30 ಅಡಿಕೆ ಮರ, ಮಾವಿನ ಮರ, ಬಾಳೆಗಿಡಗಳನ್ನು ಹಾಕಿದ್ದಾರೆ. ಜತೆಗೆ ತರಕಾರಿ ಹಾಗೂ ಹೂವಿನ ಗಿಡಗಳನ್ನು ಸಹ ಬೆಳೆಸಿದ್ದಾರೆ. ತೋಟದಲ್ಲಿ 18 ಅಡಿ ಆಳದ ತೆರೆದ ಬಾವಿಯಿದ್ದು, ನೀರಿಗೆ ಯಾವುದೇ ಭರವಿಲ್ಲ. ಅಲ್ಲದೆ ತಮ್ಮ ತೋಟದ ಮರಗಿಡಗಳ ಎಲೆಗಳನ್ನು ಒಂದೆಡೆ ತೊಟ್ಟಿಯಲ್ಲಿ ಸಂಗ್ರಹಿಸುತ್ತಾರೆ. ವರ್ಷಕ್ಕೆ 2 ಅಥವಾ 3 ಬಾರಿ ತೊಟ್ಟಿಯನ್ನು ತೆರೆದು ಎಲೆಯ ಗೊಬ್ಬರವನ್ನು ಹೊರ ತೆಗೆಯುತ್ತಾರೆ. ಅಷ್ಟರಲ್ಲಿ ಎಲೆಗಳು ಕೊಳೆತು ಉತ್ತಮ ಗೊಬ್ಬರವಾಗಿ ಪರಿವರ್ತನೆಯಾಗಿರುತ್ತವೆ. ಅದನ್ನು ಸಹ ಸಾವಯವ ಗೊಬ್ಬರವಾಗಿ ಬಳಕೆ ಮಾಡಿಕೊಳ್ಳುತ್ತಾರೆ.
ಹಸಿ ತ್ಯಾಜ್ಯದಿಂದ ಕಡಿಮೆ ಖರ್ಚಿನಲ್ಲಿ ಮನೆಯ ಅಂಗಳದಲ್ಲೇ ಗೊಬ್ಬರ ತಯಾರಿಸಬಹುದು. ಇದನ್ನು ಎಲ್ಲರೂ ಅನುಸರಿಸಿದರೆ ತ್ಯಾಜ್ಯ ನಿರ್ವಹಣೆ ಸುಲಭವಾಗುತ್ತದೆ. ಇದರಿಂದ ಮನೆಯ ತ್ಯಾಜ್ಯದಿಂದ ಉತ್ತಮ ಗೊಬ್ಬರವೂ ಪಡೆಯಬಹುದು ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದು ತಪ್ಪುತ್ತದೆ ಎನ್ನುತಾರೆ ನಿವೃತ್ತ ಶಿಕ್ಷಕ ವಿಠೋಬಾ ರಾಣೆ ಅವರು. ಅಷ್ಟೇ ಅಲ್ಲದೆ ಬಾಡದ ಶಿವಾಜಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ವಿಠೋಬಾ ಅವರು 2 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದಾರೆ. ಉತ್ತಮ ಸೇವೆಯನ್ನು ಪರಿಗಣಿಸಿ ಅವರಿಗೆ ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಗಳು ಅವರ ಪಾಲಾಗಿದ್ದು ಅವರ ಸೇವೆಯನ್ನು ಸ್ಮರಿಸಿ ವಿವಿಧ ಸಂಘ-ಸಂಸ್ಥೆಗಳು ಅವರಿಗೆ ಸನ್ಮಾನಿಸಿದೆ.
– ಸಂತೋಷ ಗುರುಮಠ
Leave a Comment