ಕಾರವಾರ: ಕುಮಟಾದ ಮಣಕಿಯಲ್ಲಿ ನ.21ರಂದು ನಡೆಯಲಿರುವ ಮೀನುಗಾರರ ಸಮಾವೇಶಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದು, ಮೀನುಗಾರರ ವಿವಿಧ ಸಮಸ್ಯೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಗುವದು ಎಂದು ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯು.ಆರ್. ಸಭಾಪತಿ ತಿಳಿಸಿದರು.
ಶನಿವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಎಂಟು ತಿಂಗಳ ಹಿಂದೆ ಹೊಸದಾಗಿ ಸಮಿತಿಯನ್ನು ರಚಿಸಲಾಗಿದ್ದು ಇದು ಮೀನುಗಾರರ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು. ಅಂತರಾಷ್ಟ್ರೀಯ ಮೀನುಗಾರರ ದಿನದ ಅಂಗವಾಗಿ ಮಣಕಿಯಲ್ಲಿ ರಾಜ್ಯ ಸಮಾವೇಶ ನಡೆಸಲಾಗುತ್ತಿದೆ. ಮೀನುಗಾರಿಗೆಗೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ಪ್ರತ್ಯೇಕ ನೀತಿ ಅನುಷ್ಟಾನ ಮಾಡಬೇಕು ಎಂಬ ಬೇಡಿಕೆಯನ್ನು ಸಮಾವೇಶದಲ್ಲಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಮೀನುಗಾರಿಕಾ ನೀತಿಗಳಿದ್ದು, ಇದರಿಂದ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಷ್ಟ್ರದೆಲ್ಲಡೆ ಏಕರೂಪದ ನೀತಿ ಇದ್ದರೆ ಎಲ್ಲಾ ಮೀನುಗಾರರಿಗೂ ಅನುಕೂಲವಾಗುತ್ತದೆ ಎಂದರು. ಕೇಂದ್ರ ಸರ್ಕಾರದಲ್ಲಿ ಕೃಷಿ ಜೊತೆ ಮೀನುಗಾರಿಕಾ ಇಲಾಖೆಯನ್ನು ವಿಲಿನಗೊಳಿಸಲಾಗಿದೆ. ಇದರಿಂದ ಮೀನುಗಾರರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತಿಲ್ಲ. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಒದಗಿಸಬೇಕು ಎಂಬ ಬೇಡಿಕೆಯಿದೆ ಎಂದು ಹೇಳಿದರು. ಮೀನುಗಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಮೀನುಗಾರಿಕಾ ದೋಣಿಗಳಿಗೆ ಬಳಸುವ ಡಿಸೈಲ್ಗೆ ತೆರಿಗೆ ವಿಧಿಸಬಾರದು. ಕೃಷಿಕರ ಸಾಲ ಮನ್ನಾ ಮಾಡಿದಂತೆ ಮೀನುಗಾರರ ಸಾಲವನ್ನು ಕೂಡ ಮನ್ನಾ ಮಾಡಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಗುವದು ಎಂದು ಹೇಳಿದರು. ಇನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಮಹಿಳಾ ಸಮಾವೇಶ ನಡೆಯಲಿದೆ. ಸಂಘಟನೆ ದೃಷ್ಟಿಯಿಂದ ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದೆ ಎಂದರು. ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೇ ಇತರರಿದ್ದರು.
Leave a Comment